ಸೋಮಣ್ಣ ಸೋತಿದ್ದು ಕಾಂಗ್ರೆಸ್ ಗ್ಯಾರಂಟಿಗಳಿಂದಲ್ಲ: ಬಿಜೆಪಿ ಕಾರ್ಯಕರ್ತರು
ಚಾಮರಾಜನಗರ, ಜೂನ್, 22: ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದು ಬಿಜೆಪಿಯು ಸೋಲಿನ ಪರಾಮರ್ಶೆ ಸಭೆಯನ್ನು ನಡೆಸಿತು. ಸಭೆ ಆರಂಭದಲ್ಲೇ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ನಡುವೆಯೇ ವಾಗ್ವಾದಗಳು ಏರ್ಪಟಿದ್ದು, ಈ ವೇಳೆ ಕೆಲವರು ಸೋಮಣ್ಣ ಅವರು ಸೋತಿದ್ದು ಗ್ಯಾರಂಟಿಗಳಿಂದಲ್ಲ, ಬಿಜೆಪಿ ನಾಯಕರಿಂದ ಎಂದು ವಾದ ಮಾಡಿದ ಘಟನೆಯೂ ನಡೆಯಿತು.
ಸೋಮಣ್ಣ ಅನುಯಾಯಿಗಳು ಸಭೆಯಲ್ಲಿ ತಮಗೂ ಮಾತನಾಡಲು ಅವಕಾಶ ಕೊಡಬೇಕು. ಚಾಮರಾಜನಗರದಲ್ಲಿ ಸತತ ಮೂರನೇ ಬಾರಿ ಬಿಜೆಪಿ ಸೋತಿದೆ, ಮೊದಲ ಬಾರಿ ಸೋತಾಗಾಲೂ ಹೀಗೆ ಹೇಳಿದ್ದೀರಿ, ಎರಡನೇ ಬಾರಿ ಸೋತಾಗಲೂ ಪರಾಮರ್ಶೆ ಅಂದಿದ್ದೀರಿ. ಈಗಲೂ ಅದನ್ನೇ ಮಾಡುತ್ತೀದ್ದೀರಿ.? ಹಾಗೆಯೇ ಕಾಂಗ್ರೆಸ್ ಗ್ಯಾರಂಟಿಗಳಿಂದ ಸೋಮಣ್ಣ ಸೋತಿಲ್ಲ, ಬದಲಾಗಿ ಪಕ್ಷದ ನಾಯಕರಿಂದಲೇ ಅವರು ಸೋತದ್ದು ಎಂದು ಕಿಡಿಕಾರಿದರು.

ಇದೇ ವೇಳೆ ನಾನು ಕೋರ್ ಕಮಿಟಿಯಲ್ಲಿದ್ದೇನೆ, ನಿಮ್ಮ ಅಭಿಪ್ರಾಯಗಳನ್ನು ನಾಯಕರಿಗೆ ಮುಟ್ಟಿಸುತ್ತೇನೆ. ಮುಂದೆ ಈ ರೀತಿ ಆಗಬಾರದು ಎಂದು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡರು ಭರವಸೆ ನೀಡಿದರು. ಇನ್ನು ಕಾರ್ಯಕರ್ತರು ಅಭಿಪ್ರಾಯ ಸಂಗ್ರಹಿಸುವಾಗ ಮಾಧ್ಯಮದವರನ್ನು ಹೊರಗಿಡಲಾಯಿತು.
ಇನ್ನು ಇಂದಿನ ಸಭೆಗೆ ವಿ.ಸೋಮಣ್ಣ ಅವರು ಗೈರಾಗಿದ್ದರು. ಈ ಬಗ್ಗೆ ಡಿ.ವಿ.ಎಸ್ ಮಾಧ್ಯಮಗಳೊಂದಿಗೆ ಮಾತನಾಡಿ, ತಾನು ಸಭೆಗೆ ಬರುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ. ಸೋಲಿನ ನೋವಿನಿಂದ ಇನ್ನೂ ಅವರು ಹೊರಬಂದಿಲ್ಲ ಹಾಗೂ ಅವರಿಗೆ ಕೋಪವೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕದ ದುರ್ದೈವದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಂತೆಂತಾ ಮಂತ್ರಿಗಳಿದ್ದಾರೆ. ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎನ್ನುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.
ಕುಣಿಯಲಾರದವ ನೆಲ ಡೊಂಕು ಎಂದ ರೀತಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನವರು ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಘೋಷಣೆಗೂ ಮುನ್ನ ಕಾಂಗ್ರೆಸ್ ಹಾಗೂ ನಾಯಕರಿಗೆ ಪರಿಜ್ಞಾನ ಇರಲಿಲ್ಲವಾ? ಮುಂದೆ ಯಾವ ರೀತಿ ತೊಂದರೆ ಉಂಟಾಗಬಹುದು ಎಂಬ ಚಿಂತನೆ ಇರಲಿಲ್ಲವಾ? 16 ಬಾರಿ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯಗೆ ಮುಂದಾಲೋಚನೆ ಇರಬೇಕಿತ್ತು, 16 ಬಾರಿ ಬಜೆಟ್ ಮಂಡಿಸಿದರೇ ಗದ್ದೆಯಲ್ಲಿ ಭತ್ತ ಬೆಳೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಅಕ್ಕಿ ಕೊಡದಿರುವ ನೀಚ ಬುದ್ಧಿ ನಮಗಿಲ್ಲ. ಆ ರೀತಿ ಚೀಪ್ ಪಾಲಿಟಿಕ್ಸ್ ಅನ್ನು ನಮ್ಮ ಮುಖಂಡರು, ಕಾರ್ಯಕರ್ತರು ಮಾಡುವುದಿಲ್ಲ. ಕರ್ನಾಟಕದ ಪ್ರತಿಯೊಬ್ಬರಿಗೂ ಅಕ್ಕಿ ಸಿಗಬೇಕೆಂಬುದು ನಾಯಕರ, ಕಾರ್ಯಕರ್ತರ ಆಶಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಅಧಿಕಾರಿಗಳು ಯಾವಾಗ ಬಟ್ಟೆ ಹರಿದುಕೊಳ್ತಾರೋ ಗೊತ್ತಿಲ್ಲ
5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ಸರ್ಕಾರ ಸಾಕಷ್ಟು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ ಎಂದು ಕೊಳ್ಳೇಗಾಲದ ಮಾಜಿ ಶಾಸಕ ಎನ್.ಮಹೇಶ್ ಆರೋಪಿಸಿದರು.
ಚಾಮರಾಜನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅವರು ಮಾತನಾಡಿ, ಗ್ಯಾರಂಟಿ ಜಾರಿಗಾಗಿ ಕಂಡಿಷನ್ಸ್ಗಳನ್ನು ಹಾಕಿ ಗೊಂದಲ ಉಂಟು ಮಾಡಿದೆ. ಇದರಿಂದ ಐಎಎಸ್ ಅಧಿಕಾರಿಗಳು ತಲೆ ಪರಚಿಕೊಳ್ಳುತ್ತಿದ್ದಾರೆ. ಯಾವಾಗ, ಬಟ್ಟೆ ಹರಿದುಕೊಳ್ಳುತ್ತಾರೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ಸಿದ್ದರಾಮಯ್ಯ 10 ಕೆ.ಜಿ. ಅಕ್ಕಿ ಕೊಡಬೇಕು. ಜುಲೈ 1 ರಿಂದ 15 ಕೆ.ಜಿ. ಅಕ್ಕಿ ಕೊಡದಿದ್ದರೇ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಶಕ್ತಿ ಯೋಜನೆ ಎಷ್ಟು ದಿನ ಇರತ್ತೋ ಇಲ್ವೋ ಗೊತ್ತಿಲ್ಲ, ಡೀಸೆಲ್ಗೂ ಅವರ ಬಳಿ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.












Click it and Unblock the Notifications