5 ತಿಂಗಳಲ್ಲಿ ಎರಡನೇ ಬಾರಿ ಕೋಡಿ ಬಿದ್ದ ಚಾಮರಾಜನಗರದ ಅವಳಿ ಜಲಾಶಯಗಳು
ಚಾಮರಾಜನಗರ, ಮೇ 29: ವಾಯುಭಾರ ಕುಸಿತದಿಂದ ಸುರಿದ ಭಾರೀ ಮಳೆಗೆ ಕೆರೆಗಳು ಮೈದುಂಬಿ ಹರಿಯುತ್ತಿವೆ. ಚಾಮರಾಜನಗರದ ಅವಳಿ ಜಲಾಶಯಗಳಾದ ಚಿಕ್ಕಹೊಳೆ ಈ ಹಿಂದೆ ಕೋಡಿ ಬಿದ್ದಿತ್ತು. ಇದೀಗ ಸುವರ್ಣಾವತಿ ಡ್ಯಾಂ ಕೂಡ ಭರ್ತಿಯಾಗಿ ಕೋಡಿ ಬಿದ್ದಿದೆ.
ಕಳೆದ ನವೆಂಬರ್ನಲ್ಲಿ ಹಲವಾರು ವರ್ಷಗಳ ಬಳಿಕ ಕೋಡಿ ಬಿದ್ದಿದ್ದ ಸುವರ್ಣಾವತಿ ಜಲಾಶಯ, ಮತ್ತೆ ಇಂದು ಕೋಡಿ ಬೀಳುವ ಮೂಲಕ 5 ತಿಂಗಳಲ್ಲಿ ಎರಡನೇ ಬಾರಿ ಅವಳಿ ಜಲಾಶಯಗಳು ಕೋಡಿ ಬಿದ್ದಂತಾಗಿದೆ. ಈ ಹಿಂದಿನ ವರ್ಷಗಳಲ್ಲಿ ಮೇ ಮಾಸದಲ್ಲಿ ಕೇವಲ ಅರ್ಧದಷ್ಟು ಮಾತ್ರ ತುಂಬುತ್ತಿದ್ದ ಜಲಾಶಯ ಮೇ ತಿಂಗಳಲ್ಲೇ ಕೋಡಿ ಬೀಳುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಚಿಕ್ಕಹೊಳೆ ಜಲಾಶಯದಲ್ಲಿ 59 ಅಡಿ ನೀರಿದ್ದರೇ ಈ ವರ್ಷ 74 ಅಡಿ ನೀರು ಶೇಖರಣೆಗೊಂಡು ಕೋಡಿ ಬಿದ್ದಿದೆ. ಸುವರ್ಣಾವತಿಯಲ್ಲಿ 33 ಅಡಿ ಇದ್ದ ನೀರು, ಶನಿವಾರದ ವೇಳೆಗೆ 55 ಅಡಿಯಾಗಿ ಕೋಡಿಬಿದ್ದಿದೆ. ಭರ್ತಿಯಾಗಿರುವ ಸುವರ್ಣಾವತಿ ಜಲಾಶಯ ಕಾಣಲು ತಮಿಳುನಾಡಿಗೆ ತೆರಳುವವರು, ಚಾಮರಾಜನಗರ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಮುಗಿ ಬೀಳುತ್ತಿದ್ದಾರೆ.

11 ಸಾವಿರ ಎಕರೆ ಪ್ರದೇಶಕ್ಕೆ ನೀರು
ಕಳೆದ ನವೆಂಬರ್ ನಲ್ಲಿ ಎರಡೂ ಜಲಾಶಯಗಳೂ ಭರ್ತಿಯಾಗಿ ಕ್ರಸ್ಟ್ ಗೇಟ್ ಮೂಲಕ ನೀರನ್ನು ಬಿಡಲಾಗಿತ್ತು. ಅದಾದ ನಂತರ, 5 ತಿಂಗಳಿಗೇ ಅದೂ ಮೇ ನಲ್ಲಿ ಇದೇ ಮೊದಲ ಬಾರಿಗೆ ಅವಳಿ ಜಲಾಶಯಗಳು ಕೋಡಿ ಬಿದ್ದಿವೆ ಎಂದು ಒನ್ ಇಂಡಿಯಾ ಕನ್ನಡಕ್ಕೆ ನೀರಾವರಿ ಇಲಾಖೆ ಅಧಿಕಾರಿ ಮಹಾದೇವಸ್ವಾಮಿ ಮಾಹಿತಿ ನೀಡಿದ್ದಾರೆ.
ಸುವರ್ಣಾವತಿಯು ಒಟ್ಟು 2455 ಅಡಿ ಇದ್ದು, ಸದ್ಯ 2454.5 ಅಡಿ ನೀರಿದೆ. ಇನ್ನು ಚಿಕ್ಕಹೊಳೆಯು 2474 ಅಡಿಯಿದ್ದು, 2473 ಅಡಿ ನೀರಿದೆ. ಈ ಜಲಾಶಯಗಳ ಅಚ್ಚುಕಟ್ಟು ಪ್ರದೇಶವೂ ಜಿಲ್ಲೆಯ ಚಾಮರಾಜನಗರ ತಾಲೂಕಿನ ಒಂದು ಭಾಗವಲ್ಲದೇ ಯಳಂದೂರು, ಕೊಳ್ಳೇಗಾಲ ತಾಲೂಕಿನ ಒಂದಷ್ಟು ಭಾಗದ ರೈತರ ಕೃಷಿ ಭೂಮಿಗೆ ಆಧಾರವಾಗಿದ್ದವು. ಈಗಲೂ ಪೂರ್ಣ ಭರ್ತಿಯಾಗಿ ನೀರು ಬಿಟ್ಟರೆ ಎರಡು ಜಲಾಶಯಗಳಿಂದ ಒಟ್ಟು 11 ಸಾವಿರ ಎಕರೆ ಪ್ರದೇಶಕ್ಕೆ ನೀರನ್ನು ಒದಗಿಸಬಹುದಾಗಿದೆ ಎಂದು ತಿಳಿಸಿದರು.

ನದಿಪಾತ್ರದ ಜನರಿಗೆ ಎಚ್ಚರಿಕೆ
ಕೃಷಿ ಚಟುವಟಿಕೆಗಾಗಿ ನೀರು ಹರಿಸಲಾಗುತ್ತಿತ್ತು. ಆದರೆ, ಜಲಾಶಯ ಭರ್ತಿಯಾಗಿ ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊರಬಿಡುವ ಸ್ಥಿತಿ ನಿರ್ಮಾಣವಾಗಿರುವುದೆ. 11 ವರ್ಷಗಳ ಬಳಿಕ ಇದು ಎರಡನೇ ಬಾರಿ ಈ ಕ್ರಸ್ಟ್ಗೇಟ್ ಮೂಲಕ ನೀರನ್ನು ಬಿಡಲಾಗಿದೆ. ನದಿಪಾತ್ರದ ಜನರಿಗೂ ಮುಂಜಾಗ್ರತೆಯಿಂದ ಇರುವಂತೆ ಎಚ್ಚರಿಕೆ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

2010ರಲ್ಲಿ ಪ್ರವಾಹ
ಚಾಮರಾಜನಗರ ತಾಲೂಕಿನ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳು 2010ರಲ್ಲಿ ತುಂಬಿ ಉಕ್ಕಿದ್ದವು. ಹೊರ ಹರಿವು ಹೆಚ್ಚಾದ್ದರಿಂದ ನೂರಾರು ಎಕರೆ ಬೆಳೆ ನಷ್ಟವಾಗಿತ್ತು. ಅದಾದ ನಂತರ ಗರಿಷ್ಠ ಮಟ್ಟದ ನೀರು ಶೇಖರಣೆ ಆಗಿರಲಿಲ್ಲ. ನಿರಂತರ ಬರ ಪರಿಸ್ಥಿತಿಯಿಂದಾಗಿ ಜಲಾಶಯಗಳು ಭಣಗುಡುತ್ತಿದ್ದವು. ಆದರೆ ಈ ವರ್ಷ ಮಳೆ ಆಶಾದಾಯಕವಾಗಿದ್ದು, ಅವಳಿ ಜಲಾಶಯಗಳು ಮೈದುಂಬಿದೆ.

ಪ್ರವಾಸಿಗರ ತಾಣ
ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ಚಾ.ನಗರದಿಂದ ತಮಿಳುನಾಡಿನ ಸತ್ಯಮಂಗಲಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲೇ ಇವೆ. ನಗರದಿಂದ 15 ಕಿ.ಮೀ. ಸಾಗಿದರೆ ಎರಡು ಜಲಾಶಯಗಳು ಎದುರುಗೊಳ್ಳುತ್ತವೆ. ಹೀಗಾಗಿ ಇವು ಪ್ರವಾಸಿ ತಾಣವಾಗಿಯೂ ಕಂಗೊಳಿಸುತ್ತಿವೆ. ನೀರಿನ ಮಟ್ಟ ಏರಿಕೆಯಾಗಿರುವ ಕಾರಣ ಜಿಲ್ಲೆಯ ನಾನಾ ಭಾಗ ಹಾಗೂ ಹೊರ ಜಿಲ್ಲೆಯಿಂದಲೂ ಪ್ರವಾಸಿಗರು ಇತ್ತ ಬರುತ್ತಿದ್ದಾರೆ. ಅಲ್ಲದೇ ತಮಿಳುನಾಡಿನತ್ತ ತೆರಳುವ ಪ್ರವಾಸಿಗರ ಸಹ ಈ ಜಲಾಶಯಗಳ ಬಳಿ ಇಳಿದು, ಸ್ವಲ್ಪ ಹೊತ್ತು ಕಾಲ ಕಳೆದು ತೆರಳುತ್ತಿದ್ದಾರೆ.












Click it and Unblock the Notifications