ಬಂಡೀಪುರದಲ್ಲಿ ಪ್ರವಾಸಿಗರ ಹಸಿವು ತಣಿಸಲು ಕಾಡಿನ ಮಧ್ಯೆ ಹಾಡಿ ಕ್ಯಾಂಟೀನ್
ಚಾಮರಾಜನಗರ,
ಡಿಸೆಂಬರ್ 24: ಬಂಡೀಪುರದಲ್ಲಿ ಇದೀಗ ಹಾಡಿ ಜನರು ಕ್ಯಾಂಟೀನ್ ತೆರೆದು ದೂರದಿಂದ ಬರುವ ಪ್ರವಾಸಿಗರ ಹಸಿವು ನೀಗಿಸುವ ಕಾಯಕಕ್ಕೆ ಮುಂದಾಗುವ ಮೂಲಕ ಹೋಟೆಲ್ ಉದ್ಯಮದತ್ತ ತೆರೆದುಕೊಳ್ಳುತ್ತಿದ್ದಾರೆ. id="toptextpromo"> id='are-slot-1' class='oiad oi-axt oiadv'>ಹಾಡಿ
ಜನರು ಅರಣ್ಯ ಉತ್ಪನ್ನಗಳನ್ನು ನಂಬಿ ಬದುಕುತ್ತಿದ್ದ ಕಾಲವಿತ್ತು. ಅರಣ್ಯ ಪ್ರವೇಶ ನಿರ್ಬಂಧಿಸಿದ ಬಳಿಕ ಕೂಲಿ ಕೆಲಸ ಮಾಡಿ ಬದುಕುವುದು ಅನಿವಾರ್ಯವಾಗಿತ್ತು. ಹೀಗಿರುವಾಗಲೇ ಕ್ಯಾಂಟೀನ್ ತೆರೆದು ಬದುಕು ಕಟ್ಟಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. id='are-slot-2' class='oiad oi-axt oiadv'>
ಕಾಡಿನ ಮಧ್ಯೆ ಕ್ಯಾಂಟೀನ್
ಇತ್ತೀಚೆಗಿನ ವರ್ಷಗಳಲ್ಲಿ ಬಂಡೀಪುರಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಿದ್ದರು. ಇವರಿಗೆ ಆಹಾರದ ಸಮಸ್ಯೆ ಎದುರಾಗುತ್ತಿತ್ತು. ಹಸಿವಿನಿಂದಾಗಿ ಪ್ರವಾಸಿಗರು ಪರದಾಡುವಂತಾಗಿತ್ತು. ಹೀಗಾಗಿ ಕಾಡಿನ ಮಧ್ಯೆ ಹಸಿವು ತಣಿಸಲು ಕ್ಯಾಂಪಸ್ಸಿನಲ್ಲಿ ಕ್ಯಾಂಟೀನ್ ತೆರೆಯಲಾಗಿದೆ. ಇದು ಸದ್ಯ ಹಸಿವು ನೀಗಿಸುತ್ತಿರುವುದು ಮಾತ್ರವಲ್ಲದೆ, ಹೀಗೂ ಬದುಕಬಹುದು ಎಂಬ ಆತ್ಮವಿಶ್ವಾಸವನ್ನು ಆದಿವಾಸಿಗರಲ್ಲಿ ಹುಟ್ಟಿಸುತ್ತಿರುವುದು ಗಮನಾರ್ಹವಾಗಿದೆ.
ಹಿಂದೆ ಇಲ್ಲಿಗೆ ಬಂದ ಪ್ರವಾಸಿಗರು ಹೆಚ್ಚಿನ ಹಣ ನೀಡಿದರೂ ಉತ್ತಮ ಆಹಾರ ಸಿಗುತ್ತಿರಲಿಲ್ಲ. ಆಗ ತುಂಬಾ ಪ್ರವಾಸಿಗರು ಬೇಸರದಿಂದ ಪೆಚ್ಚುಮೊರೆ ಹಾಕಿಕೊಂಡು ಹಿಂತಿರುಗುತ್ತಿದ್ದರು. ಹಸಿವಿನಿಂದಾಗಿ ಕಾಡು ಸುತ್ತುವುದು ಅವರಿಗೆ ಕಷ್ಟವಾಗುತ್ತಿತ್ತು. ಈಗ ಅದೆಲ್ಲ ಸಮಸ್ಯೆಗೆ ಇತಿಶ್ರೀ ಹಾಡುವ ಮೂಡಲ ಆದಿವಾಸಿಗಳ ಆಹಾರ ಕ್ರಮ ಪ್ರವಾಸಿಗರಿಗೂ ಇಷ್ಟವಾಗತೊಡಗಿದೆ.

ಮಂಗಳಗ್ರಾಮದ ಕಾರೇಮಾಳದಲ್ಲಿ "ನಮ್ಮ ಕ್ಯಾಂಟೀನ್"
ಬಂಡೀಪುರ ಸಮೀಪದ ಮಂಗಳ ಗ್ರಾಮದ ಕಾರೇಮಾಳ ಹಾಡಿಯ ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ಕ್ಯಾಂಪಸ್ ನಲ್ಲಿ "ನಮ್ಮ ಕ್ಯಾಂಟೀನ್" ಆರಂಭಿಸಲಾಗಿದ್ದು, ಕಡಿಮೆ ಬೆಲೆಗೆ ಶುಚಿ-ರುಚಿಯಾದ ಆಹಾರವನ್ನು ನೀಡುವ ಕಾಯಕ ಮಾಡಲಾಗುತ್ತಿದೆ. ಇಷ್ಟಕ್ಕೂ ಇಲ್ಲಿ ಕ್ಯಾಂಟೀನ್ ಆರಂಭಿಸಲು ತಮಿಳುನಾಡಿನ ಮಧುಮಲೈ ಕ್ಯಾಂಪಸ್ಸಿನಲ್ಲಿ ಗಿರಿಜನರು ತೆರೆದಿರುವ ಕ್ಯಾಂಟೀನ್ ಪ್ರೇರಣೆಯಂತೆ. ಜತೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ ಒ ಬಾಲಚಂದ್ರ ಅವರು ಕೂಡ ಕಾರಣ. ಅವರು ಆದಿವಾಸಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಎನ್.ಟಿ.ಸಿ ಸೂಚನೆಗಳನ್ನು ಗಮನಿಸಿ ಟೆಂಡರ್ ಕರೆಯದೇ ಕಾಡಿನ ಮಕ್ಕಳು ಹೊಟೇಲ್ ಉದ್ಯಮಕ್ಕೆ ಕಾಲಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಬತ್ತು ಸಾವಿರದಿಂದ ಕ್ಯಾಂಟೀನ್ ಆರಂಭ
ಕಾರೆಮಾಳದ ಪರಿಸರ ಅಭಿವೃದ್ಧಿ ಸಮಿತಿಯಲ್ಲಿ ಹದಿನೈದು ಮಂದಿಯಿದ್ದು, ಎಂಬತ್ತು ಸಾವಿರ ರೂ. ನಿಂದ ಕ್ಯಾಂಟೀನ್ ಆರಂಭಿಸಲಾಗಿದೆ. ಅರಣ್ಯ ಇಲಾಖೆಯ ವತಿಯಿಂದ ಪಾತ್ರೆ, ಸಿಲಿಂಡರ್, ತಟ್ಟೆ ಲೋಟಗಳನ್ನು ಒದಗಿಸುವುದರ ಮೂಲಕ ಕಾಡಿನ ಮಕ್ಕಳ ಹೋಟೆಲ್ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿರುವುದು ವಿಶೇಷ.
ಸದ್ಯ ಅಡುಗೆ ಭಟ್ಟರು ಸೇರಿದಂತೆ ಎಂಟು ಮಂದಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲರೂ ಗಿರಿಜನರಾಗಿದ್ದಾರೆ. ಇದರಿಂದ ಬರುವ ಆದಾಯದಲ್ಲಿ ಪರಿಸರ ಅಭಿವೃದ್ಧಿ ಸಮಿತಿಗೆ ಶೇ. 20ರಷ್ಟು ಹಣ ನೀಡಲಿದ್ದು ಉಳಿದ ಹಣವನ್ನು ವೇತನ, ದಿನಸಿಗೆ ಉಪಯೋಗಿಸಲಾಗುತ್ತಿದೆ. ಬೆಳಗ್ಗೆ ಉಪ್ಪಿಟ್ಟು, ಇಡ್ಲಿ, ರೈಸ್ ಬಾತ್, ಪೂರಿ, ಮಧ್ಯಾಹ್ನ ಚಪಾತಿ, ಅನ್ನ ಸಾಂಬಾರ್, ಸಂಜೆ ಸ್ನ್ಯಾಕ್ಸ್, ರಾತ್ರಿ ಊಟ ದೊರೆಯಲಿದೆ.

ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥ
ಕ್ಯಾಂಟೀನ್ ಆರಂಭದಲ್ಲಿ ನಮಗೆ ತೊಂದರೆಯಾದರೂ, ವ್ಯಾಪಾರದಲ್ಲಿ ನಷ್ಟವಾದರೂ ನಾವು ಇದನ್ನು ಮುಂದುವರೆಸಲಿದ್ದು ಈ ಕ್ಯಾಂಟೀನ್ ಅನ್ನು ಲಾಭದತ್ತ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದ್ದಾರೆ ಪರಿಸರ ಅಭಿವೃದ್ಧಿ ಸಮಿತಿ (ಇಡಿಸಿ) ಅಧ್ಯಕ್ಷೆ ಪುಟ್ಟಮ್ಮ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಟಿ.ಬಾಲಚಂದ್ರ ಅವರು ಮಾತನಾಡಿ, ಟೆಂಡರ್ ಕರೆದು ಖಾಸಗಿಯವರು ನಡೆಸುತ್ತಿದ್ದ ಕ್ಯಾಂಟೀನ್ ಗುಣಮಟ್ಟದ ಆಹಾರ ಮತ್ತು ಶುಚಿತ್ವ ಕಾಪಾಡಲು ವಿಫಲವಾದ್ದರಿಂದ ಈ ವರ್ಷ ಟೆಂಡರ್ ರದ್ದುಗೊಳಿಸಿ ಗಿರಿಜನರಿಗೆ ಹೋಟೆಲ್ ನಡೆಸಲು ತರಬೇತಿಗೊಳಿಸಿ ಕ್ಯಾಂಟೀನ್ ತೆರೆಸಲಾಗಿದೆ. ಅವರಿಗೆ ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಶುಚಿ, ರುಚಿಯಾದ ಆಹಾರ ನೀಡಲು ಗಿರಿಜನರಿಗೆ ಸಲಹೆ ನೀಡಲಾಗಿದೆ" ಎಂದು ಹೇಳಿದ್ದಾರೆ.
ಒಟ್ಟಾರೆ ಬಂಡೀಪುರಕ್ಕೆ ತೆರಳಿದವರಿಗೆ ಕೈಗೆಟಕುವ ದರದಲ್ಲಿ ಆಹಾರಗಳು ಲಭಿಸುತ್ತಿರುವುದು ಖುಷಿಯ ವಿಚಾರವಾಗಿದೆ.












Click it and Unblock the Notifications