ಚಾಮರಾಜನಗರಕ್ಕೆ ಕಪ್ಪುಚುಕ್ಕೆಯಾಗುತ್ತಾ ಬೆಂಗಳೂರು ಪೇದೆ ಎಡವಟ್ಟು?
ಚಾಮರಾಜನಗರ, ಮೇ 06: ಕೇರಳ ಮತ್ತು ತಮಿಳುನಾಡಿನ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲಾಡಳಿತ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಹಸಿರು ವಲಯದಲ್ಲಿತ್ತು. ಆದರೆ ಬೆಂಗಳೂರಿನ ಪೊಲೀಸ್ ಪೇದೆಯ ಕೊರೊನಾ ಪಾಸಿಟಿವ್ ಹಿಸ್ಟರಿ ಈಗ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ನಂಜನಗೂಡು ಜುಬಿಲಿಯಂಟ್ ಕಾರ್ಖಾನೆ ನಂಜು ತಾಗಿದ್ದರೂ ಅದನ್ನು ಯಶಸ್ವಿಯಾಗಿ ನಿಭಾಯಿಸಲಾಗಿತ್ತು. ಆದರೆ ಇದೀಗ ಸೋಂಕಿತ ಪೇದೆ ಜಿಲ್ಲೆಯ ಹನೂರು ಸಮೀಪದ ಬೆಳ್ಳತ್ತೂರು ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿದ್ದು ಹೋಗಿರುವುದರಿಂದ ಆತನ ಸಂಪರ್ಕದಲ್ಲಿದ್ದ ಒಟ್ಟು 24 ಜನರನ್ನು ಜಿಲ್ಲಾ ಕ್ವಾರೆಂಟೈನ್ ಕೇಂದ್ರದಲ್ಲಿರಿಸಿ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
24 ಮಂದಿಗೆ ಕ್ವಾರಂಟೈನ್
ಪೊಲೀಸ್ ಪೇದೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾದ ಈ 24 ಮಂದಿಯ ಗಂಟಲು ದ್ರವದ ಮಾದರಿಯನ್ನು ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ಫಲಿತಾಂಶಕ್ಕಾಗಿ ಜಿಲ್ಲಾಡಳಿತ ಕಾಯುತ್ತಿದೆ. ಇವರೆಲ್ಲರ ಫಲಿತಾಂಶ ನೆಗೆಟಿವ್ ಬರಲೆಂದು ಜನ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಇಲ್ಲವೆಂದರೆ ಸಮಸ್ಯೆ ಮತ್ತಷ್ಟು ಕಠಿಣವಾಗಲಿದೆ ಎಂಬ ಆತಂಕವೂ ಜನರಲ್ಲಿ ಮನೆ ಮಾಡಿದೆ.
ಹಸಿರು ವಲಯವಾದರೂ ಚಾಮರಾಜನಗರದಲ್ಲಿ ಮತ್ತೆ 42 ಮಂದಿಗೆ ಕ್ವಾರೆಂಟೈನ್ ಯಾಕೆ?
9 ತಿಂಗಳ ಮಗು ಸೇರಿದಂತೆ 18 ಜನರ ಸಂಪರ್ಕ
ಪೇದೆ ಉಳಿದುಕೊಂಡಿದ್ದ ಗ್ರಾಮವಾದ ಬೆಳ್ಳತ್ತೂರಿನಿಂದ ಸೋಂಕಿತ ಪೇದೆಯ ಸಂಬಂಧಿಕರು ಮತ್ತು ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 9 ತಿಂಗಳ ಮಗು ಸೇರಿ ಒಟ್ಟು 18 ಜನರನ್ನು ಸೋಮವಾರ ಜಿಲ್ಲಾ ಕೇಂದ್ರದ ಕ್ವಾರೆಂಟೈನ್ ಗೆ ಅಂಬುಲೈನ್ಸ್ ಮುಖಾಂತರ ಕಳುಹಿಸಿ ಕೊಡಲಾಗಿತ್ತು. ಮಂಗಳವಾರ 6 ಜನರನ್ನು ಜಿಲ್ಲಾ ಕೇಂದ್ರದ ಕ್ವಾರೆಂಟೈನ್ ಗೆ ಕಳುಹಿಸಿಕೊಡಲಾಗಿದೆ.
ಹಸಿರು ವಲಯವೆಂದು ಆರಾಮಾಗಿದ್ದ ಜಿಲ್ಲೆ
ಈಗಾಗಲೇ ಗ್ರಾಮಕ್ಕೆ ತಹಶೀಲ್ದಾರ್ ನೇತೃತ್ವದ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮುಖಾಂತರ ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ರಾಸಾಯನಿಕ ಔಷಧಿಯನ್ನು ಸಿಂಪಡಿಸಿದ್ದಾರೆ. ಇಷ್ಟು ದಿನ ಚಾಮರಾಜನಗರ ಜಿಲ್ಲೆ ಹಸಿರು ವಲಯವೆಂದು ನಿಟ್ಟುಸಿರುಬಿಡುತ್ತಾ ಕೆಲವೊಂದು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.
ಸರಳ ವಿವಾಹವಾಗಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಚಾಮರಾಜನಗರದ ಜೋಡಿ
ಪೊಲೀಸ್ ಪೇದೆಯಿಂದ ಆವರಿಸಿದ ಆತಂಕ
ಆದರೆ ಬೆಂಗಳೂರು ಮೂಲದ ಪೊಲೀಸ್ ಪೇದೆ ಯಾವುದೇ ಅಧಿಕೃತ ಪಾಸ್ ಇಲ್ಲದಿದ್ದರೂ ತಾನು ಪೊಲೀಸ್ ಎಂಬ ಹೆಸರಿನ ಪ್ರಭಾವ ಬಳಸಿಕೊಂಡು ಮಾಡಿದ ಎಡವಟ್ಟಿನಿಂದ ಜಿಲ್ಲೆಯ ಜನ ಭಯದಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಹನೂರು ಶಾಸಕ ನರೇಂದ್ರ ಪ್ರತಿಕ್ರಿಯಿಸಿ, ಬೆಳ್ಳತ್ತೂರು ಮತ್ತು ಉದ್ದನೂರು ಗ್ರಾಮದ ಜನರು ಅನವಶ್ಯಕವಾಗಿ ಹನೂರಿನತ್ತ ಬಾರದಂತೆ, ಹನೂರು ತಾಲೂಕಿನ ಜನರು ಕೆಲ ದಿನಗಳ ಕಾಲ ಬೆಳ್ಳತ್ತೂರು ಗ್ರಾಮದತ್ತ ತೆರಳದಂತೆ ಮನವಿ ಮಾಡಿದ್ದಾರೆ. ಜತೆಗೆ ಹನೂರು ವ್ಯಾಪ್ತಿಯ ವೈನ್ ಸ್ಟೋರ್ಗಳನ್ನು ಮುಚ್ಚಿಸುವಂತೆಯೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.