ಚಾಮರಾಜನಗರದಲ್ಲಿ ರೋಹಿತ್ ಚಕ್ರತೀರ್ಥ ಭಾವಚಿತ್ರ ಸುಟ್ಟು ಒಕ್ಕಲಿಗರ ಪ್ರತಿಭಟನೆ
ಚಾಮರಾಜನಗರ, ಮೇ 31: ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಚಾಮರಾಜನಗರ ತಾಲೂಕು ಒಕ್ಕಲಿಗರ ಸಂಘದಿಂದ ನಗರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಚಾ.ರಂ. ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ ಹೊರಹಾಕಿದರು. ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿರುವ, ಹುಚ್ಚನಂತೆ ಫೇಸ್ ಬುಕ್ ಪೋಸ್ಟ್ ಹಾಕಿರುವ ರೋಹಿತ್ ಅವರನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ಭಾವಚಿತ್ರಗಳನ್ನು ರಸ್ತೆಯಲ್ಲಿ ಸುಟ್ಟು ಆಕ್ರೋಶ ಹೊರಹಾಕಿದರು.
ಬಸವಣ್ಣನಿಗೂ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ಸಮಿತಿ: ಸ್ವಾಮೀಜಿಗಳಿಂದ ಖಂಡನೆ
ರೋಹಿತ್ ಚಕ್ರತೀರ್ಥ ಅವರ ಹಳೇ ಫೇಸ್ ಬುಕ್ ಪೋಸ್ಟ್ ವೊಂದು ಸದ್ಯ ವೈರಲ್ಲಾಗಿದ್ದು ಕುವೆಂಪು ಅವರನ್ನು ಅವಮಾನಿಸಿದ್ದಾರೆ ಎಂವುದು ಒಂದು ವರ್ಗದ ವಾದವಾದರೇ ಯಾರೋ ಬರೆದಿದ್ದ ಪೋಸ್ಟ್ ನ್ನು ಹಂಚಿಕೊಂಡಿದ್ದೆ ಎಂಬುದು ರೋಹಿತ್ ಪರ ಬ್ಯಾಟ್ ಬೀಸುವವರ ಪ್ರತಿಕ್ರಿಯೆಯಾಗಿದೆ.
ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹ
ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ರಾಜ್ಯಕ್ಕೆ ಮಾಡಿರುವ ಅಪಮಾನವಾಗಿದೆ. ಸರ್ಕಾರ ಕೂಡಲೇ ಪಠ್ಯಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಒಕ್ಕಲಿಗ ಸಂಘ ಒತ್ತಾಯಿಸಿದೆ. ರೋಹಿತ್ ಚಕ್ರತೀರ್ಥನನ್ನು ಪಠ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು. ಸರ್ಕಾರ ಒಂದು ವೇಳೆ ಕ್ರಮ ಕೈಗೊಳ್ಳಲು ವಿಫಲವಾದರೆ ಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪಠ್ಯಪರಿಷ್ಕರಣೆ ವಿವಾದಕ್ಕೆ ಸಿಎಂ ಅಂತ್ಯ ಹಾಡಲಿ: ಬರಗೂರು ರಾಮಚಂದ್ರಪ್ಪ
ಜಗದ ಕವಿ, ಯುಗದ ಕವಿಯೆಂದು ಖ್ಯಾತಿ ಪಡೆದ ಕುವೆಂಪು
ನಾಡಿನ ಆರೂವರೆ ಕೋಟೆ ಕನ್ನಡಿಗರು ಸ್ವೀಕರಿಸಿರುವ ನಾಡಗೀತೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರಿಯಲ್ಲ. ಜಗದ ಕವಿ, ಯುಗದ ಕವಿಯೆಂದು ಖ್ಯಾತಿ ಪಡೆದ ಕುವೆಂಪು ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ಮಾತನಾಡಿರುವುದು ಖಂಡನೀಯ. ಇದನ್ನು ಯಾರು ಒಪ್ಪುವಂತದ್ದಲ್ಲ ಎಂದು ಹೇಳಿದರು. ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಿ ರಾಷ್ಟ್ರ ಕವಿ, ಕುವೆಂಪು ಮತ್ತು ಅವರು ಬರೆದಿರುವ ನಾಡಗೀತೆಯಾಗಿರುವ ಪದ್ಯವನ್ನು ಅಣಕಿಸಿ ಟ್ರೋಲ್ ಮಾಡಿ ಇಡೀ ನಾಡಿಗೇ ಕನ್ನಡ ಶೂದ್ರ ಮನಸ್ಸುಗಳಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಮಕ್ಕಳ ಕಲಿಕೆಗೆ ಒತ್ತು ನೀಡಬೇಕು
ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲಾ ಶಿಫಾರಸ್ಸುಗಳನ್ನು ಕೈಬಿಡಬೇಕು. ಚಕ್ರತೀರ್ಥರವರ ಸಮಿತಿಯನ್ನು ಕೂಡಲೇ ವಜಾ ಮಾಡಬೇಕು. ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಕಲಿಕೆ ನಷ್ಟವಾಗಿರುವುದರಿಂದ ಯಾವುದೇ ಪ್ರಯೋಗಗಳಿಗೆ ಕೈ ಹಾಕದೆ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಅಲ್ಲದೆ, ಸರ್ಕಾರದಲ್ಲಿ ನಮ್ಮ ಜನಾಂಗದ ಸಚಿವರು ತಕ್ಷಣ ರಾಜ್ಯಮಟ್ಟದ ಸಭೆ ನಡೆಸಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ತರಬೇಕು. ಎಲ್ಲರೂ ಎದ್ದುನಿಂತು ಗೌರವಿಸುವ ನಾಡಗೀತೆ. ಇದು ಸರ್ಕಾರಕ್ಕೆ ಅಗೌರವ ತರುವ ಕೆಲಸ ಎಂದು ಬಿಂಬಿತವಾಗುತ್ತಿದೆ. ಈಗಾಗಲೇ ಶಿಕ್ಷಣ ತಜ್ಣರು, ಸಾಹಿತಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.ಸಮುದಾಯ, ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
(ಒನ್ಇಂಡಿಯಾ ಸುದ್ದಿ)