ಮೋಜು-ಮಸ್ತಿಗಾಗಿ ಇಂಥ ಕೆಲಸಕ್ಕೆ ಕೈಹಾಕಿದ್ರು ಚಾಮರಾಜನಗರದ ವಿದ್ಯಾರ್ಥಿಗಳು!
ಚಾಮರಾಜನಗರ, ಅಕ್ಟೋಬರ್.17: ಮೋಜು-ಮಸ್ತಿಗಾಗಿ ಚಿನ್ನಾಭರಣ ಕದ್ದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿರುವ ಪಟ್ಟಣ ಠಾಣೆ ಪೊಲೀಸರು ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರದ ನಿವಾಸಿ ರೋಹಿತ್ ಮತ್ತು ಕಾಗಲವಾಡಿ ಗ್ರಾಮದ ಮಹದೇವ ಪ್ರಸಾದ್ ಬಂಧಿತರಾಗಿದ್ದಾರೆ. ಕಾಲೇಜಿಗೆ ತೆರಳುವ ವೇಳೆ ಮೋಜು ಮಸ್ತಿ ಮಾಡಲು ಇವರು ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ತಮ್ಮ ಸ್ನೇಹಿತರು ಸೇರಿದಂತೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಇವರು ಅಲ್ಲಿ ಯಾರು ಇಲ್ಲದ ವೇಳೆ ಬೀಗದ ಕೈಗಳನ್ನು ನಕಲು ಮಾಡಿಕೊಂಡು ಬಳಿಕ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಬೀಗ ತೆಗೆದು ಒಳನುಗ್ಗಿ ಚಿನ್ನಾಭರಣಗಳನ್ನು ದೋಚುತ್ತಿದ್ದರು.

ಈ ನಡುವೆ ಇವರಿಬ್ಬರು ಸ್ನೇಹಿತ ಕಾರ್ತಿಕ್ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಸದಾಶಿವಮೂರ್ತಿ ಎಂಬುವರ ಮನೆಗೆ ನುಗ್ಗಿ 300 ಗ್ರಾಂ.ಗೂ ಹೆಚ್ಚು ಆಭರಣ ಕದ್ದು ಗಿರವಿಗಿಟ್ಟು ಮೊಬೈಲ್, ಕ್ಯಾಮರಾ ಖರೀದಿಸಿದ್ದಲ್ಲದೆ, ಕಾರುಗಳನ್ನು ಬಾಡಿಗೆಗೆ ಪಡೆದು ಮೋಜು ಮಸ್ತಿ ಮಾಡುತ್ತಿದ್ದರು ಎನ್ನಲಾಗಿದೆ.

ಮನೆಯಿಂದ ಚಿನ್ನಾಭರಣ ಕಳವು ಆದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ ಹಾಗೂ ಡಿವೈಎಸ್ ಪಿ ಜಯಕುಮಾರ್ ಮಾರ್ಗದರ್ಶನದಲ್ಲಿ ಚಾಮರಾಜನಗರ ಗ್ರಾಮಾಂತರ ಸಿಪಿಐ ರಾಜೇಂದ್ರ ನೇತೃತ್ವದ ತಂಡ ವಿದ್ಯಾರ್ಥಿಗಳಿಬ್ಬರನ್ನು ಬಂಧಿಸಿದ್ದಾರೆ.












Click it and Unblock the Notifications