ಮೌಢ್ಯಕ್ಕೆ ಸೊಪ್ಪು ಹಾಕದೇ ಎರಡನೇ ಸಿಎಂ ಅವಧಿಯಲ್ಲಿ ನಾಲ್ಕನೇ ಬಾರಿಗೆ ಗಡಿಜಿಲ್ಲೆಗೆ ಸಿದ್ದರಾಮಯ್ಯ ಭೇಟಿ
ಚಾಮರಾಜನಗರ, ಜುಲೈ, 08: ಚಾಮರಾಜನಗರಕ್ಕೆ ಈ ಹಿಂದೆ ಮುಖ್ಯಮಂತ್ರಿಗಳಾದವರು ಹಿಂದೇಟು ಹಾಕಿದರೆ, ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕದೇ ಎರಡನೇ ಸಿಎಂ ಅವಧಿಯಲ್ಲಿ ನಾಲ್ಕನೇ ಬಾರಿಗೆ ಗಡಿಜಿಲ್ಲೆಗೆ ಬುಧವಾರ (ಜುಲೈ 10) ಭೇಟಿ ನೀಡಲಿದ್ದಾರೆ.
ಸಿಎಂ ಆದ ಮೂರು ತಿಂಗಳಿಗೇ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಕೆಡಿಪಿ ಸಭೆ ನಡೆಸಿದ್ದ ಸಿದ್ದರಾಮಯ್ಯ ಬಳಿಕ ಎರಡನೇ ಬಾರಿ ಭೇಟಿ ಕೊಟ್ಟು ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸಿದರು.

ತದನಂತರ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಚಾಮರಾಜನಗರದಲ್ಲಿ ರೋಡ್ ಶೋ ನಡೆಸಿ ಮತದಾರರ ಮನ ಗೆದ್ದಿದ್ದರು. ಈಗ ನಾಲ್ಕನೇ ಬಾರಿ ಚಾಮರಾಜನಗರ ಭೇಟಿ ಕೊಡುತ್ತಿದ್ದಾರೆ. ಜುಲೈ 10ಕ್ಕೆ ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಲ್ಲಿಕೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಜುಲೈ 10 ಬೆಳಗ್ಗೆ 11.10 ಕ್ಕೇ ಚಾಮರಾಜನಗರಕ್ಕೆ ಸಿಎಂ ಆಗಮಿಸಲಿದ್ದು, ಗೃಹಸಚಿವ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಹಾಗೂ ಸಂಸದ ಸುನಿಲ್ ಬೋಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಇನ್ನು ಕೃತಜ್ಞತಾ ಸಭೆಯಲ್ಲಿ 30,000ಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದ್ದು ಕಾರ್ಯಕ್ರಮ ಮುಗಿಸಿ ಮದ್ಯಾಹ್ನ 3.30ಕ್ಕೆ ಸಿಎಂ ಹಿಂದಿರುಗಲಿದ್ದಾರೆ. ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರವೂ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದೆ.
ಮೊದಲ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿ: ಮೊದಲ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ 15ಕ್ಕೂ ಅಧಿಕ ಬಾರಿ ಭೇಟಿ ಕೊಟ್ಟು 5 ವರ್ಷ ಸುಭದ್ರವಾಗಿ ಆಡಳಿತ ನಡೆಸಿ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ಅಳಿಸಿದ್ದರು. ಭೇಟಿ ನೀಡುವ ಜೊತೆಗೆ ಸಾವಿರಾರು ಕೋಟಿ ಅನುದಾನವನ್ನೂ ಗಡಿಜಿಲ್ಲೆಗೆ ಹರಿಸಿದ್ದರು.
ಮಹದಾಯಿ ಬಗ್ಗೆ ಗೋವಾ ಸಿಎಂ "ಖ್ಯಾತೆ ಟ್ವೀಟ್": ಮಹದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಟ್ವೀಟ್ ಮೂಲಕ ಸುಖಾಸುಮ್ಮನೆ ಕಿತಾಪತಿ ಎಬ್ಬಿಸಿರುವ ಗೋವಾ ಸಿಎಂ ಸಾವಂತ್ಗೆ ತಿರುಗೇಟು ನೀಡುವಲ್ಲಿ ರಾಜ್ಯ ಸರ್ಕಾರ ಮೌನ ವಹಿಸಿರುವುದೇಕೆ ಎನ್ನುವ ಪ್ರಶ್ನೆಗಳು ಎದ್ದಿವೆ.
ಮಹದಾಯಿ ಟ್ರಿಬ್ಯೂನಲ್ ಶಿಫಾರಸ್ಸಿನ ಮೇರೆಗೆ ಕೇಂದ್ರದಿಂದ ನಿಯೋಜಿಸಲಾದ ಪ್ರವಾಹ ಪರಿವೀಕ್ಷಣೆ ಅಧಿಕಾರಿಗಳ ತಂಡ ಇಂದು ಗೋವಾ-ಕರ್ನಾಟಕ ಗಡಿಯ ಕಣಕುಂಬಿಯಲ್ಲಿ ಸಭೆ ನಡೆಸಿತು.
ಪ್ರವಾಹವನ್ನು ನೀರಿನ ಯೋಜನಾ ಪ್ರದೇಶಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸಲು ಸಮಿತಿ ರಚಿಸಿರುವುದು ಗಮನಾರ್ಹ.
ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಟ್ವೀಟ್ ಮಾಡಿ, ಪ್ರವಾಹ ಪರಿವೀಕ್ಷಣೆಗೆ ಕರೆಸಿದ್ದಾಗಲೂ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಿಯಮಿತ ಭೇಟಿಗಾಗಿ ಪ್ರವಾಹ ಪರಿವೀಕ್ಷಣೆ ಅಧಿಕಾರಿಗಳ ತಂಡ ಆಗಮಿಸಿದೆ ಎಂದು ಗೋವಾ ಹೇಳಿಕೊಳ್ಳುತ್ತಿದ್ದರೂ ಅದರ ಹುನ್ನಾರ ಬೇರೆಯದೇ ಆಗಿದೆ. ಗೋವಾ ಸಿಎಂ ಟ್ವೀಟ್ ಮಾಡಿ 72 ಗಂಟೆ ಕಳೆದರೂ ಕರ್ನಾಟಕ ಮಾತ್ರ ಈ ವಿಷಯದಲ್ಲಿ ಯಾಕೆ ಗಮನ ಹರಿಸಿಲ್ಲ ಎನ್ನುವುದೇ ರಾಜ್ಯದ ಜನರ ಪ್ರಶ್ನೆಯಾಗಿದೆ.
ಸರ್ಕಾರದ ಪರ ಹಿರಿಯ ಐಎಎಸ್ ಅಧಿಕಾರಿ ರಾಕೇಶ ಸಿಂಗ್ ಅವರೂ ಸಹ ಭಾಗವಹಿಸಿಲ್ಲ. ಕರ್ನಾಟಕ-ಗೋವಾ ನಡುವಿನ ಮಹದಾಯಿ ಯೋಜನಾ ಪ್ರದೇಶದಲ್ಲಿ ಸಾಮರಸ್ಯ ಮೂಡಿಸುವ ಪ್ರವಾಹ ಆಗಮಿಸಿ ಏನು ಪ್ರಯೋಜನ ಮಾಡಿ ಹೋಗಲಿದೆ ತಿಳಿದಿಲ್ಲ.
ಜಲಶಕ್ತಿ ಮಂತ್ರಾಲಯದ ಪ್ರವಾಹ ಸಮಿತಿಯ ಚೇರಮನ್ ಪಿ.ಎಂ.ಸ್ಕಾಟ್, ಸದಸ್ಯರಾದ ಮುಖ್ಯ ಅಭಿಯಂತರ ವಿರೇಂದ್ರ ಶರ್ಮಾ, ನವದೆಹಲಿಯ ಹೈಡ್ರೋಲಾಜಿ ವಿಭಾಗದ ಮುಖ್ಯ ಅಭಿಯಂತರ ಮನೋಜ್ ತಿವಾರಿ, ಮಿಲಿಂದ ನಾಯಕ, ಸುಭಾಶ್ಚಂದ್ರ ಸೇರಿ ಇತರ ಹಿರಿಯ ಅಧಿಕಾರಿಗಳು ಸಾಧಕ-ಬಾಧಕಗಳ ಚರ್ಚೆ ಯೋಜನಾ ಪ್ರದೇಶದ ಕಣಕುಂಬಿ ಬಳಿ ನಡೆಸಿದರು.
ಕರ್ನಾಟಕ ಸರ್ಕಾರದ ಮೌನ, ಗೋವಾ ಸಿಎಂ ಕಿತಾಪತಿ, ನಿಯಮಿತದ ಹೆಸರಿನಲ್ಲಿ ಆಗಮಿಸಿದ ಪ್ರವಾಹ ಸಮಿತಿಯ ಪರಿವೀಕ್ಷಣೆಗೆ ಕರ್ನಾಟಕದ ಕನ್ನಡ ಹಾಗೂ ಸಾಮಾಜಿಕ ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿವೆ. ಹಿರಿಯ ಹೋರಾಟಗಾರ ಅಶೋಕ ಚಂದರಗಿ ಕರ್ನಾಟಕ ಸರ್ಕಾರ ಮೌನ ಹಾಗೂ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ತರಾತುರಿಯ ಉದ್ಧಟತನದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications