ಮಲೆ ಮಹದೇಶ್ವರನಿಗೆ ಬೆಳ್ಳಿಯ ಉಡುಗೊರೆ ಕೊಡಲಿದ್ದಾರೆ ಸಿಎಂ!
ಬೆಂಗಳೂರು, ಜನವರಿ 17 : ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ದೇವಾಲಯಕ್ಕೆ ಕೊಡುಗೆಗಳನ್ನು ನೀಡಲು ನಿರ್ಧರಿಸಿದ್ದಾರೆ. ಬೆಳ್ಳಿಯ ಕಿರೀಟ, ಖಡ್ಗ ಮುಂತಾದವುಗಳನ್ನು ಅವರು ದೇವಾಲಯಕ್ಕೆ ನೀಡಲಿದ್ದಾರೆ.
ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ನಂಬಿಕೆಯನ್ನು ಸಿದ್ದರಾಮಯ್ಯ ಅವರು ಮುರಿದಿದ್ದಾರೆ. ಈಗಾಗಲೇ ಅವರು 10 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ.
ಪ್ರಸ್ತುತ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ. ಈಗ ಸಿದ್ದರಾಮಯ್ಯ ಅವರು ಚಾಮರಾಜನಗರದಲ್ಲಿರುವ ಮಲೆ ಮಹದೇಶ್ವರ ದೇವಾಲಯಕ್ಕೆ ಕೊಡುಗೆಗಳನ್ನು ನೀಡಲು ಮುಂದಾಗಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಅವರಿಗೆ ಹಲವಾರು ಉಡುಗೊರೆಗಳು ಬಂದಿವೆ. ತಮಗೆ ಬಂದ ಬೆಳ್ಳಿಯ ರಥ, ಖಡ್ಗ, ಕಿರೀಟಗಳನ್ನು ದೇವಾಲಯಕ್ಕೆ ನೀಡಲು ಅವರು ನಿರ್ಧರಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಅವರು 'ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ' ರಚನೆ ಮಾಡಿದ್ದಾರೆ. ಈ ಪ್ರಾಧಿಕಾರದ ಅಧ್ಯಕ್ಷರು ಅವರೇ.

ಕೆಲವು ದಿನಗಳ ಹಿಂದೆ ನಡೆದ ಪ್ರಾಧಿಕಾರದ ಸಭೆಯಲ್ಲಿ ಬೆಳ್ಳಿಯ ಉಡುಗೊರೆಗಳನ್ನು ನೀಡುವ ಕುರಿತು ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿದ್ದಾರೆ. ಎಲ್ಲಾ ಕೊಡುಗೆಗಳನ್ನು ಸೇರಿಸಿ, ದೇವಾಲಯಕ್ಕೆ ಬೆಳ್ಳಿಯ ರಥ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.












Click it and Unblock the Notifications