ಗುಂಡ್ಲುಪೇಟೆಯ ಬೇಗೂರು ಪೊಲೀಸ್ ವಸತಿ ಗೃಹದಲ್ಲಿ ಶಾಂತಿ ಪೂಜೆ
ಗುಂಡ್ಲುಪೇಟೆ, ಜುಲೈ 27: ಇಂದು ತಾಲೂಕಿನ ಬೇಗೂರು ಗ್ರಾಮದ ಪೊಲೀಸ್ ವಸತಿ ಗೃಹದಲ್ಲಿ ಶಾಂತಿ ಪೂಜೆ ನಡೆಸಿ ಅನ್ನಸಂತರ್ಪಣೆ ಮಾಡಲಾಯಿತು. ಇಲ್ಲಿ ವಾಸವಿದ್ದ ಸಿಬ್ಬಂದಿಗಳ ಕುಟುಂಬದ ಆತಂಕ ನಿವಾರಣೆಗಾಗಿ ಶಾಂತಿ ಪೂಜೆ ನಡೆಸಿ ಅನ್ನಸಂತರ್ಪಣೆ ಮಾಡಲಾಯಿತು.
ಕಳೆದ 7 ತಿಂಗಳ ಹಿಂದೆ ಗ್ರಾಮದಲ್ಲಿ ಸುಸಜ್ಜಿತ ವಸತಿಗೃಹ ನಿರ್ಮಾಣ ಮಾಡಿ ಸಿಬ್ಬಂದಿಗೆ ವಿತರಣೆ ಮಾಡಲಾಗಿತ್ತು. ಎಲ್ಲ ಸಿಬ್ಬಂದಿ ತಮ್ಮ ಕುಟುಂಬದ ಜೊತೆಗೆ ವಾಸವಿದ್ದರು. ಸ್ವಲ್ಪ ದಿನಗಳಲ್ಲಿ ಬೇಗೂರು ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಬ್ಬಹಳ್ಳಿ ಗ್ರಾಮದ ಪ್ರಸಾದ್ ಎಂಬ ಪೇದೆಯು ಆತ್ಮಹತ್ಯೆಗೆ ಶರಣಾಗಿದ್ದರು.

ಈ ಘಟನೆ ಮರೆಯಾಗುವ ಮುನ್ನವೇ ಜೂನ್ ತಿಂಗಳಲ್ಲಿ ಪ್ರಸಾದ್ ಎದುರು ಮನೆಯಲ್ಲಿ ವಾಸವಿದ್ದ ಅನಿಲ್ಕುಮಾರ್ ಎಂಬ ಮುಖ್ಯಪೇದೆಯೂ ನೇಣುಹಾಕಿಕೊಂಡು ಸಾವಿಗೀಡಾದರು.
ಇದರಿಂದ ವಸತಿಗೃಹದಲ್ಲಿ ಸಿಬ್ಬಂದಿ ಕುಟುಂಬದವರು ವಾಸವಿರಲು ಹಿಂಜರಿಯುವಂತಾಗಿದ್ದು ಕೆಲವರು ಬೇರೆಡೆಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದರು. ವಾಸ್ತು ದೋಷದಿಂದ ಇಂಥ ಸನ್ನಿವೇಶಗಳು ಮರುಕಳಿಸುತ್ತಿರುವುದಾಗಿ ನಂಬಿದ ಸಿಬ್ಬಂದಿಯು ಮತ್ತೊಮ್ಮೆ ಪೂಜಾ ಕೈಂಕರ್ಯಗಳನ್ನು ನಡೆಸಿ ಅನ್ನ ಸಂತರ್ಪಣೆ ನಡೆಸಿದರು.
ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ವಸತಿ ಗೃಹಗಳು ಹಾಳಾಗಬಾರದು ಹಾಗೂ ಕುಟುಂಬಗಳು ಸದಾ ಆತಂಕದಲ್ಲಿದ್ದರೆ, ಸಿಬ್ಬಂದಿಗಳ ದಕ್ಷತೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ಅರಿತ ಅಧಿಕಾರಿಗಳು ಪೂಜಾ ಕೈಂಕರ್ಯಕ್ಕೆ ಮೌನಸಮ್ಮತಿ ನೀಡಿದ್ದಾರೆ.
ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಡಿವೈಎಸ್ಪಿ ಎಸ್.ಈ. ಗಂಗಾಧರಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಕೆ.ವಿ.ಕೃಷ್ಣಪ್ಪ, ಬೇಗೂರು ಪಿಎಸ್ಐ ಕಿರಣ್ಕುಮಾರ್ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications