ಸೇನೆ ಸೇರುವವರಿಗೆ ಅಕಾಡೆಮಿ ಸ್ಥಾಪಿಸಿದ ನಿವೃತ್ತ ಯೋಧರು!

ಚಾಮರಾಜನಗರ, ಆಗಸ್ಟ್‌, 11: ಕಾಡುಗಳ್ಳ, ನರಹಂತಕ ವೀರಪ್ಪನ್ ಹಾವಳಿ ಇಟ್ಟಿದ್ದ ಅಡಗು ತಾಣ ಪ್ರದೇಶ ಈಗ ಅಪ್ಪಟ ದೇಶಭಕ್ತರ ನೆಲೆಯಾಗಿದೆ.‌ ನಿವೃತ್ತ ಸೈನಿಕರು ಗ್ರಾಮದಲ್ಲಿ ಅಕಾಡೆಮಿ ಸ್ಥಾಪಿಸಿ ಸೇನೆ ಸೇರುವವರಿಗೆ ಖಡಕ್ ಶಿಕ್ಷಕರಾಗಿದ್ದಾರೆ.

ಈ ಊರಿನಲ್ಲಿರುವ ಸುಮಾರು ಜನ ಸೇನೆಯಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ. ದೇಶಕ್ಕಾಗಿ ಹೋರಾಡಿ ನಿವೃತ್ತಿ ಹೊಂದಿದವರು ಕೆಲವರಿದ್ದರೆ, ಇನ್ನು ಕೆಲವರು ವೃತ್ತಿಯಲ್ಲಿದ್ದಾರೆ. ನಿವೃತ್ತಿ ಆದವರು ಸುಮ್ಮನೆ ಕೂರಲಿಲ್ಲ.

ಸೇನೆಗೆ ಸೇರಬಯಸುವ ಯುವಕರಿಗೆ ತರಬೇತಿ ನೀಡಲು ಮುಂದಾದರು. ಈಗಾಲೂ ಕೂಡ ಈ ಊರಿನಲ್ಲಿ ಸೇನೆಗೆ ಸೇರಬಯಸುವ ಯುವಕರಿಗೆ ತರಬೇತಿ ನೀಡುತ್ತಲೇ ಇದ್ದಾರೆ ಹಾಗೂ ರಜೆಯ ಮೇಲೆ ಊರಿಗೆ ಬಂದ ಸೈನಿಕರು ಕೂಡ ಆಕಾಂಕ್ಷಿಗಳಿಗೆ ತಮ್ಮ ವಿದ್ಯೆಯನ್ನು ಧಾರೆಯರೆಯುತ್ತಿದ್ದಾರೆ.

ಇದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಮಾರ್ಟಳ್ಳಿ. ಇಲ್ಲಿ ಪ್ರಸ್ತುತ 58 ಜನರು ಸೇನೆಯಲ್ಲಿದರೆ, 65 ಮಂದಿ ನಿವೃತ್ತ ಸೈನಿಕರು ಇದ್ದಾರೆ.‌ 1965ರ ಇಂಡೋ ಪಾಕ್ ಯುದ್ಧ, 1972ರ ಬಾಂಗ್ಲಾ ವಿಮೋಚನೆ, ಆಪರೇಷನ್ ಬ್ಲೂ ಸ್ಟಾರ್, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದವರು ಇದ್ದಾರೆ.

ಊರಿನಿಂದ ಹೋಗಿ ಸೈನ್ಯ ಸೇರಿದ ಹಲವರು ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಮಡಿದ ಆ ಇಬ್ಬರು ಸೈನಿಕರ ಪತ್ನಿಯರು ಈ ಊರಿನಲ್ಲಿದ್ದಾರೆ ಎನ್ನುವುದೇ ವಿಶೇಷವಾಗಿದೆ.‌

 ನಿವೃತ್ತ ಸೈನಿಕರ ಕೊಡುಗೆ

ನಿವೃತ್ತ ಸೈನಿಕರ ಕೊಡುಗೆ

ಗ್ರಾಮದ ಮಾಣಿಕ್ಯಂ ಎಂಬವರು ಸೇನೆಯಲ್ಲಿ ಸೇವೆ ಸಲ್ಲಿಸಿ, ತಮ್ಮ ಮಗ ಅರುಣ್ ಸೆಲ್ವ ಕುಮಾರ್ (ಸುಬೇದಾರ್) ಅವರನ್ನು ಸೇನೆಗೆ ಸೇರಿಸಿದ್ದಾರೆ.‌ ನವೀನ್ ಕುಮಾರ್ ಹಾಗೂ ಜಗನ್ ಎಂಬ ಸಹೋದರರು ದೇಶ ಕಾಯುತ್ತಿದ್ದಾರೆ. ಹೀಗೆ ಸೇನೆಗೂ ಇಲ್ಲಿನ ಜನರಿಗೂ ಗಟ್ಟಿಯಾದ ಸಂಬಂಧ‌ ಮೂಡಿದ್ದು, ಯುವಕರ ದೇಶಪ್ರೇಮಕ್ಕೆ ನಿವೃತ್ತ ಸೈನಿಕರು ನೀರೆರೆಯುತ್ತಿದ್ದಾರೆ.

 ಸೈನಿಕ ತರಬೇತಿ ಹಳ್ಳಿಯ ಇತಿಹಾಸ

ಸೈನಿಕ ತರಬೇತಿ ಹಳ್ಳಿಯ ಇತಿಹಾಸ

ಮಾರ್ಟಳ್ಳಿ ಈ ಹಿಂದೆ ಭಾರತೀಯ ಸೇನೆಯ ಮದ್ರಾಸ್ (ಈರೋಡ್) ರೆಜಿಮೆಂಟ್‌ನ ಒಂದು ಭಾಗವಾಗಿತ್ತು. ಇದು ಕೊಳ್ಳೆಗಾಲ ಮತ್ತು ಮಲೆ ಮಹಾದೇಶ್ವರ ಬೆಟ್ಟದ ನಡುವಿನ ದೊಡ್ಡ ಹಳ್ಳಿಯಾಗಿದೆ. ಕರ್ನಾಟಕ ರಾಜ್ಯ ರಚನೆಯ ನಂತರ, ಮಾರ್ಟಳ್ಳಿ ರಾಜ್ಯಕ್ಕೆ ಸೇರ್ಪಡೆ ಆಯಿತು. ಕೆಲ ವರ್ಷಗಳ ಹಿಂದೆ ನಿವೃತ್ತ ಸೈನಿಕರು ಸೇರಿಕೊಂಡು ಟ್ರಸ್ಟ್‌ವೊಂದನ್ನು ರಚಿಸಿಕೊಂಡಿದ್ದಾರೆ.‌ ಈಗ ಸೈನಿಕ ಟ್ರೈನಿಂಗ್ ಅಕಾಡೆಮಿಯನ್ನು ಕೂಡ ಸ್ಥಾಪಿಸಿದ್ದಾರೆ.

 ತರಬೇತಿ ಪಡೆಯುತ್ತಿರುವವರ ಸಂಖ್ಯೆ?

ತರಬೇತಿ ಪಡೆಯುತ್ತಿರುವವರ ಸಂಖ್ಯೆ?

ಸೇನೆ ಸೇರಲು ಬಯಸುವ ಯುವಕರಿಗೆ ನಿವೃತ್ತ ಸೈನಿಕರಾದ ಸುಬೇದಾರ್ ಮರಿಯಾ ಜೋಸೆಫ್, ಹವಲ್ದಾರ್ ಮಾಣಿಕ್ಯಂ, ಹವಲ್ದಾರ್ ಅರುಣ್ ಕುಮಾರ್ ಹಾಗೂ ಹವಾಲ್ದಾರ್ ಬಾಲನ್ ಅವರು ಗ್ರಾಮದ 60ಕ್ಕೂ ಹೆಚ್ಚು ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೇನೆಯಲ್ಲಿನ ಕಠಿಣ ತರಬೇತಿಯನ್ನು ನೀಡುತ್ತಿದ್ದಾರೆ.

ಹಾಸನದಲ್ಲಿ ಅಗ್ನಿವೀರರ ರ‍್ಯಾಲಿ ನಡೆಯುತ್ತಿದ್ದು, ಭಾಗಿಯಾಗಿದ್ದ 28ರಲ್ಲಿ 15 ಜನರು ಮೆಡಿಕಲ್ ಹಾಗೂ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಅಗ್ನೀವೀರರಾಗಲು ಮುನ್ನುಗ್ಗುತ್ತಿದ್ದಾರೆ. ಇನ್ನು ನಿವೃತ್ತ ಸೈನಿಕರು ನೀಡುವ ಈ ತರಬೇತಿ ಸಂಪೂರ್ಣ ಉಚಿತವಾಗಿದೆ.

ನಿವೃತ್ತ ಸೈನಿಕರು ಮತ್ತು ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುತ್ತಿರುವವರು ನೀಡಿದ ಹಣಕಾಸಿನ ಕೊಡುಗೆಯೊಂದಿಗೆ ಈ ಟ್ರಸ್ಟ್ ನಡೆಸಲಾಗುತ್ತಿದೆ. ಈ ಟ್ರಸ್ಟ್ ಸುಲ್ವಾಡಿ ಸರ್ಕಾರಿ ಆಸ್ಪತ್ರೆ ಬಳಿ 2 ಲಕ್ಷ ರೂಪಾಯಿ ನೀಡಿ ಒಂದು ಎಕರೆ ಭೂಮಿಯನ್ನು ಲೀಸ್‌ಗೆ ಪಡೆದುಕೊಂಡಿದೆ. ಮಾರ್ಟಳ್ಳಿ ಜಾಗೇರಿ, ಕೌದಳ್ಳಿ , ಜಲ್ಲಿಪಾಲ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಯುವಕರಿಗೆ ಇಲ್ಲಿ ತರಬೇತಿ ನೀಡುತ್ತಿದ್ದಾರೆ.

 ತರಬೇತಿ ನೀಡುವ ವಿಧಾನಗಳು

ತರಬೇತಿ ನೀಡುವ ವಿಧಾನಗಳು

ರಜೆಯ ಮೇಲೆ ಮಾರ್ಟಳ್ಳಿಗೆ ಬರುವ ಸೈನಿಕರು ಸಹ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಾರೆ. ಇಲ್ಲಿ ಮಿಲಿಟರಿ ಶಿಬಿರದಂತೆಯೇ ಮೂಲ ಸೌಕರ್ಯ ಕಲ್ಪಿಸಲಾಗಿದೆ. ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ ಎರಡು ತಾಸು ತರಬೇತಿಯನ್ನು ನೀಡಲಾಗುತ್ತಿದೆ. ಸೈನ್ಯದಲ್ಲಿ ಮಾಡುವಂತೆಯೇ ಯುವಕರ ಮಾನಸಿಕ ಕೌಶಲ್ಯಗಳನ್ನು ಸುಧಾರಿಸಲು ಪ್ರತಿದಿನ ಒಂದು ಗಂಟೆಯ ಬ್ರೀಫಿಂಗ್ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಈ ಭಾಗದ ಯುವಕರು ಹೀಗೆ ಸೇನೆಗೆ ಸೇರುವ ಭರವಸೆ ಮೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+