ಚಾಮರಾಜನಗರ: 20 ವರ್ಷಗಳ ಬಳಿಕ ಹಣ್ಣು ಬಿಟ್ಟ ರಾಮಫಲ ವೃಕ್ಷ, ಇದಕ್ಕೂ ರಾಮ ಮಂದಿರಕ್ಕೇನಾದ್ರೂ ಸಂಬಂಧ ಇದ್ಯಾ?
ಚಾಮರಾಜನಗರ, ಜನವರಿ, 21: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹೊತ್ತಲ್ಲೇ ಕಾಕತಾಳೀಯ ಎಂಬಂತೆ ರಾಮಫಲ ವೃಕ್ಷ 20 ವರ್ಷದ ಬಳಿಕ ಫಲ ಕೊಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಸುರೇಶ್ ಋಗ್ವೇದಿ ಎಂಬುವರ ಮನೆಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಕಳೆದ 20 ವರ್ಷಗಳ ಹಿಂದೆ ರಾಮಫಲ ಗಿಡವನ್ನು ನೆಡಲಾಗಿತ್ತು. ಆದರೆ, ಫಲ ಕೊಟ್ಟಿರಲಿಲ್ಲ. ಕಾಕತಾಳೀಯ ಎಂಬಂತೆ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹೊತ್ತಲ್ಲೇ ರಾಮಫಲ ವೃಕ್ಷ 5-6 ಹಣ್ಣುಗಳನ್ನು ಬಿಟ್ಟಿರುವುದು ಮನೆಯವರಿಗೆ ಅಚ್ಚರಿ ಉಂಟು ಮಾಡಿದೆ.

ರಾಮ ದೇವರೇ ತಮಗೆ ಆಶೀರ್ವಾದ ಮಾಡಿದ್ದಾರೆಂದು ಕುಟುಂಬಸ್ಥರು ರಾಮಫಲ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದ್ದಾರೆ. ಶತಮಾನಗಳ ಕನಸು ನನಸಾಗುತ್ತಿರುವ ಸಮಯದಲ್ಲೇ ರಾಮಫಲ ಕೊಟ್ಟಿರುವುದು ಸಂತಸ ತಂದಿದೆ ಎಂದು ಸುರೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವನವಾಸದ ವೇಳೆ ಗಡಿಜಿಲ್ಲೆಯಲ್ಲಿ ರಾಮ ಸಂಚಾರ
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾನೆ ಆಗುತ್ತಿದ್ದು, ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ರಾಮ ಸಂಚಾರ ನಡೆಸಿದ ಹಲವು ಸ್ಥಳಗಳಿವೆ. ವನವಾಸದ ಸಂದರ್ಭದಲ್ಲಿ ಚಾಮರಾಜನಗರದ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರ ಬಗ್ಗೆ ಪ್ರತೀತಿ, ಪುರಾಣಗಳಲ್ಲಿ ಉಲ್ಲೇಖವಿದೆ.
ರಾಮನ ಪಾದವೇ ಮಂದಿರವಾಗಿ, ದೇವರ ಹೆಜ್ಜೆ ಗುರುತನ್ನು ಶ್ರದ್ಧಾ ಭಕ್ತಿಯಿಂದ ನಿತ್ಯ ಪೂಜಿಸುವ ಸ್ಥಳವೊಂದಿದೆ. ಇಲ್ಲಿ ಪಾದದ ಗುರುತಿಗೆ ನಮಸ್ಕರಿಸಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದಾಗಿದೆ. ತಮಿಳುನಾಡಿನ ತಾಳವಾಡಿ ತಾಲೂಕಿನ ರಾಮಪುರ ಸಮೀಪದ ಅರಣ್ಯದ ನಡುವೆ ರಾಮರಪಾದ ಎಂಬ ದೇಗುಲವಿದೆ.
ವನವಾಸ ಸಮಯದಲ್ಲಿ ಶ್ರೀರಾಮ ಒಂದು ದಿನ ಇಲ್ಲಿ ಬಂದು ತಂಗಿದ್ದು, ಹೊರಡುವ ವೇಳೆ ಎದುರಾದ 'ತಲ' ಎಂಬ ರಾಕ್ಷಸನನ್ನು ಸಂಹರಿಸಲು ಹೂಡಿದ ಬಾಣ ಆತನ ತಲೆಯನ್ನು ಹಾದು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನು ಸೀಳಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಪುರಾಣದಲ್ಲಿ ಉಲ್ಲೇಖವಾದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತಿದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿದೆ. ಈ ಕುಳಿಯನ್ನು ರಾಮನ ಪಾದವೆಂದು ನಿತ್ಯ ಅಗ್ರಪೂಜೆ ಸಲ್ಲಿಸಲಾಗುತ್ತದೆ.
ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತಿದ್ದು ವಿವಿಧ ಭಾಗಗಳಿಂದ ರಾಮ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೆ, ರಾಮ- ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ದಿಗಾಗಿ ಬೇಡಿದರೆ ಆತ ಇಷ್ಟಾರ್ಥ ಸಿದ್ಧಿಸುತ್ತಾನೆ ಎನ್ನುವುದು ನಂಬಿಕೆ. ಮಕ್ಕಳಾಗದೆ ಇರುವವರು ಕೂಡ ಇಲ್ಲಿಗೆ ಬಂದು ಸಂತಾನ ಭಾಗ್ಯಕ್ಕಾಗಿ ಬೇಡಿಕೊಳ್ಳುತ್ತಾರೆ ಎನ್ನುತ್ತಾರೆ ಭಕ್ತರು.
ದಶರಥನಿಗೆ ಪಿಂಡ ಪ್ರಧಾನ ಮಾಡಿದ ಪುತ್ರರು: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪದ ಪಟ್ಟಶೆಟ್ಟಿ ದೊಡ್ಡಿ ಸಮೀಪದಲ್ಲಿ ಗವಿರಾಯಸ್ವಾಮಿ ಎಂಬ ಕ್ಷೇತ್ರವಿದ್ದು ರಾಮರು ಇಲ್ಲಿ ಬೇಟಿ ಕೊಟ್ಟಿದ್ದರು ಎಂಬ ನಂಬಿಕೆ ಇದೆ. ಶ್ರೀರಾಮನು ವನವಾಸದ ಸಂದರ್ಭದಲ್ಲಿ
ತಂದೆ ದಶರಥ ಮಹಾರಾಜರಿಗೆ ಪಿಂಡ ಪ್ರಧಾನಕ್ಕೆ ಆಯ್ಕೆ ಮಾಡಿಕೊಂಡು ಪಿಂಡಪ್ರಧಾನ ಮಾಡಿದ ಕ್ಷೇತ್ರವೆಂಬ ಹೆಗ್ಗಳಿಕೆ ಇದೆ.
ರಾಮ, ಲಕ್ಷ್ಮಣರು ವನವಾಸ ಮುಗಿಸಿ ಬರುವ ವೇಳೆ ತಮ್ಮ ತಂದೆಯವರಿಗಾಗಿ ಪಿಂಡ ಪ್ರಧಾನಕ್ಕಾಗಿ ಈಕ್ಷೇತ್ರ ಆಯ್ಕೆ ಮಾಡಿಕೊಂಡರೆಂಬ ನಂಬಿಕೆ ಇದೆ. ಲಕ್ಷ್ಮಣ ಬಿಲ್ಲು ಬಾಣವನ್ನು ಸೇತುವೆ ಸಮೀಪ ಬಂದು ಕೆಳಗಿಟ್ಟ ವೇಳೆ ಇದನ್ನ ಗಮನಿಸಿ ಅಚ್ಚರಿಗೊಂಡ ಶ್ರೀರಾಮ ಇಲ್ಲಿನ ಮಣ್ಣಿಗೆ ನಮಸ್ಕರಿಸಿ ಪರೀಕ್ಷಿಸಿದ ವೇಳೆ ಇಲ್ಲಿ ವಿಶೇಷ ಶಕ್ತಿ ಇದೆ. ಇಲ್ಲಿ ದಹನ ಮಾಡುವ ವೇಳೆ ತಲೆ ಹೋಳಾಗುವ ಪದ್ದತಿ ಇದೆ ಎಂದು ತಿಳಿದು ರಂಗನಾಥಸ್ವಾಮಿಯ ಗುಡ್ಡದ ಸಮೀಪ ಮೂರು ಕಡೆಗಳಲ್ಲಿ ಪಿಂಡ ಪ್ರದಾನ ಮಾಡುತ್ತಾರೆ.
ಪಿಂಡ ಪ್ರಧಾನ ಮಾಡಿದ ಸ್ಥಳವನ್ನು ಪ್ರೇತ ಪವ೯ತ ಎನ್ನಲಾಗುತ್ತಿದ್ದು, ಕ್ರಮೇಣ ಇದು ರಾಮ ಪಿಂಡ ಪ್ರದಾನ ಮಾಡಿದ ರಾಮಕ್ಷೇತ್ರ ಎಂಬ ಖ್ಯಾತಿಗೆ ಒಳಗಾಗಿದೆ.
ಬಿಳಿಗಿರಿ ಬನವೇ ಗಜಾರಣ್ಯ, ಚಂಪಕಾರಣ್ಯ: ಪುರಾಣಗಳಲ್ಲಿ ಮತ್ತು ರಾಮಾಯಣದಲ್ಲಿ ಉಲ್ಲೇಖವಾಗುವ ಗಜಾರಣ್ಯ ಮತ್ತು ಚಂಪಕಾರಣ್ಯ ಎಂಬುದು ಬಿಳಿಗಿರಿರಂಗನಾಥ ಅರಣ್ಯ ಪ್ರದೇಶ ಎನ್ನಲಾಗಿದ್ದು, ಸೀತೆಯನ್ನು ಅರಸುತ್ತ ಶ್ರೀರಾಮ, ಲಕ್ಷಣರು ಈ ಅರಣ್ಯದ ಮೂಲಕವೇ ಹಾದುಹೋದರು ಎಂಬ ನಂಬಿಕೆ ಇದೆ. ದೊಡ್ಡಸಂಪಿಗೆ ಮರದ ಬಳಿ ಹರಿಯುವ ಭಾರ್ಗವಿ ನದಿಯೂ ಕೂಡ ಪವಿತ್ರ ಜಲ ಎಂಬ ಭಾವನೆ ಇದೆ.
ಒಟ್ಟಿನಲ್ಲಿ ಲಂಕೆಯತ್ತ ಶ್ರೀರಾಮ ಪ್ರಯಾಣ ಮಾಡುವ ವೇಳೆ ಗಡಿಜಿಲ್ಲೆಯ ಹಲವು ಸ್ಥಳಗಳಿಗೆ ರಾಮನ ನಂಟಿದ್ದು, ಈಗಲೂ ಸಹಸ್ರಾರು ಭಕ್ತರು ತಮ್ಮ ಇಷ್ಟಾರ್ಥಗಳ ಸಿದ್ಧಿಗೆ ಈ ಸ್ಥಳಗಳಿಗೆ ಎಡತಾಕುತ್ತಾರೆ.












Click it and Unblock the Notifications