ಯಳಂದೂರಲ್ಲಿ ಮೈದಾನದ ತುಂಬ ನಿಂತ ನೀರು: ರೋಗದ ಭಯ!
ಚಾಮರಾಜನಗರ, ಅಕ್ಟೋಬರ್ 03: ಮಳೆಸುರಿದಾಗಲೆಲ್ಲ ಯಳಂದೂರಿನ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನ ಸಮುಚ್ಛಯಗಳಿರುವ ಕಟ್ಟಡ ಜಲಾವೃತಗೊಳ್ಳುವುದು ಮಾಮೂಲಿಯಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗದ ಭಯ ಆರಂಭವಾಗಿದೆ.
ಯಳಂದೂರಿನ ಏಕೈಕ ಕ್ರೀಡಾಂಗಣವೂ ಇಲ್ಲಿಯೇ ಇದ್ದು, ವಿಶಾಲವಾದ ಈ ಕಾಲೇಜು ಮೈದಾನ ಸರ್ಕಾರದ ಪ್ರತಿ ಕಾರ್ಯಕ್ರಮಕ್ಕೂ ಬಳಕೆಯಾಗುತ್ತದೆ. ಇತ್ತೀಚೆಗೆ ರಾಷ್ಟ್ರೀಯ ಹಬ್ಬಗಳನ್ನು ಇಲ್ಲಿಯೇ ಆಚರಿಸಲಾಗುತ್ತಿದೆ. ರಸ್ತೆಯನ್ನು ಎತ್ತರಮಾಡಿದ್ದರಿಂದ ಬಿದ್ದ ಮಳೆ ನೀರು ಸರಾಗವಾಗಿ ಹಾದು ಹೋಗಲು ಆಗದ ಸ್ಥಿತಿಯಿದ್ದು, ಇದರಿಂದ ಮಳೆ ಬಂದಾಗ ಈ ಸ್ಥಳ ದ್ವೀಪವಾಗಿ ಮಾರ್ಪಾಡಾಗುವುದು ಕಂಡುಬರುತ್ತಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ ನೂರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಾರೆ. ಮಳೆ ನಿರಂತರವಾಗಿ ಬಿದ್ದರೆ ನೀರು ಅಲ್ಲೇ ನಿಲ್ಲುತ್ತದೆ. ಈ ನೀರು ಹರಿದು ಹೋಗಲು ಸಾಧ್ಯವಿಲ್ಲದೆ ಭೂಮಿಯಲ್ಲೇ ಇಂಗಬೇಕಾಗಿದೆ. ಬೇರೆ ಸ್ಥಳವಿಲ್ಲದ ಕಾರಣ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು ಇಲ್ಲೇ ಮಾಡುತ್ತಾರೆ. ಶಾಲೆಗೆ ತೆರಳಲು ಇದೇ ನೀರನ್ನೇ ದಾಟಿಕೊಂಡು ಹೋಗಬೇಕಾಗಿದೆ. ನೀರು ಹರಿದು ಹೋಗದೆ ನಿಲ್ಲುವುದರಿಂದ ಸೊಳ್ಳೆಗಳೂ ಹೆಚ್ಚಾಗಿ ರೋಗ ಹರಡುವ ಭಯವೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ಈ ಬಗ್ಗೆ ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾ, ತಾಲೂಕು ಹಾಗೂ ಪಟ್ಟಣ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರು ಸಲ್ಲಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪ. ಹೀಗೇ ನೀರು ನಿಲ್ಲುತ್ತಿದ್ದರೆ ಇರುವ ಏಕೈಕ ಕ್ರೀಡಾಂಗಣವೂ ಹಾಳಾಗುವ ಸಾಧ್ಯತೆಯಿದ್ದು, ಕೂಡಲೇ ಸಂಬಂಧಿಸಿದವರು ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಿ ಮಳೆ ನೀರು ಇಲ್ಲಿ ಶೇಖರವಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.












Click it and Unblock the Notifications