'ಪ್ರಿನ್ಸ್' ಮುಖ ಪತ್ತೆ, ಮುಗಿಯದ ಹುಲಿ ಸಾವಿನ ಗೊಂದಲ
ಈ ಹಿಂದೆ ಅರಣ್ಯಾಧಿಕಾರಿಗಳು ಪ್ರಿನ್ಸ್ ಸ್ವಾಭಾವಿಕವಾಗಿ ಸಾವನ್ನಪ್ಪಿದೆ. ಸತ್ತ ಬಳಿಕ ಅದರ ಮುಖಭಾಗವನ್ನು ಮಾಂಸಹಾರಿ ಪ್ರಾಣಿಗಳು ಎಳೆದೊಯ್ದಿರಬಹುದು ಎಂದುಕೊಂಡಿದ್ದರು. ಆದರೆ ಈಗ ಮುಖದ ಭಾಗ ಸಿಕ್ಕಿದ್ದು ಸಾವು ಅನುಮಾನ ಹುಟ್ಟಿಸಿದೆ.
ಬಂಡೀಪುರ, ಏಪ್ರಿಲ್ 17: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಕೆರೆ ವಲಯದಲ್ಲಿ ಏ.2ರಂದು ಮುಖ ಛಿದ್ರಗೊಂಡ ಸ್ಥಿತಿಯಲ್ಲಿ 'ಪ್ರಿನ್ಸ್' ಮೃತದೇಹ ಪತ್ತೆಯಾಗಿತ್ತು. ಇದೀಗ ಛಿದ್ರಗೊಂಡ ಮುಖವೂ ಪತ್ತೆಯಾಗಿದ್ದು ಹುಲಿಯ ಸಾವು ಸ್ವಾಭಾವಿಕವೋ? ಅಥವಾ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಯಿತೇ ಎಂಬ ಅನುಮಾನ ಜನರನ್ನು ಕಾಡತೊಡಗಿದೆ.
ಬಂಡೀಪುರ ಸಫಾರಿಗೆ ಆಗಾಗ್ಗೆ ತೆರಳುತ್ತಿದ್ದ ಬಹಳಷ್ಟು ಜನರಿಗೆ ಪ್ರಿನ್ಸ್ ಚಿರಪರಿಚಿತವಾಗಿತ್ತು. ಇದನ್ನು ನೋಡಲೆಂದೇ ಸಫಾರಿಗೆ ಬರುತ್ತಿದ್ದ ದೊಡ್ಡ ವರ್ಗವೇ ಇತ್ತು. ಇಂತಹವರಿಗೆ ಪ್ರಿನ್ಸ್ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಪ್ರಿನ್ಸ್ ಸಾವಿಗೆ ಕಾರಣಗಳೇನಿರಬಹುದು ಎಂಬುದರ ತನಿಖೆಗಾಗಿ ಒತ್ತಾಯಿಸುತ್ತಲೇ ಬರುತ್ತಿದ್ದಾರೆ.[ರಾಜಕುಮಾರನ ಅಸಹಜ ಸಾವಿನ ತನಿಖೆ ಅಪೂರ್ಣ]
ಮೊದಲಿಗೆ ಅರಣ್ಯ ಇಲಾಖೆ ಕೂಡ ಸ್ವಾಭಾವಿಕವಾಗಿ ಪ್ರಿನ್ಸ್ ಸಾವನ್ನಪ್ಪಿದ್ದು, ಸತ್ತ ಬಳಿಕ ಅದರ ಮುಖಭಾಗವನ್ನು ಇತರೆ ಮಾಂಸಹಾರಿ ಪ್ರಾಣಿಗಳು ಎಳೆದೊಯ್ದಿರಬಹುದೆಂದು ತೆಪ್ಪಗಾಗಿದ್ದರು. ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಮರಣೋತ್ತರ ಪರೀಕ್ಷೆ ನಡೆಸಿ ಸುಟ್ಟು ಹಾಕುವ ಮೂಲಕ ಅಂತ್ಯಕ್ರಿಯೆ ನಡೆಸಿದ್ದರು.
ಇದಾದ ಕೆಲವು ದಿನಗಳ ಬಳಿಕ ಪ್ರಿನ್ಸ್ ಮೃತದೇಹದ ಚಿತ್ರಗಳು ವೈರಲ್ ಆಗಿತ್ತು. ಮುಖಭಾಗ ಛಿದ್ರವಾಗಲು ಕಾರಣವೇನು? ಮಾಂಸದಲ್ಲಿ ನಾಡಬಾಂಬ್ ಇಟ್ಟರೆ ಅದನ್ನು ತಿನ್ನುವಾಗ ಸಿಡಿದು ಪ್ರಾಣಿಗಳ ಮುಖ ಛಿದ್ರವಾಗುತ್ತವೆ. ಅದೇ ರೀತಿ ಇದಕ್ಕೂ ಯಾರೋ ಮಾಂಸದಲ್ಲಿ ನಾಡಬಾಂಬ್ ಇರಿಸಿ ಸಾಯಿಸಿರಬಹುದು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದರಿಂದ ತನಿಖೆ ಮುಂದುವರೆದಿತ್ತು.[ಬಂಡೀಪುರದ ಪ್ರಿನ್ಸ್ ಹುಲಿ ಇನ್ನು ನೆನಪು ಮಾತ್ರ!]
ತೀವ್ರ ಹುಡುಕಾಟದ ಬಳಿಕ ಸಾವಿಗೀಡಾದ ಹುಲಿ ಪ್ರಿನ್ಸ್ ಮೃತದೇಹ ದೊರೆತ ಅನತಿ ದೂರದಲ್ಲಿ ಮುಖದ ಭಾಗ ಹಾಗೂ ಹಲ್ಲುಗಳು ದೊರೆತಿದ್ದವು. ಆದರೆ ಇದು ಪ್ರಿನ್ಸ್ ಮುಖವೋ ಅಥವಾ ಬೇರೆ ಯಾವುದಾದರು ಹುಲಿಯದ್ದೋ ಎಂಬುದು ಖಚಿತವಾಗಿಲ್ಲ. ಆದ್ದರಿಂದ ಈ ಬಗ್ಗೆ ನಿಖರವಾಗಿ ತಿಳಿಯುವ ಉದ್ದೇಶದಿಂದ ಇದೀಗ ದೊರೆತ ಹುಲಿಯ ಮುಖ ಭಾಗದ ಕೂದಲು ಮತ್ತು ಪ್ರಿನ್ಸ್ ಮೃತ ದೇಹದಲ್ಲಿನ ಕೂದಲುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಮತ್ತೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಅರಣ್ಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶ ಮಾಡಿ ಈ ಕೃತ್ಯ ಎಸಗಿದ್ದಾರಾ? ಎಂಬುದರ ಬಗ್ಗೆಯೂ ತೀವ್ರ ತನಿಖೆಯನ್ನು ನಡೆಸುತ್ತಿದ್ದು, ಎಲ್ಲ ಮೂಲಗಳಿಂದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಒಂದು ವೇಳೆ ಹುಲಿಯ ಚರ್ಮ, ಉಗುರು, ಹಲ್ಲುಗಳಿಗಾಗಿ ಹುಲಿಗಳನ್ನು ಹತ್ಯೆಗೈಯ್ಯುವ ಜಾಲವೇನಾದರೂ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದೆಯಾ? ಎಂಬ ಸಂಶಯವೂ ಇರುವುದರಿಂದ ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಜತೆಗೆ ಈಗಾಗಲೇ ಇಬ್ಬರು ವ್ಯಕ್ತಿಗಳ ಬಗ್ಗೆ ಅನುಮಾನವಿದ್ದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯನ್ನು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.