ಗುಂಡ್ಲುಪೇಟೆ: ಆಸ್ಪತ್ರೆ ಬಳಿ ಮದ್ಯದಂಗಡಿ ತೆರೆಯದಂತೆ ಆಗ್ರಹ
ಚಾಮರಾಜನಗರ, ಅಕ್ಟೋಬರ್ 7: ಆರೋಗ್ಯ ಸಮುದಾಯ ಕೇಂದ್ರದ ಬಳಿಯೇ ಮದ್ಯದಂಗಡಿ ತೆರೆಯಲು ಅನುಕೂಲವಾಗುವಂತೆ ಕಟ್ಟಡವನ್ನು ಕಟ್ಟುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು ಬಸ್ ನಿಲ್ದಾಣ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ನಡುವೆಯಿರುವ ತಮ್ಮ ಭೂಮಿಯಲ್ಲಿ ಮದ್ಯದಂಗಡಿ ತೆರೆಯುವ ಸಲುವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಮದ್ಯದಂಗಡಿ ತೆರೆದರೆ ಗ್ರಾಮದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬುದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಆರೋಪವಾಗಿದ್ದು, ಯಾವುದೇ ಕಾರಣಕ್ಕೂ ಮದ್ಯದಂಗಡಿಗೆ ಇಲ್ಲಿ ಅವಕಾಶ ನೀಡಬಾರದೆಂದು ಒತ್ತಾಯಿಸುತ್ತಿದ್ದು, ತಪ್ಪಿದರೆ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇಲ್ಲಿ ವಾಸದ ಮನೆಗಳು, ವ್ಯಾಪಾರ ಮಳಿಗೆಗಳು, ಔಷದಿ ಅಂಗಡಿಗಳಿವೆ. ಅಲ್ಲದೆ ಪಕ್ಕದಲ್ಲಿಯೇ ಕೆರೆ ಇರುವುದರಿಂದ ಈಗಾಗಲೇ ಈ ಕೆರೆಗೆ ಕುಡಿದ ಮತ್ತಿನಲ್ಲಿ ಬಿದ್ದು ನಾಲ್ವರು ಸಾವನ್ನಪ್ಪಿದ್ದು, ಮುಂದಿನ ದಿನಗಳಲ್ಲಿ ಇದು ಮರುಕಳಿಸುವ ಸಾಧ್ಯತೆಗಳಿವೆ. ಸಮೀಪದಲ್ಲಿಯೇ ಪಂಚಲಿಂಗೇಶ್ವರ ದೇವಾಲಯವಿದ್ದು ಪ್ರತಿದಿನವೂ ಭಕ್ತಾದಿಗಳು ಪೂಜೆ ಸಲ್ಲಿಸಲು ಆಗಮಿಸುತ್ತಾರೆ, ಪಂಚಮಿ ಹಾಗೂ ಯುಗಾದಿ ಹಬ್ಬಗಳಂದು ಗ್ರಾಮದ ಸಾವಿರಾರು ಜನರು ಸೇರಿ ಒಟ್ಟಾಗಿ ಪೂಜೆಸಲ್ಲಿಸುರುತ್ತಾರೆ. ಹೀಗಿರುವಾಗ ಇಲ್ಲಿ ಮದ್ಯದಂಗಡಿ ಆರಂಭಿಸಿದರೆ ಸಾರ್ವಜನಿಕ ನೆಮ್ಮದಿಗೆ ಭಂಗ ಬರಲಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಈ ಹಿಂದೆ ದಿ. ಹೆಚ್.ಎಸ್. ಮಹದೇವಪ್ರಸಾದ್ ಆಸ್ಪತ್ರೆ ಕಟ್ಟಡ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ನಿರುಪಯುಕ್ತವಾಗಿರುವ ಕೆರೆಮುಚ್ಚಿಸಿ ಅಲ್ಲಿ ಹಿಂದುಳಿದವರಿಗೆ ಹಾಗೂ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಕ್ಕಾಗಿ ಇಲ್ಲಿದ್ದ ಗಿಡಗಂಟಿಗಳನ್ನು ತೆರವು ಮಾಡಲಾಗಿತ್ತು. ಅಷ್ಟರಲ್ಲಿ ಅವರ ಅಕಾಲಿಕ ಸಾವಿನಿಂದ ಯೋಜನೆಯು ನೆನೆಗುದಿಗೆ ಬಿದ್ದಿದ್ದು ಸದ್ಯ ಅವರ ಪತ್ನಿಯೇ ಸಚಿವರಾಗಿರುವುದರಿಂದ ಮುಂದಿನ ದಿನಗಳಲ್ಲಿ ಯೋಜನೆಯು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ.
ಒಂದು ವೇಳೆ ಈ ಭಾಗದಲ್ಲಿ ಮದ್ಯದಂಗಡಿ ತೆರೆದರೆ ಮುಂದೆ ಇಲ್ಲಿ ನಿವೇಶನ ಪಡೆದವರು ಮನೆಕಟ್ಟಿಕೊಳ್ಳಲು ಹಿಂಜರಿಯುವಂತಾಗುತ್ತದೆ. ಅಲ್ಲದೆ ಎಲ್ಲ ರೀತಿಯಲ್ಲಿಯೂ ತೊಂದರೆಯಾಗಲಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಈ ಸಂಬಂಧ ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಹಾಗೂ ಅಬ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಹೋರಾಟ ಅನಿವಾರ್ಯವಾಗಲಿದೆ ಎಂದು ತಾಲೂಕು ಕರವೇ ಯುವ ಸೇನೆ ಅಧ್ಯಕ್ಷ ಬೇಗೂರು ಚಂದ್ರು, ಉಪಾಧ್ಯಕ್ಷ ಮೋಹನ್, ಪ್ರದೀಪ್ ಕುಮಾರ್, ಅರೇಪುರ ನಾಗರಾಜು ಮೊದಲಾದವರು ತಿಳಿಸಿದ್ದಾರೆ.












Click it and Unblock the Notifications