ಚಾಮರಾಜನಗರ : ಕಾಡಿನ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ದಂಡ
ಚಾಮರಾಜನಗರ, ಜನವರಿ 07 : ಮಲೆ ಮಹದೇಶ್ವರ ಬೆಟ್ಟದಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ದಂಡ ಕಟ್ಟಬೇಕಾಗುತ್ತದೆ. 2 ಸಾವಿರ ರೂ. ದಂಡವನ್ನು ಪಾವತಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಸಂಚಾರ ನಡೆಸುವ ವಾಹನಗಳು ಗುದ್ದಿ ಕಾಡು ಪ್ರಾಣಿಗಳು ಮೃತಪಡುವ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ, ಪ್ರಾಣಿಗಳ ರಕ್ಷಣೆಗಾಗಿ ವಾಹನ ನಿಲ್ಲಿಸಬಾರದು ಎಂದು ಅರಣ್ಯ ಇಲಾಖೆ ಹೇಳಿದ್ದು, ಜನವರಿ 1ರಿಂದ ಇದು ಜಾರಿಗೆ ಬಂದಿದೆ.
ಕಾಡಿನ ಸೌಂದರ್ಯದ ಫೋಟೋ ತೆಗೆಯಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಪ್ರಾಣಿಗಳಿಗೆ ಆಹಾರ ಹಾಕಲು ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಸ್ಥಳದಲ್ಲಿಯೇ ದಂಡವನ್ನು ಹಾಕಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ದಂಡ ಪ್ರಯೋಗವನ್ನು ಈಗಾಗಲೇ ಆರಂಭಿಸಿದ್ದಾರೆ.

ವಾಹನಗಳು ಡಿಕ್ಕಿ ಹೊಡೆದು ಪ್ರಾಣಿಗಳು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅರಣ್ಯ ಇಲಾಖೆ ರಸ್ತೆಯ ನಡುವೆ ವಾಹನ ನಿಲ್ಲಿಸಬೇಡಿ ಎಂದು ಸೂಚನೆ ನೀಡಿದ್ದಾರೆ, ಫಲಕಗಳನ್ನು ಹಾಕಿದ್ದಾರೆ. ಆದರೆ, ವಾಹನ ಸವಾರರು ಅದನ್ನು ಪಾಲಿಸುತ್ತಿಲ್ಲ.
ವಾಹನ ಸವಾರರು ನಿಯಮ ಪಾಲಿಸಿದ ಕಾರಣ ಅರಣ್ಯ ಇಲಾಖೆಯವರು ಸ್ಥಳದಲ್ಲಿಯೇ ದಂಡ ಹಾಕುವ ತೀರ್ಮಾನ ಕೈಗೊಂಡಿದ್ದಾರೆ. ಫೋಟೋ ತೆಗೆಯಲು, ಪ್ರಾಣಿಗಳಿಗೆ ಆಹಾರ ನೀಡಲು ವಾಹನ ನಿಲ್ಲಿಸಿದರೆ 2 ಸಾವಿರ ರೂ. ದಂಡವನ್ನು ಕಟ್ಟಬೇಕಾಗಿದೆ.
ಅರಣ್ಯ ಇಲಾಖೆ ಪ್ರತಿ ವಲಯದಲ್ಲಿಯೂ ಪರಿಸರ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿದೆ. ವಾಹನ ಸವಾರರಿಂದ ಸಂಗ್ರಹಿಸಿದ ದಂಡ ಮೊತ್ತವನ್ನು ಸಮಿತಿಗೆ ಹಸ್ತಾಂತರ ಮಾಡಲಾಗುತ್ತದೆ.












Click it and Unblock the Notifications