ಚಾಮರಾಜನಗರದಲ್ಲಿ ರೈಸ್ ಪುಲ್ಲಿಂಗ್ ದಂಧೆ: ಹೋಂ ಸ್ಟೇಗೆ ಬೀಗ!
ಚಾಮರಾಜನಗರ, ಜೂನ್ 11: ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಕೆಲವರು ರೈಸ್ ಪುಲ್ಲಿಂಗ್ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ತಂಗಿದ್ದ ಹೋಂ ಸ್ಟೇಗೆ ಬೀಗ ಹಾಕಲಾಗಿದೆ.
ಈ ವ್ಯಾಪ್ತಿಯಲ್ಲಿ ಒಂದಷ್ಟು ಮಂದಿ, ಹಳೆಯ ಪಾತ್ರೆ, ಸಾಕಿದ ಪ್ರಾಣಿ ಪಕ್ಷಿಗಳನ್ನು ಇಟ್ಟುಕೊಂಡು, ಅವುಗಳನ್ನು ಕಾಡಿನಿಂದ ತಂದಿರುವುದಾಗಿಯೂ, ಅವು ಮನೆಯಲ್ಲಿದ್ದರೆ ಅದೃಷ್ಟ ಖುಲಾಯಿಸುತ್ತದೆ ಎಂದೂ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ನಡುವೆ ಬಿಳಿಗಿರಿರಂಗನ ಬೆಟ್ಟದ ಜಮೀನೊಂದರ ಪೊದೆಯ ಬಳಿ ಸತ್ತ ಮೊಲ ಮತ್ತು ಗೌಜಲ ಹಕ್ಕಿಗಳನ್ನು ತಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಂಜುಂಡ ಮತ್ತು ಪ್ರಸನ್ನ ಕುಮಾರ್ ಎಂಬಿಬ್ಬರನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದರು.
ಅವರ ಬಳಿ ಪುರಾತನ ಕಾಲದ ಪಾತ್ರೆಯೊಂದು ಪತ್ತೆಯಾಗಿದ್ದು, ಇದೇ ರೈಸ್ ಪುಲ್ಲಿಂಗ್ ಇರಬಹುದಾ ಎಂಬ ಸಂಶಯ ಜನರಲ್ಲಿ ಬಂದಿತ್ತು. ತಕ್ಷಣ ಯಳಂದೂರು ಎಸಿಎಫ್ ಅಸ್ಮಾನ್ ಸ್ಥಳಕ್ಕೆ ಆಗಮಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗ್ರಾಮಸ್ಥರು, ದಂಧೆಯ ರೂವಾರಿಯಾದವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಅರಣ್ಯ ಇಲಾಖಾ ಅಧಿಕಾರಿಗಳ ವಾಹನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು, ದುಷ್ಕರ್ಮಿಗಳು ತಂಗಿದ್ದ ಹೋಂ ಸ್ಟೇಗೆ ತೆರಳಿ ಸ್ಥಳ ಮಹಜರ್ ನಡೆಸಿ, ಹೋಂ ಸ್ಟೇಗೆ ಬೀಗ ಮುದ್ರೆ ಹಾಕಿ, ಇಲಾಖಾ ವಿಚಾರಣೆಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ.












Click it and Unblock the Notifications