ಚಾಮರಾಜನಗರ; ಕುಡಿಯುವ ನೀರಿಗಾಗಿ ಕಾಡಂಚಿನ ಜನರ ಅಲೆದಾಟ
ಚಾಮರಾಜನಗರ, ಅಕ್ಟೋಬರ್ 12; ಈಗಾಗಲೇ ಎಲ್ಲೆಡೆ ಮಳೆಸುರಿದು ನೀರಿನ ಬವಣೆ ಬಗೆಹರಿದಿದ್ದರೆ, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಜನರು ನೀರಿಗಾಗಿ ಬಿಂದಿಗೆ ಹಿಡಿದು ಹಳ್ಳವನ್ನು ಹುಡುಕಿಕೊಂಡು ಕಿಲೋಮೀಟರ್ಗಟ್ಟಲೆ ಅಲೆಯುತ್ತಿರುವ ದೃಶ್ಯ ಮನಕಲಕುತ್ತಿದೆ.
ಇಷ್ಟಕ್ಕೂ ಇಲ್ಲಿ ನೀರಿಗೆ ಬರ ಬಂದಿದ್ದಾದರೂ ಹೇಗೆ? ಎಂದು ಹುಡುಕುತ್ತಾ ಹೋದರೆ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇವತ್ತು ಹಾಡಿಯ ಜನರು, ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಬಿಂದಿಗೆ ಹಿಡಿದು ನೀರಿಗಾಗಿ ಹುಡುಕಾಟ ನಡೆಸುವಂತಾಗಿರುವುದಕ್ಕೆ ಪಂಚಾಯಿತಿಯೇ ಕಾರಣ.
ಹನೂರು ತಾಲೂಕಿನ ಕಾಡಂಚಿನ ಮೇಗಲದೊಡ್ಡಿ, ಕತ್ತೆಕಾಲುಪೋಡು ಗ್ರಾಮದಲ್ಲಿ ಸೋಲಿಗ ಬುಡಕಟ್ಟು ಜನರೇ ಹೆಚ್ಚಾಗಿ ವಾಸಿಸುತ್ತಿದ್ದು, ಕಾಡಂಚಿನಲ್ಲಿರುವ ಕಾರಣ ಮೂಲ ಸೌಲಭ್ಯದ ಕೊರತೆ ಇಲ್ಲಿ ಹೆಚ್ಚಾಗಿದೆ. ಅದರಲ್ಲೂ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅವಶ್ಯಕತೆಯಿದ್ದು, ಆ ಸೌಲಭ್ಯವನ್ನು ಕಲ್ಪಿಸಿದ್ದರೂ ಅದರ ಸಮರ್ಪಕ ನಿರ್ವಹಣೆ ಇಲ್ಲವಾಗಿದೆ.
ಇದೇ ಕಾರಣದಿಂದಾಗಿ ಇವತ್ತು ಜನ ನೀರಿಗಾಗಿ ಕಾಡುಪ್ರಾಣಿಗಳ ಭಯದ ನಡುವೆ ಅಲೆದಾಡುವಂತಾಗಿದೆ. ಕಳೆದ 5 ತಿಂಗಳ ಹಿಂದೆ ಕೆಟ್ಟು ನಿಂತಿರುವ ಮೋಟಾರ್ ರಿಪೇರಿ ಮಾಡದ ಹಿನ್ನಲೆ ಈ ಸ್ಥಿತಿ ಬಂದಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನೀರಿನ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಕಾಡುತ್ತಿರುವ ಕಾಡುಪ್ರಾಣಿಗಳ ಭಯ
ಸದ್ಯದ ಪರಿಸ್ಥಿತಿಯಲ್ಲಿ ಕಾಡಂಚಿನಲ್ಲಿರುವ ಈ ಗ್ರಾಮಗಳಲ್ಲಿ ನೆಲೆಸಿರುವ ಜನರು ಕೂಲಿಯನ್ನೇ ನಂಬಿ ಬದುಕುತ್ತಿದ್ದು, ಕೂಲಿ ಮಾಡಿದರೆ ಮಾತ್ರ ಬದುಕು. ಆದರೆ ನೀರಿಗಾಗಿ ಅಲೆಯುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮುಂಜಾನೆ ಮತ್ತು ಸಂಜೆಯೇ ನೀರು ತರಲು ಸಮಯ ಸಿಗುವುದರಿಂದ ಆ ವೇಳೆಯಲ್ಲಿ ಮನೆಯಿಂದ ಹೊರಹೋಗಿ ಕಿ. ಮೀ. ನಡೆದು ನೀರು ತರಬೇಕು. ಈ ವೇಳೆ ಎಲ್ಲಿ ನಮ್ಮ ಮೇಲೆ ಕಾಡುಪ್ರಾಣಿಗಳು ದಾಳಿ ಮಾಡಿಬಿಡಬಹುದೇನೋ ಎಂಬ ಭಯವೂ ಪ್ರತಿಯೊಬ್ಬರನ್ನು ಕಾಡುತ್ತಿದೆ.

ಐದು ತಿಂಗಳ ಹಿಂದೆ ಕೆಟ್ಟ ಮೋಟಾರ್
ಹಾಗೆ ನೋಡಿದರೆ ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 11 ಹಳ್ಳಿಗಳು ಒಳಪಡಲಿದ್ದು ಸುಮಾರು 1288 ಜನ ಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಹಿರಿಯಂಬಲ, ಮೇಗಲದೊಡ್ಡಿ ಹಾಗೂ ಕತ್ತೆಕಾಲುಪೋಡು ಗ್ರಾಮದಲ್ಲಿ ಸುಮಾರು 250 ಹೆಚ್ಚು ಸೋಲಿಗ ಬುಡಕಟ್ಟು ಕುಟುಂಬದ ಜನರು ವಾಸಿಸುತ್ತಿದ್ದಾರೆ. ಮೇಗಲದೊಡ್ಡಿಯಲ್ಲಿ 15 ಹಾಗೂ ಸುತ್ತಮುತ್ತಲಿನಲ್ಲಿ ಹಲವು ಕುಟುಂಬಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಕುಡಿಯುವ ನೀರಿಗಾಗಿ ಅಳವಡಿಸಿರುವ ಮೋಟಾರ್ ಕೆಟ್ಟು ಐದು ತಿಂಗಳು ಆಗಿದೆ. ಅದನ್ನು ಇದುವರೆಗೆ ಸರಿಪಡಿಸಿಲ್ಲ. ಸದ್ಯಕ್ಕೆ ಸರಿಪಡಿಸುವ ಲಕ್ಷಣವೂ ಕಾಣಿಸುತ್ತಿಲ್ಲ. ಹೀಗಾಗಿ ಎಲ್ಲದಕ್ಕೂ ನೀರು ಅಗತ್ಯವಾಗಿರುವುದರಿಂದ ಎಲ್ಲಿಂದಾದರೂ ಮನೆಗೆ ನೀರು ತರಲೇ ಬೇಕು. ಆದ್ದರಿಂದ ಮುಂಜಾನೆ ಎದ್ದರೆ ಮನೆ ಮಂದಿಗೆ ನೀರಿನದ್ದೇ ಚಿಂತೆಯಾಗಿದ್ದು, ಕಾಡು ಪ್ರಾಣಿಗಳ ಭಯವಿರುವುದರಿಂದ ಹಾಡಿಯ ಮಂದಿ ಗುಂಪು ಗುಂಪಾಗಿ ತೆರಳಿ ಹಳ್ಳಗಳಿಂದ ನೀರು ತರಲು ತೆರಳುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

ಸಂಕಷ್ಟ ಹೇಳಿಕೊಳ್ಳಲಾಗದ ಪರಿಸ್ಥಿತಿ
ಇದೆಲ್ಲವನ್ನು ಗಮನಿಸಿದರೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಯಾವ ರೀತಿಯದ್ದಾಗಿರಬಹುದು ಎಂಬುದು ಮೇಲ್ನೋಟಕ್ಕೆ ಅರ್ಥವಾಗಿ ಬಿಡುತ್ತದೆ. ಚುನಾವಣೆ ಬಂದಾಗ ಹಾಡಿಗಳಿಗೆ ಭೇಟಿ ನೀಡಿ ಸೌಲಭ್ಯಗಳ ಭರವಸೆಯ ಮಳೆ ಸುರಿಸುವ ಜನಪ್ರತಿನಿಧಿಗಳು ಮತ್ತೆ ತಿರುಗಿ ನೋಡುವುದಿಲ್ಲ. ಹೀಗಾಗಿ ಜನ ತಮ್ಮ ಸಂಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ, ತಾವೇ ಅನುಭವಿಸುವಂತಾಗಿದೆ. ಹಾಡಿಯ ಪ್ರತಿಮನೆಗೆ ನಲ್ಲಿ ನೀರಿನ ಸಂಪರ್ಕ ನೀಡುವ ಜಲಜೀವನ್ ಮಿಷನ್ ಯೋಜನೆ ಇದೆ. ಆದರೆ ಇರುವ ಯೋಜನೆಯನ್ನೂ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ನಾವು ಹಲವು ಬಾರಿ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ ಎಂಬುದು ಇಲ್ಲಿನ ಹಾಡಿವಾಸಿಗಳ ಆರೋಪವಾಗಿದೆ.
Recommended Video

ಸಮಸ್ಯೆಗೆ ಪರಿಹಾರ ಯಾವಾಗ?
ಕೆಟ್ಟು ನಿಂತ ಮೋಟಾರ್ ದುರಸ್ತಿ ಪಡಿಸದ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುತ್ತಾ ಹಿರಿಯಂಬಲ, ಮೇಗಲದೊಡ್ಡಿ ಕಾಡಂಚಿನಲ್ಲಿರುವ ಜನರು ವನ್ಯಪ್ರಾಣಿಗಳ ಭಯವನ್ನು ಲೆಕ್ಕಿಸದೆ ಒಂದು ಕಿ.ಮೀ.ನಷ್ಟು ದೂರದಲ್ಲಿರುವ ಹಳ್ಳದ ನೀರನ್ನೇ ತಂದು ಕುಡಿಯುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಇವರ ಸಮಸ್ಯೆಗೆ ಪರಿಹಾರ ನೀಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications