ಚಾಮರಾಜನಗರದಲ್ಲಿ ಯುವಕರಲ್ಲೇ ಕೊರೊನಾ ಜಾಸ್ತಿ!
ಚಾಮರಾಜನಗರ, ಏಪ್ರಿಲ್ 26; ಹೆಚ್ಚುತ್ತಿರುವ ಕೊರೊನಾ ಮಹಾಮಾರಿಯ ಭಯದ ನಡುವೆ ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಸೋಂಕಿನಲ್ಲಿ ಯುವಕರ ಪಾಲು ಜಾಸ್ತಿ ಇರುವುದು ಆತಂಕ ಮೂಡಿಸಿದೆ.
ಸದ್ಯ ಪತ್ತೆಯಾಗಿರುವ ಸೋಂಕಿತರ ಪೈಕಿ 60 ವರ್ಷ ಮೇಲ್ಪಟ್ಟವರು ಕೇವಲ 216 ಮಂದಿ ಇದ್ದು, ಉಳಿದವರೆಲ್ಲರೂ 21 ರಿಂದ 45 ವಯೋಮಾನದವರು ಇರುವುದು ವಿಷಾದದ ಸಂಗತಿಯಾಗಿದೆ.
21 ರಿಂದ 40 ವರ್ಷದೊಳಗಿನ ಯುವಕರಲ್ಲಿ 1036 ಪ್ರಕರಣ ದಾಖಲಾಗಿದೆ. ಯುವಜನತೆ ಹೆಚ್ಚಾಗಿ ಸೋಂಕು ಹರಡಲು ಅವರು ಮಾಸ್ಕ್ ಧರಿಸದೆ ಸಂಚಾರ ಮಾಡಿರಬಹುದು ಅಥವಾ ಸೋಂಕಿನ ಬಗ್ಗೆ ಉದಾಸೀನ ಇರಬಹುದೆಂದು ಶಂಕಿಸಲಾಗಿದೆ. ಗ್ರಾಮಾಂತರ ಜನತೆ ಎಚ್ಚರ ವಹಿಸಿದಾಗ ಮಾತ್ರ ಸೋಂಕು ಕಡಿಮೆಯಾಗಲು ಸಾಧ್ಯ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ 13 ಸಾವು ಸಂಭವಿಸಿದ್ದು, ಅವರುಗಳು ಕೋವಿಡ್ ನಿಯಂತ್ರಣದ ಲಸಿಕೆ ಹಾಕಿಸಿಕೊಂಡಿಲ್ಲ. ಲಸಿಕೆ ಹಾಕಿಸಿಕೊಳ್ಳುವ ನಿರ್ಲಕ್ಷ್ಯವೇ ಕಾರಣ ಇರಬಹುದೆಂದು ಅಂದಾಜಿಸಲಾಗಿದೆ.
ಇನ್ನು ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಅದಕ್ಕಾಗಿ ಜಿಲ್ಲೆಯ ಗ್ರಾಮ ಪಂಚಾಯಿತಿ, ಗಿರಿಜನ ಆಶ್ರಮ ಶಾಲೆ, ಎಪಿಎಂಸಿ ಹಾಗೂ ಹೋಬಳಿ ಜನ ಸಂದಣಿ ಸೇರುವ ಕಡೆ ಲಸಿಕೆ ಅಭಿಯಾನ ನಡೆಯುತ್ತಿದೆ. ಗ್ರಾಮಾಂತರ ಜನರು ಲಸಿಕೆ ಅಭಿಯಾನ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಮನವಿ ಮಾಡಿದ್ದಾರೆ.
ಗ್ರಾಮಾಂತರದಲ್ಲಿ ಜಾಸ್ತಿ; ಏಪ್ರಿಲ್ 1 ರಿಂದ ಕೋವಿಡ್ ಸೋಂಕು ಹೆಚ್ಚಾಗಿದೆ, ಕಳೆದ 4 ದಿನಗಳಿಂದ ಪ್ರತಿನಿತ್ಯ 200ಕ್ಕೂ ಹೆಚ್ಚು, ಕಳೆದ ಹದಿನೈದು ದಿನಗಳಿಂದ 100 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸುಮಾರು 1697 ಪ್ರಕರಣಗಳು ಗ್ರಾಮಾಂತರ ಪ್ರದೇಶದಲ್ಲಿ ಕಂಡು ಬಂದಿದೆ.
ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡಿದೆ. ಈ ವರ್ಷದ ಶಿವರಾತ್ರಿಯಿಂದ ಯುಗಾದಿ ಮತ್ತು ಜಾತ್ರೆ, ಕೊಂಡ, ಮದುವೆ ಹಬ್ಬಗಳಿಂದ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.
ಶೀಘ್ರವೇ ಆಕ್ಸಿಜನ್ ಟ್ಯಾಂಕರ್; ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಸದ್ಯದ ಪರಿಸ್ಥಿತಿಯಲ್ಲಿ ಆಕ್ಸಿಜನ್ ಬೆಡ್ ಬಗ್ಗೆ ಆತಂಕ ಪಡುವ ಸಮಯ ಬಂದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಸೋಂಕಿತರ ಪೈಕಿ ಶೇ 10 ರಷ್ಟು ಮಂದಿಯಲ್ಲಿ ಶೇ 6 ರಷ್ಟು ಮಂದಿಗೆ ಆಕ್ಸಿಜನ್ ಬೇಕಿದ್ದು, ಅದನ್ನು ಅಳವಡಿಸಲಾಗಿದೆ.
ಜಿಲ್ಲಾಸ್ಪತ್ರೆಗೆ ಆಕ್ಸಿಜನ್ 6 ಸಾವಿರ ಲೀಟರ್ ಪ್ಲಾಂಟ್ ರೆಡಿ ಇದೆ. ಅನುಮತಿ ಹಾಗೂ ಲೈಸನ್ಸ್ ಸಿಕ್ಕಿದೆ ಎರಡು ದಿನಗಳಲ್ಲಿ ಆಕ್ಸಿಜನ್ ಟ್ಯಾಂಕರ್ ಬರಲಿದೆ. ಆಕ್ಸಿಜನ್ ಪ್ಲಾಂಟ್ಗೆ ಭರ್ತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಹೇಳಿದ್ದಾರೆ.












Click it and Unblock the Notifications