ಹಣದ ಜೊತೆ ಸಿಕ್ಕಿಬಿದ್ದ ವ್ಯಕ್ತಿಯನ್ನು ನೋಡಿಯೇ ಇಲ್ಲ: ಪುಟ್ಟರಂಗ ಶೆಟ್ಟಿ
ಬೆಂಗಳೂರು, ಜನವರಿ 05: ನಿನ್ನೆ (ಜನವರಿ 05) ರಂದು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿ ಟೈಪಿಸ್ಟ್ ಎಂದು ಹೇಳಲಾಗಿರುವ ವ್ಯಕ್ತಿ ಬಳಿ 25.76 ಲಕ್ಷ ಹಣ ದೊರೆತಿದೆ. ಆದರೆ ಈ ಹಣಕ್ಕೂ ತಮಗೂ ಸಂಬಂಧವಿಲ್ಲವೆಂದು ಸಚಿವ ಪುಟ್ಟರಂಗ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆತ ನಮ್ಮ ಕಚೇರಿ ಸಿಬ್ಬಂದಿ ಅಲ್ಲ, ಆತನ ಬಳಿ ಸಿಕ್ಕಿರುವ ಹಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವರು ಹೇಳಿದ್ದಾರೆ.
ಮಂಜುನಾಥ ಮತ್ತು ಕೃಷ್ಣಪ್ಪ ಎಂಬ ಇಬ್ಬರು ಪಿಎಗಳಿದ್ದಾರೆ ನನ್ನ ಕಚೇರಿಯಲ್ಲಿದ್ದಾರೆ, ಇದರಲ್ಲಿ ಮಂಜುನಾಥ ಎಂಬಾತ ನನ್ನ ಸಹಿ ಪೋರ್ಜರಿ ಮಾಡಿದ್ದ ಹಾಗಾಗಿ ಅವನನ್ನು ಕೆಲಸದಿಂದ ತೆಗೆದುಹಾಕಿದ್ದೆ. ಕೃಷ್ಣಪ್ಪ ನಿನ್ನೆ ಕಚೇರಿಗೆ ಬಂದಿದ್ದ ಆತನ ಮೇಲೆ ನನಗೆ ಅನುಮಾನವಿದೆ ಎಂದು ಸಚಿವರು ಹೇಳಿದ್ದಾರೆ.

ಮೋಹನ್ ನನ್ನ ಪಿಎ ಅಲ್ಲ
ಈಗ ಹಣದೊಂದಿಗೆ ಸಿಕ್ಕಿಬಿದ್ದರುವ ಮೋಹನ್ ನನ್ನ ಕಚೇರಿಯ ಪಿಎ ಅಲ್ಲ ಆತ ಗುತ್ತಿಗೆ ಆಧಾರದ ಮೇಲೆ ನೌಕರಿಯಲ್ಲಿರುವ ಟೈಪಿಸ್ಟ್ ನಾನು ಆತನನ್ನು ನೋಡಿಯೇ ಇಲ್ಲ ಎಂದು ಸಚಿವರು ಹೇಳಿದ್ದಾರೆ.

ತನಿಖೆಗೆ ನಾನು ತಯಾರು
ಹಣದ ಬಗ್ಗೆ ತನಿಖೆ ಮಾಡಿದರೆ ನನ್ನದೇನೂ ಅಭ್ಯಂತರವಿಲ್ಲ ಎಲ್ಲಾ ರೀತಿಯ ತನಿಖೆಗೂ ನಾನು ಸಿದ್ಧ ಎಂದು ಪುಟ್ಟರಂಗ ಶೆಟ್ಟಿ ಅವರು ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಸಹ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಇಂದು ಮಹಜರು ಮಾಡಿದ ಪೊಲೀಸರು
ನಿನ್ನೆ ವಿಧಾನಸೌಧದ ಬಳಿ 25.76 ಲಕ್ಷ ಹಣ ಹೊಂದಿದ್ದ ಮೋಹನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆತ ಸಚಿವ ಪುಟ್ಟರಂಗಶೆಟ್ಟಿ ಅವರ ಟೈಪಿಸ್ಟ್ ಎನ್ನಲಾಗಿತ್ತು. ಇಂದು ಆತನನ್ನು ಕರೆದುಕೊಂಡು ಬಂದು ಪೊಲೀಶರು ಸ್ಥಳ ಮಹಜರು ಮಾಡಿದ್ದಾರೆ.

ರಾಜೀನಾಮೆಗೆ ಒತ್ತಾಯ
ಹಣ ದೊರೆತ ಪ್ರಕರಣದ ಬಗ್ಗೆ ವಿರೋಧ ಪಕ್ಷಗಳ ಗಂಭೀರವಾಗಿ ತೆಗೆದುಕೊಂಡಿದ್ದು, ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಅವರು ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಸಹ ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ.












Click it and Unblock the Notifications