ಕೊಂಗಳ್ಳಿ ಮಲ್ಲಿಕಾರ್ಜುನನಿಗೆ ದೀಪಾವಳಿಯಂದು ನಡೆಯುತ್ತೆ ವಿಶೇಷ ಪೂಜೆ!
ಚಾಮರಾಜನಗರ, ನವೆಂಬರ್.೦6: ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ತಾಳವಾಡಿ ಸಮೀಪ ಶ್ರೀ ಕೊಂಗಳ್ಳಿ ಬೆಟ್ಟವು ಅರಣ್ಯದ ನಡುವೆಯಿದ್ದು, ಇಲ್ಲಿನ ಇತಿಹಾಸ ಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯವು ಸದಾ ಭಕ್ತರನ್ನು ಸೆಳೆಯುತ್ತದೆ. ಅದರಲ್ಲೂ ದೀಪಾವಳಿ ಹಬ್ಬದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದಿದೆ.
ಹಾಗೆ ನೋಡಿದರೆ ಗುಂಡ್ಲುಪೇಟೆಯಿಂದ ಸುಮಾರು 32 ಕಿ.ಮೀ. ದೂರದಲ್ಲಿ ತಮಿಳುನಾಡಿನ ತಾಳವಾಡಿ ಪಿರ್ಕಾದಲ್ಲಿರುವ ಕೊಂಗಳ್ಳಿ ಬೆಟ್ಟವು ನಿಸರ್ಗ ಸೌಂದರ್ಯದಿಂದ ಕೂಡಿದ್ದು, ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ಸ್ವಾಮಿ ಸುತ್ತಮುತ್ತಲ ಜನರ ಆರಾಧ್ಯ ದೈವನಾಗಿದ್ದಾನೆ.
ಪ್ರತಿ ದಿನವೂ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ದೀಪಾವಳಿ ಹಬ್ಬದಂದು ಸುತ್ತಮುತ್ತಲ ಜನರಲ್ಲದೆ ದೂರದ ಊರುಗಳಿಂದಲೂ ಇಲ್ಲಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತರು ಬೇಡಿಕೊಳ್ಳುತ್ತಾರೆ.
ಮುಡುಕುತೊರೆಯಿಂದ ಬಂದ ಮಲ್ಲಿಕಾರ್ಜುನ ಸ್ವಾಮಿಯನ್ನು ಕೊಂಗಳ್ಳಿಯ ದಟ್ಟಕಾಡು, ಪ್ರಶಾಂತ ವಾತಾವರಣ ಸೆಳೆಯಿತಂತೆ. ಹೀಗಾಗಿ ಜಪತಪ ಮಾಡಲು ಇದೇ ಸೂಕ್ತ ಜಾಗವೆಂದು ತೀರ್ಮಾನಿಸಿ ನೆಲೆ ನಿಂತರು ಎಂದು ಹೇಳಲಾಗುತ್ತದೆ. ಆದರೆ ಈ ದೇಗುಲಕ್ಕೆ ಮಹಿಳಾ ಭಕ್ತರಿಗೆ ಪ್ರವೇಶ ನಿಷಿದ್ಧವಾಗಿದೆ. ಇಲ್ಲಿಗೆ ತೆರಳಿದರೆ ತೊಂದರೆಯಾಗುತ್ತದೆ ಎಂಬ ಮಾತುಗಳಿವೆ.
ಹೀಗಾಗಿ ಯಾರೂ ಕೂಡ ತೆರಳುವುದಿಲ್ಲ.

ಸಾಮೂಹಿಕ ಭೋಜನ
ದೀಪಾವಳಿ ಹಬ್ಬದಂದು ಜಿಲ್ಲೆ ಮಾತ್ರವಲ್ಲದೆ ಹೊರ ಊರುಗಳಿಂದ ಆಗಮಿಸುವ ಭಕ್ತರು ಹರಕೆ ಸಲ್ಲಿಸಿ ದೇವರ ದರ್ಶನ ಪಡೆದರೆ, ಇನ್ನು ಕೆಲವರು ಹುಲಿವಾಹನ ಸೇವೆ ಹಾಗೂ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಹರಕೆ ಹೊತ್ತವರು ಮಾತ್ರವಲ್ಲದೆ ಕೆಲವು ಗ್ರಾಮಗಳ ಜನರು ಸಾಮೂಹಿಕವಾಗಿ ತೆರಳಿ ಪೂಜೆ ಸಲ್ಲಿಸಿ, ಸಾಮೂಹಿಕ ಭೋಜನ ಮಾಡಿ ಬರುತ್ತಾರೆ.

ಪಾತ್ರೆ ವ್ಯವಸ್ಥೆ
ತಮಿಳುನಾಡಿನ ಸರ್ಕಾರವು ಬೆಟ್ಟದಲ್ಲಿ ವಸತಿ ಗೃಹ, ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ, ಭಕ್ತರಿಗೆ ಅಡುಗೆ ಮಾಡಲು ಬೇಕಾದ ಪಾತ್ರೆಗಳನ್ನು ವ್ಯವಸ್ಥೆ ಮಾಡಿದೆ. ಈ ಹಿಂದೆ ಬೆಟ್ಟಕ್ಕೆ ತೆರಳಿದವರು ಅಲ್ಲಿಯೇ ಉಳಿದುಕೊಳ್ಳಲು ಅವಕಾಶವಿತ್ತು. ಆದರೆ ಈ ಅರಣ್ಯವಲಯ ಹುಲಿಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಕಾರಣದಿಂದ ಭಕ್ತರಿಗೆ ಈಗ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಮಾತ್ರ ಭೇಟಿ ಹಿಂತಿರುಗಬೇಕಾಗಿದೆ.

ಕಾಡು ಪ್ರಾಣಿಗಳಿವೆ
ಕೊಂಗಳ್ಳಿ ಬೆಟ್ಟ ಪ್ರದೇಶವು ತಮಿಳುನಾಡು ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿದ್ದು, ಕಳೆದ ಫೆಬ್ರವರಿ ತಿಂಗಳಿಂದ ಇಲ್ಲಿ ರಾತ್ರಿ ತಂಗುವುದಾಗಲೀ, ರಾತ್ರಿ 6 ಗಂಟೆಯ ನಂತರ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ಹುಲಿಸಂರಕ್ಷಣಾ ಪ್ರದೇಶವಾಗಿರುವ ಇಲ್ಲಿ ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಮೊದಲ ದೀಪಾವಳಿ
ಹೀಗಾಗಿ ನಿಗದಿತ ಅವಧಿಯಲ್ಲಿ ಮಾತ್ರ ಈ ದೇಗುಲಕ್ಕೆ ತೆರಳಬೇಕಾಗಿದೆ. ನಿರ್ಬಂಧ ವಿಧಿಸಿದ ಬಳಿಕ ನಡೆಯುತ್ತಿರುವ ಮೊದಲ ದೀಪಾವಳಿ ವಿಶೇಷ ಪೂಜೆ ಇದಾಗಿದೆ. ಅದು ಏನೇ ಇರಲಿ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳುವ ಭಕ್ತರ ಸಂಖ್ಯೆಯಂತು ಕಡಿಮೆಯಾಗುವುದಿಲ್ಲ.












Click it and Unblock the Notifications