ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಮತ್ತೆ ಕೇರಳ ಮನವಿ

ಚಾಮರಾಜನಗರ, ಜನವರಿ 28: ಬಂಡೀಪುರ ಅರಣ್ಯ ಪ್ರದೇಶದೊಳಗೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸಲೇಬೇಕೆಂಬ ಹಟಕ್ಕೆ ಕೇರಳ ಸರ್ಕಾರ ಬಿದ್ದಿದೆ. ಹೀಗಾಗಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿರುವ ಕ್ರಮ ತಾರತಮ್ಯದಿಂದ ಕೂಡಿದೆ ಎಂದು ಸುಪ್ರೀಂಕೋರ್ಟ್ ‌ಗೆ ಸಲ್ಲಿಸಿರುವ ಮನವಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಾಗಿರುವುದರಿಂದ ಇದರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ಇದನ್ನು ತೆರವುಗೊಳಿಸಲೇಬೇಕೆಂದು ಕೇರಳ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಲೇ ಬಂದಿದೆ. ಕೇರಳದ ವಯನಾಡು ಲೋಕಸಭಾ ಸದಸ್ಯರಾಗಿರುವ ರಾಹುಲ್ ಗಾಂಧಿ ಮೂಲಕವೂ ಸಂಸತ್‌ನಲ್ಲಿ ಗಮನಸೆಳೆಯುವ ಪ್ರಯತ್ನ ಮಾಡಿತ್ತು.

 ವೈಜ್ಞಾನಿಕ ಅಧ್ಯಯನವಿಲ್ಲದೆ ಸಂಚಾರ ನಿಷೇಧ

ವೈಜ್ಞಾನಿಕ ಅಧ್ಯಯನವಿಲ್ಲದೆ ಸಂಚಾರ ನಿಷೇಧ

ಈ ನಡುವೆ ಬಂಡೀಪುರದ ಮೂಲಕ ಸಾಗುವ ಹೆದ್ದಾರಿ ಬದಲಿಗೆ ಪರ್ಯಾಯ ಮಾರ್ಗವನ್ನು ಅಭಿವೃದ್ಧಿಪಡಿಸುವ ಬಗ್ಗೆ ಕೇಂದ್ರ ಸರ್ಕಾರ ಸಲಹೆ ನೀಡಿತ್ತು. ಆದರೆ ಇದೀಗ ಕೇರಳ ಸರ್ಕಾರ ಸುಪ್ರೀಂಕೋರ್ಟ್ ‌ಗೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಯಾವುದೇ ವೈಜ್ಞಾನಿಕ ಅಧ್ಯಯನ ಅಥವಾ ಆಧಾರವಿಲ್ಲದೆ ನಿಷೇಧ ಹೇರಿದ್ದರಿಂದ ಸಾರ್ವಜನಿಕರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ತಿಳಿಸಿದೆ. ಅಲ್ಲದೆ ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶದ ಕನ್ಹಾ ಹಾಗೂ ಪೆಂಚ್ ಹುಲಿ ಸಂರಕ್ಷಿತ ಪ್ರದೇಶಗಳ ಬಳಿಯ ಹೆದ್ದಾರಿಗಳನ್ನು ಉಲ್ಲೇಖ ಮಾಡಿದ್ದು ಅಲ್ಲಿ ಸಂಚಾರಕ್ಕೆ ನಿರ್ಬಂಧ ಹೇರದೆ, 2.2 ಕಿ.ಮೀವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ- 212ರಲ್ಲಿ 5 ಎಲಿವೇಟೆಡ್ ಕಾರಿಡಾರ್ ನಿರ್ಮಿಸುವಂತೆ ಕೇಂದ್ರದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ಮೊದಲು ನೀಡಿರುವ ಸಲಹೆಯನ್ನು ಪಾಲಿಸುವಂತೆಯೂ ಮನವಿ ಮಾಡಿಕೊಂಡಿದೆ. ಜತೆಗೆ ಈ ಕಾಮಗಾರಿಗೆ ಇದಕ್ಕೆ ಅಗತ್ಯವಿರುವ 250 ಕೋಟಿ ರೂಪಾಯಿಗಳ ಅನುದಾನವನ್ನು ಕೇರಳ ರಾಜ್ಯ ಸರ್ಕಾರ ಬಜೆಟ್ ‌ನಲ್ಲಿ ಮೀಸಲಿರಿಸಿದೆ ಎಂದು ಹೇಳಿಕೆಯಲ್ಲಿ ವಿವರಿಸಿದೆ.

 ಮುಕ್ತ ಸಂಚಾರದ ಹಕ್ಕು ಕಿತ್ತುಕೊಳ್ಳಲಾಗಿದೆ

ಮುಕ್ತ ಸಂಚಾರದ ಹಕ್ಕು ಕಿತ್ತುಕೊಳ್ಳಲಾಗಿದೆ

ಇನ್ನು ಕೇಂದ್ರ ಸರ್ಕಾರ ಬಂಡೀಪುರ ಬಳಿಯ ಹೆದ್ದಾರಿಗೆ ಪರ್ಯಾಯವಾಗಿ ಸೂಚಿಸಿರುವ ಮಾರ್ಗದಲ್ಲೂ ವನ್ಯಜೀವಿಗಳ ಮುಕ್ತ ಸಂಚಾರ ಇದೆ. ಅಂದಾಜು 40 ಕಿಲೋ ಮೀಟರ್‌ನಷ್ಟು ಅಂತರ ಹಚ್ಚಿಸುವ ಈ ಮಾರ್ಗದ ಅಭಿವೃದ್ಧಿಗಾಗಿ ಅಗತ್ಯ ಭೂಸ್ವಾಧೀನ ಪ್ರಕಿಯೆ ಕೈಗೊಳ್ಳಲು ಮತ್ತಷ್ಟು ಸಮಯ ವ್ಯಯವಾಗಲಿದೆ. ದೇಶದ ಪ್ರಮುಖ 50 ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಆಯಾ ಪ್ರದೇಶದಲ್ಲಿನ ವಾಹನ ಸಂಚಾರ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ರಾತ್ರಿ ಸಂಚಾರ ನಿಷೇಧಿಸುವಂತೆಯೂ ಶಿಫಾರಸು ಮಾಡಿಲ್ಲ. ಆದರೂ, ಸಂಚಾರ ನಿಷೇಧಿಸಿರುವ ಸ್ಥಳೀಯ ಪ್ರಾಧಿಕಾರದ ಕ್ರಮವು ಮೋಟಾರು ವಾಹನ ಕಾಯ್ದೆ- 1988ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮುಕ್ತ ಸಂಚಾರದ ಮೂಲಭೂತ ಹಕ್ಕನ್ನು ಕಿತ್ತುಕೊಂಡಿದೆ ಎಂದು ಕೇರಳ ಸರ್ಕಾರ ಆರೋಪಿಸಿದೆ.

 ಬೆಂಗಳೂರು- ಮೈಸೂರಿಗೆ ತೆರಳಲು ಸಮಸ್ಯೆ

ಬೆಂಗಳೂರು- ಮೈಸೂರಿಗೆ ತೆರಳಲು ಸಮಸ್ಯೆ

ಸಂಚಾರ ನಿಷೇಧದಿಂದಾಗಿ ಬೆಂಗಳೂರು ಹಾಗೂ ಮೈಸೂರಿಗೆ ತೆರಳಲು ಕೇರಳದ ಕೋಯಿಕ್ಕೋಡ್ ಮತ್ತು ವಯನಾಡು ನಿವಾಸಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ದಿನಬಳಕೆಯ ಅಗತ್ಯ ವಸ್ತುಗಳ ಸಾಗಣೆಗೂ ಅನನುಕೂಲವಾಗುತ್ತಿದೆ. ಮೇಲಾಗಿ ವನ್ಯಜೀವಿಗಳು ರಾತ್ರಿ ಸಂಚಾರ ನಿರ್ಬಂಧಕ್ಕೆ ತಕ್ಕುದಾಗಿ ಹೊಂದಿಕೊಂಡಿವೆ ಎಂಬ ಕರ್ನಾಟಕದ ವಾದವೂ ಸ್ವೀಕಾರಾರ್ಹವಲ್ಲ ಎಂದು ದೂರಲಾಗಿದೆ.

 ಸುಪ್ರೀಂ ತೀರ್ಮಾನ ಕಾದು ನೋಡಬೇಕು

ಸುಪ್ರೀಂ ತೀರ್ಮಾನ ಕಾದು ನೋಡಬೇಕು

ಸದ್ಯ ಕೇರಳ ಸರ್ಕಾರ ಸುಪ್ರೀಂಕೋರ್ಟ್ ‌ಗೆ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ ಸುಪ್ರೀಂ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈಗಾಗಲೇ ಬಂಡೀಪುರ ಅರಣ್ಯ ವ್ಯಾಪ್ತಿಯ ಹೆದ್ದಾರಿಯಲ್ಲಿ ವಾಹನಗಳಿಗೆ ಸಿಲುಕಿ ಹಲವು ಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಜತೆಗೆ ವನ್ಯ ಪ್ರಾಣಿಗಳಿಂದಲೂ ಜನರಿಗೆ ತೊಂದರೆಯಾಗಿದೆ. ಹೀಗಿರುವಾಗ ಕೇರಳ ಸರ್ಕಾರ ಹೇಳುವಂತೆ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಿದ್ದೇ ಆದರ ಪರಿಣಾಮಗಳು ಗಂಭೀರವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+