ಕನ್ನಡಿಗರು ಹಾಗೂ ತಮಿಳಿಗರ ಜಾತ್ರೆ ಸಂಭ್ರಮ, ಈ ಬಾರಿ ಪ್ರಾಣಿ ಬಲಿ ಬದಲು ಪೊಂಗಲ್ ಪೂಜೆ-ಎಲ್ಲಿ ಗೊತ್ತಾ?
ಚಾಮರಾಜನಗರ, ಜನವರಿ, 18: ಇಷ್ಟು ವರ್ಷಗಳ ದೇಗುಲ ಆವರಣದಲ್ಲಿ ಪ್ರಾಣಿ ಬಲಿ ಕೊಟ್ಟು ಆಚರಿಸುತ್ತಿದ್ದ ಜೋಡಿ ಮುನಿಯಪ್ಪನ ಜಾತ್ರಾ ಮಹೋತ್ಸವ ಇದೇ ಮೊದಲ ಬಾರಿ ಸಾತ್ವಿಕ ಪೂಜೆ ಸಲ್ಲಿಸಿ ಸಂಪನ್ನಗೊಂಡಿದೆ.
ಹನೂರು ತಾಲೂಕಿನ ತಮಿಳುನಾಡು ಗಡಿಭಾಗದಲ್ಲಿರುವ ಕೂಡ್ಲೂರಿನಲ್ಲಿ 3 ವರ್ಷಕ್ಕೊಮ್ಮೆ ಮುನಿಯಪ್ಪನ ಜಾತ್ರೆ ನಡೆಯಲಿದ್ದು, ಇಷ್ಟು ವರ್ಷಗಳ ಕಾಲ ದೇವಾಲಯ ಆವರಣದಲ್ಲಿ ಪ್ರಾಣಿ ಬಲಿ ಕೊಡಲಾಗುತ್ತಿತ್ತು. ಆದರೆ, ಪ್ರಾಣಿ ಬಲಿ ನಿಷೇದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ ಪರಿಣಾಮ ಪ್ರಾಣಿ ಬಲಿ ಬದಲಿಗೆ ಪೊಂಗಲ್ ಎಡೆ ಹಾಕಿ ಭಕ್ತರು ಪೂಜೆ ಸಲ್ಲಿಸಿದ್ದಾರೆ.

ಹನೂರು ತಾಲೂಕಿನ ಕೂಡ್ಲೂರು ಗ್ರಾಮ ತಮಿಳುನಾಡಿಗೆ ತೀರಾ ಸಮೀಪ ಇರುವ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಅಷ್ಟೇ ಅಲ್ಲದೇ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿ ಆಗಿದ್ದರು.
ಕಳೆದ ಎರಡು ದಿನಗಳಿಂದ ನಡೆದ ಈ ಜಾತ್ರೆಯಲ್ಲಿ ಪೊಲೀಸರು ಆಯಕಟ್ಟಿನ ಸ್ಥಳದಲ್ಲಿ ಜಾತ್ರೆಗೆ ಬರುವ ರಸ್ತೆಯ ಮಾರ್ಗಗಳಲ್ಲೆಲ್ಲ ನಾಕಾಬಂಧಿ ಹಾಕಿ ಪ್ರಾಣಿ ಸಾಗಾಟ ತಡೆದಿದ್ದರು. ಜೊತೆಗೆ, ಪ್ರಾಣಿ ದಯಾ ಸಂಘದ ದಯಾನಂದ ಶ್ರೀ ಸಾತ್ವಿಕ ಪೂಜೆ ನಡೆಸಬೇಕೆಂದು ಒತ್ತಾಯ ಮಾಡಿದ್ದರ ಪರಿಣಾಮ ದೇಗುಲದಲ್ಲಿ ಪ್ರಾಣಿ ಬಲಿಗೆ ಬ್ರೇಕ್ ಹಾಕಿ ಪೊಂಗಲ್ ಪೂಜೆ ನಡೆಸಿದ್ದಾರೆ.
ಹೋರಿ ಬೆದರಿಸುವ ಸಂಭ್ರಮ: ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಇಂದು (ಜನವರಿ 17) ಸಂಕ್ರಾತಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸಿ ಗ್ರಾಮಸ್ಥರು ಸಂಭ್ರಮಿಸಿದರು.
ಸಂಕ್ರಾತಿ ದಿನದಂದು ಕಿಚ್ಚು ಹಾಯಿಸುವ ಸಂಪ್ರದಾಯದಂತೆ ಗೋಪಿನಾಥಂ ಗ್ರಾಮದಲ್ಲಿ ಹೋರಿ ಬೆದರಿಸಿದ್ದು, ಈ ವೇಳೆ ಯುವಕರು ಸೇರಿದಂತೆ ಹಿರಿಯರು ಕೂಡ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಗ್ರಾಮದ ಮಾರಿಯಮ್ಮ ದೇಗುಲದ ಮುಂಭಾಗ ಜಮಾಯಿಸಿದ ಹೊಗೆನಕಲ್, ಆಲಂಬಾಡಿ, ಪುದೂರಿನ ಗ್ರಾಮಸ್ಥರು ಎತ್ತುಗಳಿಗೆ ಬೆದರು ಬೊಂಬೆ ತೋರಿಸಿ ರೊಚ್ಚಿಗೆಬ್ಬಿಸಿ ಕಾದಾಡಿದ್ದಾರೆ.
ಇಂದು 50 ಎತ್ತುಗಳನ್ನು ಬೆದರಿಸಿದ್ದು, ಎತ್ತುಗಳಿಗೆ ಎಳೆಯುವ ಶಕ್ತಿ ಹೆಚ್ಚಾಗಲಿ, ದುಷ್ಟ ಶಕ್ತಿಗಳು ಹತ್ತಿರ ಸುಳಿಯದಿರಲೆಂದು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹೋರಿಯ ಎಡ-ಬಲವನ್ನು ಹಗ್ಗದಿಂದ ಹಿಡಿಯುವ 10ಕ್ಕೂ ಹೆಚ್ಚು ಯುವಕರು, ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ಚಿಗೆಬ್ಬಿಸುತ್ತಾರೆ.
10-12 ಮಂದಿಯ ಹಿಡಿತವನ್ನು ಲೆಕ್ಕಿಸದ ಎತ್ತುಗಳು ಬೆದರುಬೊಂಬೆಯನ್ನು ತಿವಿದು, ಬಿಸಾಕುತ್ತವೆ. ಇದು ಜಲ್ಲಿಕಟ್ಟಿನಷ್ಟು ಅಪಾಯಕಾರಿ ಅಲ್ಲ. ಆದರೂ ಜಾಗೃತರಾಗಿರುವುದು ಅವಶ್ಯಕ. ರೈತರ ಹಬ್ಬ ಸಂಕ್ರಾಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದು ವಿಶೇಷತೆಯೊಂದಿಗೆ ಆಚರಿಸಲಾಗುತ್ತಿದೆ. ಹೋರಿ ಬೆದರಿಸೋದು ಸಂಕ್ರಾಂತಿ ಸಡಗರವನ್ನು ಈ ಗ್ರಾಮದಲ್ಲಿ ಇಮ್ಮಡಿಗೊಳಿಸಿದೆ.












Click it and Unblock the Notifications