ಚಾಮರಾಜನಗರ: ರಾತ್ರಿ ಸುರಿದ ಮಳೆಗೆ ಜ್ಯೋತಿಗೌಡನಪುರ ಗ್ರಾಮ ಜಲಾವೃತ
ಚಾಮರಾಜನಗರ, ಸೆಪ್ಟೆಂಬರ್, 05: ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಇಂದು ಮುಂಜಾನೆವರೆಗೂ ಮಳೆರಾಯ ಆರ್ಭಟಿಸಿ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಭಾರಿ ಮಳೆ ಸುರಿದ ಕಾರಣ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮ ಜಲಾವೃತವಾಗಿದ್ದು, ಜನರ ಪಾಡು ಹೇಳತೀರಾಗಿದೆ. ಇಡೀ ಗ್ರಾಮದ ಮುಖ್ಯ ರಸ್ತೆಗಳೆಲ್ಲಾ ಜಲಮಯವಾಗಿದ್ದು, ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಜನರು ರಾತ್ರಿ ಮಳೆಯಲ್ಲೇ ನೆನೆದು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಚಾಮರಾಜನಗರ ತಾಲೂಕಿನ ಹರದನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ದೊಡ್ಡಮೋಳೆ, ಕೃಷಿ ವಿಜ್ಞಾನ ಕೇಂದ್ರ, ಚಂದುಕಟ್ಟೆ ಮೋಳೆ ಗ್ರಾಮಕ್ಕೆ ನೀರು ನುಗ್ಗಿದೆ. ರಸ್ತೆ ಮೇಲೆ ಕೆರೆಯಂತೆ ನೀರು ಹರಿಯುತ್ತಿರುವುದರಿಂದ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
ಹನೂರು ತಾಲೂಕಿನ ಹುಬ್ಬೆಹುಣಸೆ ಜಲಾಶಯ ತುಂಬಿದ್ದು, ತಟ್ಟೆಹಳ್ಳ ಎಂಬುದರ ಮೂಲಕ ನೀರು ಹರಿದು ಹೋಗುತ್ತಿದೆ. ಅಲ್ಲಿನ ಜನರಿಗೆ ಹಳ್ಳ ದಾಟದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದಾರೆ. ಹೀಗೆ ಜಿಲ್ಲೆಯಲ್ಲಿ ಮಳೆರಾಯ ಆರ್ಭಟಿಸಿ ಜನರ ನೆಮ್ಮದಿಯನ್ನು ಕಸಿದಿದ್ದಾನೆ.

ಮನೆಗೋಡೆ ಕುಸಿದು ಯುವಕ ಸಾವು:
ಚಾಮರಾಜನಗರದ ತಲೂಕಿನ ದಡದಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದ್ದು, 32 ವರ್ಷದ ಮೂರ್ತಿ ಎಂಬ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಲಗಿದ್ದ ವೇಳೆ ನಿರಂತರ ಮನೆಗೋಡೆ ತಲೆಯ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೂರ್ತಿ ಮೃತಪಟ್ಡಿದ್ದಾರೆ. ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಲಾಗಿದೆ. ಬೂದಿಪಡಗ ಸೇತುವೆ ಮುಳುಗಡೆಯಾಗಿ ಸೇತುವೆ ಮೇಲೆ 3 ಅಡಿ ನೀರು ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸೇತುವೆ ಮುಳುಗಡೆ ಆಗಿರುವುದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಸೇತುವೆ ಮೇಲೆ ವಿದ್ಯುತ್ ಕಂಬ ಕೂಡ ಬಿದ್ದಿದ್ದು, ಜನರು ಸೇತುವೆ ಬಳಿ ಹೋಗಲು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಗ್ರಾಮದ ಕಿತ್ತೂರು ಚೆನ್ನಮ್ಮ, ಆಶ್ರಮ ಶಾಲೆಗಳ ಶಿಕ್ಷಕರು, ಕೂಲಿ ಕಾರ್ಮಿಕರು ಸೇತುವೆ ದಾಟಲಾಗದೇ ಪರದಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ಕೆರೆಯಂತಾಗಿದ್ದು, ಪೊಲೀಸ್ ಜೀಪ್ಗಳು ಸಂಪೂರ್ಣ ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಮಳೆ ಅಬ್ಬರಕ್ಕೆ ತತ್ತರಿಸಿದ ಚಾಮರಾಜನಗರ:
350 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೋಟಗಾರಿಕಾ ಬೆಳೆಗಳು ಜಲಾವೃತವಾಗಿದ್ದು, 126 ಹೆಕ್ಟೇರ್ನಷ್ಟು ಬೆಳೆಗಳು ನಷ್ಟವಾಗಿದೆ. 16 ಸೇತುವೆ ಮತ್ತು ಮೋರಿಗಳು ಕುಸಿದಿವೆ. 35 ಅಂಗನವಾಡಿ ಕಟ್ಟಡಗಳು, 77 ಶಾಲೆಗಳು, 11 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೀಡಾಗಿವೆ. 31 ವಿದ್ಯುತ್ ಕಂಬಗಳು ಮುರಿದಿವೆ. ಎರಡು ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಆರು ಕಟ್ಟಡಗಳು ಭಾಗಶಃ ಹಾನಿಗೀಡಾಗಿವೆ. ಯಳಂದೂರು ತಾಲೂಕಿನ ಕೆಸ್ತೂರು, ಗುಂಬಳ್ಳಿ, ಗಣಿಗನೂರು, ಯರಗಂಬಳ್ಳಿ ಕೆರೆಗಳು ಹಾಗೂ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಯಡಿಯೂರು ಹೊಸ ಕೆರೆಗೆ ಹಾನಿ ಆಗಿದೆ.

ಮಳೆಯಿಂದಾಗಿರುವ ಹಾನಿಯ ಬಗ್ಗೆ ಪ್ರಾಥಮಿಕ ಅಂದಾಜು ಮಾಡಲಾಗಿದ್ದು, ನಿಖರ ಮಾಹಿತಿಗಾಗಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಕೆಲವು ಕಡೆ 20 ವರ್ಷಗಳ ಕೆರೆಕಟ್ಟೆಗಳ ಕೋಡಿ ಬಿದ್ದಿವೆ. ಮತ್ತೊಂದೆಡೆ 30 ವರ್ಷಗಳ ಬಳಿಕ ಕೆರೆಕಟ್ಟೆಗಳ ಕೋಡಿ ಬಿದ್ದಿವೆ. ಆದರೆ ಇನ್ನು ಕೂಡ ಜಿಲ್ಲೆಯ 19 ಕೆರೆಗಳು ಒಣಗಿವೆ ಎಂದು ಸಣ್ಣ ನೀರಾವರಿ ಇಲಾಖೆಯು ಮಾಹಿತಿ ನೀಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ 64 ಕೆರೆಗಳಲ್ಲಿ 27 ಕೆರೆಗಳು ಪೂರ್ಣವಾಗಿ ತುಂಬಿವೆ. ಶೇಕಡಾ 30ರಷ್ಟು 6 ಕೆರೆಗಳು, ಶೇಕಡಾ 50ರಷ್ಟು 1 ಕೆರೆ, ಶೇಕಡಾ 50-99ರಷ್ಟು 11 ಕೆರೆಗಳು ಭರ್ತಿಯಾಗಿದ್ದು, 19 ಕೆರೆಗಳು ಹನಿ ನೀರಿಲ್ಲದೇ ಒಣಗಿವೆ. 19 ಕೆರೆಗಳಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ 11, ಚಾಮರಾಜನಗರ, ಯಳಂದೂರಿನಲ್ಲಿ ತಲಾ 1 ಮತ್ತು ಹನೂರು ತಾಲೂಕಿನಲ್ಲಿ 6 ಕೆರೆಗಳು ಖಾಲಿ ಆಗಿವೆ ಎಂದು ನೀರಾವರಿ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications