ಚಾಮರಾಜನಗರದಲ್ಲಿ ಗುರು-ಶಿಷ್ಯರ ನಡುವೆ ಪ್ರಬಲ ಸ್ಪರ್ಧೆ!

ಚಾಮರಾಜನಗರ, ಏಪ್ರಿಲ್ 02: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ದೋಸ್ತಿ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮತ್ತು ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿರುವುದು ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ.

ಜಿಲ್ಲೆಯಲ್ಲಿ ಧ್ರುವನಾರಾಯಣ್ ಅವರಿಗೆ ಪೈಪೋಟಿ ನೀಡಬಲ್ಲ ಅಭ್ಯರ್ಥಿಯೇ ಇಲ್ಲ. ಹೀಗಾಗಿ ಗೆಲುವು ನಮ್ಮದೇ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದರು. ಏಕೆಂದರೆ ಚಾಮರಾಜನಗರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಮತ್ತು ತೀವ್ರ ರೀತಿಯಲ್ಲಿ ಪೈಪೋಟಿ ನೀಡುವ ಅಭ್ಯರ್ಥಿಗಳು ಇರಲಿಲ್ಲ ಹೀಗಾಗಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಚಾರವೂ ಇತ್ತು.

ಒಂದು ಕಾಲದಲ್ಲಿ ಧ್ರುವನಾರಾಯಣ್ ಗೆ ಪ್ರಬಲ ಸ್ಪರ್ಧೆ ನೀಡಿ ಕೇವಲ ಒಂದೇ ಒಂದು ಮತದಿಂದ ಸೋಲನ್ನಪ್ಪಿದ್ದ ಮಾಜಿ ರಾಜ್ಯಪಾಲರಾದ ಬಿ. ರಾಚಯ್ಯ ಅವರ ಮಗ ಎ.ಆರ್.ಕೃಷ್ಣಮೂರ್ತಿ ಅವರು ಬಿಜೆಪಿಯಲ್ಲಿ ಪ್ರಬಲನಾಯಕರೆಂದು ಗುರುತಿಸಿಕೊಂಡಿದ್ದರು. ಅವರೊಬ್ಬರೇ ಧ್ರುವನಾರಾಯಣ್ ಎದುರು ನಿಂತು ಸ್ಪರ್ಧೆ ನೀಡಬಲ್ಲ ನಾಯಕ ಎಂದು ಎಲ್ಲರೂ ನಂಬಿದ್ದರು.

ಆದರೆ ಬದಲಾದ ಕಾಲಮಾನದಲ್ಲಿ ಎ.ಆರ್.ಕೃಷ್ಣಮೂರ್ತಿ ಅವರು ಕಳೆದ ವಿಧಾನ ಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ನ ಮನೆಬಾಗಿಲು ತಟ್ಟಿಯಾಗಿತ್ತು. ಬಿಜೆಪಿಯ ಪ್ರಬಲ ನಾಯಕನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು. (ಅಲ್ಲಿ ಅವರಿಗೆ ಯಾವುದೇ ಸ್ಥಾನಮಾನ ನೀಡದೆ ಮೂಲೆಗುಂಪು ಮಾಡಿದರು. ಇವತ್ತು ಅಲ್ಲಿಯೂ ಇರಲಾಗದೆ, ಇತ್ತ ಬಿಜೆಪಿಗೂ ಬರಲಾರದ ಸ್ಥಿತಿ ಕೃಷ್ಣಮೂರ್ತಿಯವರದ್ದಾಗಿದೆ.)

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅದೆಲ್ಲವನ್ನು ಆಚೆಗಿಟ್ಟು ನೋಡುವುದಾದರೆ ಚಾಮರಾಜನಗರದಲ್ಲಿ ತಮಗೆ ಪ್ರಬಲ ಸ್ಪರ್ಧಿಯೇ ಇಲ್ಲ ಎಂದು ಆರಾಮಾಗಿಯೇ ಇದ್ದ ಆರ್.ಧ್ರುವನಾರಾಯಣ್ ಗೆ ಈಗ ವಿ.ಶ್ರೀನಿವಾಸಪ್ರಸಾದ್ ಸ್ಪರ್ಧೆಯ ಬಳಿಕ ಆತಂಕ ಶುರುವಾಗಿದೆ. ಹೇಗೆಂದು ತಿಳಿಯಲು ಈ ಲೇಖನ ಓದಿ...

 ಇವರನ್ನು ಬಳಸಿಕೊಂಡರೆ ಸಿಗುವ ಮತವು ಸಿಗಲ್ಲ

ಇವರನ್ನು ಬಳಸಿಕೊಂಡರೆ ಸಿಗುವ ಮತವು ಸಿಗಲ್ಲ

ಅದಕ್ಕಿಂತ ಹೆಚ್ಚಾಗಿ ಆರ್.ಧ್ರುವನಾರಾಯಣ್ ಗೆ ತಮ್ಮೊಂದಿಗಿರುವ ಪಕ್ಷಾಂತರಿ ನಾಯಕನೆಂದೇ ಹೆಸರುವಾಸಿಯಾಗಿರುವ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಅವರ ಮಾತುಗಳು ಎಡವಟ್ಟು ಮಾಡುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇವತ್ತಿಗೂ ವಿ.ಶ್ರೀನಿವಾಸಪ್ರಸಾದ್ ಅವರಿಗೆ ದಲಿತರು ತಮ್ಮದೇ ಆದ ಗೌರವವನ್ನು ನೀಡುತ್ತಾರೆ. ಅವರು ಯಾವುದೇ ಪಕ್ಷದಲ್ಲಿರಲಿ. ಆದರೆ ವೈಯಕ್ತಿಕವಾಗಿ ಅವರನ್ನು ಜನ ದಲಿತ ಮುಖಂಡನೆಂದೇ ನಂಬಿದ್ದಾರೆ. ಮತ್ತು ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಹೀಗಿರುವಾಗ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನ ಸುಮ್ಮನಿರುತ್ತಾರಾ? ಕಾಗಲವಾಡಿ ಶಿವಣ್ಣ ಅವರನ್ನು ಚುನಾವಣೆ ತನಕವೂ ಧ್ರುವನಾರಾಯಣ್ ತಮ್ಮೊಂದಿಗೆ ಪ್ರಚಾರದಲ್ಲಿ ಬಳಸಿಕೊಂಡರೆ ಸಿಗುವ ಮತವೂ ಸಿಗದಂತಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಚಾಮರಾಜನಗರದ ಉಮ್ಮತ್ತೂರು ಎಂಬಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.

 ಮೈಸೂರಿನಿಂದ ಕರೆದುಕೊಂಡು ಬಂದಿದ್ದು ನಾನು

ಮೈಸೂರಿನಿಂದ ಕರೆದುಕೊಂಡು ಬಂದಿದ್ದು ನಾನು

ಉಮ್ಮತ್ತೂರು ಗ್ರಾಮ ಪಂಚಾಯಿತಿ ಕೇಂದ್ರವಾದ ಶಾನಭೋಗರ ಚೌಕದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ಮತಯಾಚನೆ ಸಂದರ್ಭದಲ್ಲಿ ಉಮ್ಮತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ಮತಯಾಚಿಸಿ ಮಾತನಾಡಿದ ಕಾಗಲವಾಡಿ ಶಿವಣ್ಣ, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಹಗುರವಾಗಿ ಮಾತನಾಡುವ ಜೊತೆಗೆ ನಡೆದಾಡಲು ಆಗದ, ಕಿವಿ, ಕೇಳದ, ಕಣ್ಣು ಕಾಣಿಸಿದ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಇವರು ರಾತ್ರಿ ಮಲಗಿದರೆ, ಮಧ್ಯಾಹ್ನ ಏಳುತ್ತಾರೆ. ಕಾಂಗ್ರೆಸ್ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಂದಾಯ ಸಚಿವರನ್ನಾಗಿ ಮಾಡಿದ್ದರು. ಇದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದ ಶ್ರೀನಿವಾಸಪ್ರಸಾದರನ್ನು ಸಂಪುಟದಿಂದ ಕಿತ್ತು ಹಾಕಿದರು. ಮತ್ತೊಬ್ಬ ಸಮರ್ಥರಿಗೆ ನೀಡಿದರು. ಇಂಥವರು ಬೇಕಾ? ಎಂದು ಪ್ರಶ್ನಿಸಿದ್ದಾರೆ. ನಾನು ಸ್ವಾಭಿಮಾನಿ ಎನ್ನುತ್ತಾರೆ. ನಾವೆಲ್ಲರೂ ಸ್ವಾಭಿಮಾನಿಗಳಲ್ಲವೇ? ನಮ್ಮನ್ನು ಸಹ ನಮ್ಮ ತಾಯಿಂದಿರು ಗಂಡು ಎಂದೇ ಹೆತ್ತಿರುವುದು. ಶ್ರೀನಿವಾಪ್ರಸಾದ್ ಗೆ ಹಳ್ಳಿಗಳೇ ಗೊತ್ತಿರಲಿಲ್ಲ. ನಾನು ಪ್ರಸಾದ್‌ರನ್ನು ಮೈಸೂರಿನಿಂದ ಕರೆದುಕೊಂಡು ಬಂದಿದ್ದು ಎಂದು ಹೇಳಿದ್ದಾರೆ.

 ಮಾತನಾಡಲು ಅವಕಾಶ ಕೇಳಿದ ಧ್ರುವನಾರಾಯಣ್

ಮಾತನಾಡಲು ಅವಕಾಶ ಕೇಳಿದ ಧ್ರುವನಾರಾಯಣ್

ಶಿವಣ್ಣ ಅವರು ಮಾತು ಮುಂದುವರೆಸುತ್ತಿದ್ದಂತೆ ಸ್ಥಳದಲ್ಲಿದ್ದ ದಲಿತ ಮುಖಂಡರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನೀವು ಸಂಸದರಾಗಲು ಶ್ರೀನಿವಾಸಪ್ರಸಾದ್ ಕಾರಣ. ಅವರು ಕೊಟ್ಟ ಭಿಕ್ಷೆಯಿಂದ ಗ್ರಾ.ಪಂ. ಸದಸ್ಯರಾಗಲು ಸಾಧ್ಯವಾಗದ ನೀವು ಸಂಸತ್‌ಗೆ ಆಯ್ಕೆಯಾಗಿದ್ದೀರಿ. ಹಿರಿಯ ರಾಜಕಾರಣಿ ಬಗ್ಗೆ ಇಂಥ ಮಾತುಗಳನ್ನಾಡಬಾರದು. ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆ ವೇಳೆ ದಾರಿಯಲ್ಲಿ ಬಿಜೆಪಿ ಸೇರಿದ್ದ ನೀವು, ಈಗ ಬಿಜೆಪಿ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೀರಿ. ಐದು ವರ್ಷ ಸಂಸದರಾಗಿ ಗ್ರಾಮಕ್ಕೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲೇ ಅವರ ಮಾತಿಗೆ ದನಿಗೂಡಿಸಿದ ಇತರರು ಶ್ರೀನಿವಾಸಪ್ರಸಾದ್ ಪರ ಘೋಷಣೆ ಕೂಗಲಾರಂಭಿಸಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಮೈಕ್ ತೆಗೆದುಕೊಂಡು ಮಾತನಾಡಲು ಆರಂಭಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳಲು ಎಲ್ಲರಿಗೂ ಹಕ್ಕಿದೆ. ಮಾತನಾಡಲು ಅವಕಾಶ ನೀಡಿ ಎಂದಿದ್ದಾರೆ.

 ಧ್ರುವನಾರಾಯಣ್ ಗೆ ಶುರುವಾದ ಆತಂಕ

ಧ್ರುವನಾರಾಯಣ್ ಗೆ ಶುರುವಾದ ಆತಂಕ

ಅಷ್ಟರಲ್ಲೇ ಧ್ರುವನಾರಾಯಣ್ ವಿರುದ್ಧ ತಿರುಗಿ ಬಿದ್ದ ಗ್ರಾಮಸ್ಥರು, ಗೆದ್ದು ಹೋದ ನೀವು ಈಗ ಗ್ರಾಮಕ್ಕೆ ಬಂದಿದ್ದೀರಿ. ಗ್ರಾಮಕ್ಕೆ ನಿಮ್ಮ ಕೊಡುಗೆ ಏನು? ಗ್ರಾಮದ ಕೆರೆಯ ಹೂಳೂ ತೆಗೆಸಲಿಲ್ಲ. ಕೆರೆಗೆ ನೀರು ತುಂಬಿಸಲಿಲ್ಲ. ನಿರಂತರ ಜ್ಯೋತಿ ಯೋಜನೆಯನ್ನು ಅಳವಡಿಸಲಿಲ್ಲ. ಗ್ರಾಮಕ್ಕೆ ನಿಮ್ಮ ಅನುದಾನ ಎಷ್ಟು ಕೊಟ್ಟಿದ್ದೀರಿ? ಗ್ರಾಮದ ಮೂಲಕ ಹೋಗುವಾಗ ಕಾರ್ ಗ್ಲಾಸ್ ಏರಿಸಿಕೊಂಡು ಹೋಗುತ್ತಿದ್ದೀರಿ. ನಮ್ಮ ಗ್ರಾಮಕ್ಕೆ ನಿಮ್ಮ ಕೊಡುಗೆ ಏನು ಎಂದೆಲ್ಲ ಪ್ರಶ್ನಿಸತ್ತ್ತಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಇಲ್ಲಿದ್ದರೆ ಕಷ್ಟ ಎಂದರಿತ ಅವರು ಪ್ರಚಾರ ಸಭೆಯನ್ನು ಮೊಟಕು ಗೊಳಿಸಿ, ಮುಂದಿನ ಗ್ರಾಮದತ್ತ ಮುಖ ಮಾಡಿದ್ದಾರೆ. ಈ ಘಟನೆ ಬಳಿಕ ಆರ್.ಧ್ರುವನಾರಾಯಣ್ ಅವರಿಗೆ ಒಂದಿಷ್ಟು ಆತಂಕ ಶುರುವಾಗಿದೆ.

 ಈ ಬಾರಿ ಚುನಾವಣೆ ಅಷ್ಟೊಂದು ಸುಲಭವಲ್ಲ

ಈ ಬಾರಿ ಚುನಾವಣೆ ಅಷ್ಟೊಂದು ಸುಲಭವಲ್ಲ

ಈಗಾಗಲೇ ಧ್ರುವನಾರಾಯಣ್ ತಮ್ಮ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ನಾಯಕರನ್ನು ಕರೆತಂದು ಸಮಾವೇಶ ನಡೆಸಿದ್ದಾರೆ. ತಾವೇ ಖುದ್ದಾಗಿ ಹಳ್ಳಿಗಳಿಗೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಆದರೆ ಎದುರಾಳಿ ಅಭ್ಯರ್ಥಿ ಒಂದು ಕಾಲದ ತಮ್ಮ ರಾಜಕೀಯ ಗುರುವಾಗಿರುವುದರಿಂದ ಬಾಯಿಗೆ ಬಂದಂತೆ ಆರೋಪ ಮಾಡುವಂತೆಯೂ ಇಲ್ಲ. ಹಾಗೊಂದು ವೇಳೆ ಮಾಡಿದರೆ ಉಮ್ಮತ್ತೂರಲ್ಲಾದ ಪರಿಸ್ಥಿತಿ ಎದುರಾದರೆ ಅಚ್ಚರಿಯಿಲ್ಲ. ಒಟ್ಟಾರೆ ಧ್ರುವನಾರಾಯಣ್ ಅವರಿಗೆ ಈ ಬಾರಿಯ ಚುನಾವಣೆ ಅಷ್ಟೊಂದು ಸುಲಭವಲ್ಲ ಎಂಬುದು ಗೊತ್ತಾಗತೊಡಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಪರಿಚಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+