ಚಾಮರಾಜನಗರದಲ್ಲಿ ಇದ್ದಿಲು ತಯಾರಿಸುವ ಮಹಾರಾಷ್ಟ್ರದ ಅಲೆಮಾರಿಗಳಿಗೆ ನೆರವು
ಚಾಮರಾಜನಗರ, ಏಪ್ರಿಲ್ 04: ಅಲೆಮಾರಿ ಕುಟುಂಬಗಳು ಲಾಕ್ ಡೌನ್ ಆದ ಬಳಿಕ ಅಲ್ಲಲ್ಲಿ ಸಿಲುಕಿಕೊಂಡು ಪರದಾಡುತ್ತಿವೆ. ಅದರಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಹಾಗೂ ಸಂತೇಮರಹಳ್ಳಿ ಸುತ್ತಮುತ್ತ ನೆಲೆಯೂರಿರುವ ಅಲೆಮಾರಿಗಳೂ ಇದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಆದರೆ ಸದ್ಯ ಸರ್ಕಾರ ಅವರ ನೆರವಿಗೆ ಧಾವಿಸುವುದರಿಂದ ಸ್ವಲ್ಪ ನೆಮ್ಮದಿಯಾಗಿದ್ದಾರೆ.
ಇಷ್ಟಕ್ಕೂ ಇವರು ಇಲ್ಲಿಗೇಕೆ ಬಂದರು ಎಂಬುದನ್ನು ಪರಿಶೀಲಿಸಿದರೆ, ಹಲವು ವಿಷಯಗಳು ತೆರೆದುಕೊಳ್ಳುತ್ತವೆ. ಇವರು ಮೂಲತಃ ಮಹಾರಾಷ್ಟ್ರದವರಾಗಿದ್ದು, ಜಾಲಿ ಮುಳ್ಳುಗಳಿಂದ ಇದ್ದಿಲು ತಯಾರಿಸಿ ಅದನ್ನು ಟೂತ್ ಪೇಸ್ಟ್ ತಯಾರಿಕಾ ಕಾರ್ಖಾನೆಗಳಿಗೆ ಸರಬರಾಜು ಮಾಡುವುದು ಇವರ ಮುಖ್ಯ ಕಸುಬು ಎಂಬುದು ತಿಳಿದುಬಂದಿದೆ.
ದಾವಣಗೆರೆ ಸ್ಲಂಗಳಿಗೆ 13 ಸಾವಿರ ಲೀ ಉಚಿತ ಹಾಲು ವಿತರಣೆ
ಟೂತ್ ಪೇಸ್ಟ್ ತಯಾರಿಕೆಗೆ ಇದ್ದಿಲು ತಯಾರಿಸುವ ತಂಡ
ಚಾಮರಾಜನಗರ ವ್ಯಾಪ್ತಿಯಲ್ಲಿ ಜಾಲಿ ಮುಳ್ಳುಗಳು ಕೆರೆ ಕಟ್ಟೆ ಪ್ರದೇಶಗಳಲ್ಲಿ ಹಾಗೂ ಕಬಿನಿ ಚಾನಲ್ನ ಬದಿಗಳಲ್ಲಿ ಹೆಚ್ಚಾಗಿ ಬೆಳೆದಿದ್ದು, ಇವು ಬೇಸಿಗೆ ಸಮಯದಲ್ಲಿ ಒಣಗಿ ಹೋಗುತ್ತವೆ. ಈ ಗಿಡಗಳನ್ನು ಬುಡ ಸಹಿತ ಕಿತ್ತು ತಂದು ಅದನ್ನು ಒಟ್ಟಾಗಿ ಸೇರಿಸಿ, ಬೆಂಕಿಯಲ್ಲಿ ಬೇಯಿಸಿ, ಇದ್ದಿಲು ತಯಾರಿಸಿ, ಅದನ್ನು ಟೂತ್ ಪೇಸ್ಟ್ ತಯಾರಿಸುವ ಕಾರ್ಖಾನೆಗಳಿಗೆ ಹಾಗೂ ಹೋಟೆಲ್ಗಳಿಗೆ ರಫ್ತು ಮಾಡುತ್ತಾ ಇಲ್ಲಿವರೆಗೆ ಇವರು ಬದುಕು ಕಟ್ಟಿಕೊಂಡಿದ್ದರು. ಈಗ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಆಗಿದೆ. ಹೀಗಾಗಿ ಇವರ ಪರಿಸ್ಥಿತಿ ಅತಂತ್ರವಾಗಿದೆ.
ನೆರವಿಗೆ ಬಂದಿರುವ ಜಿಲ್ಲಾಡಳಿತ
ಈಗಾಗಲೇ ಸಂಗ್ರಹಿಸಿರುವ ಇದ್ದಿಲನ್ನು ಸಾಗಾಣಿಕೆ ಮಾಡಲು ಸಾಧ್ಯವಾಗದೆ, ಇತ್ತ ವಾಪಸ್ ಹುಟ್ಟೂರಿಗೂ ಮರಳಲಾಗದೆ ಪರದಾಡುತ್ತಿದ್ದಾರೆ. ಇವರಿಗೆ ಈಗ ಒಂದು ಹೊತ್ತಿನ ಊಟ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಚಾಮರಾಜನಗರ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದ ಮೇರೆಗೆ ಅವರ ನೆರವಿಗೆ ಧಾವಿಸಿದ್ದು, ಅವರು ಬೀಡು ಬಿಟ್ಟಿರುವ ಸ್ಥಳಗಳಿಗೆ ತೆರಳಿದ ಆರೋಗ್ಯ ಇಲಾಖೆ ತಂಡ ಪ್ರತಿಯೊಬ್ಬರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಿ ಅವರಿಗೆ ಕೊರೊನಾ ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇತ್ತ ಕಂದಾಯ ಇಲಾಖೆಯೂ ಅವರ ನೆರವಿಗೆ ಧಾವಿಸಿದ್ದು, ಅವರ ಪ್ರತಿದಿನದ ಮೂರು ಹೊತ್ತಿನ ಊಟಕ್ಕೆ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಸಾಂಬಾರು ಪದಾರ್ಥಗಳನ್ನು ಉಚಿತವಾಗಿ ವಿತರಿಸುತ್ತಿದೆ.
ಜಿಲ್ಲೆಯಲ್ಲಿ ನೆಲೆಯೂರಿದ ಮಹಾರಾಷ್ಟ್ರದ 144 ಮಂದಿ
ಈ ಬಗ್ಗೆ ಮಾತನಾಡಿದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಅವರು, ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಲಾಕ್ ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಯಳಂದೂರು ತಾಲ್ಲೂಕಿನ ಗೌಡಹಳ್ಳಿ, ಅಂಬಳೆ, ಹೊನ್ನೂರು, ಉಪ್ಪಿನಮೋಳೆ, ಮಲ್ಲಿಗೆಹಳ್ಳಿ, ಸಂತೇಮರಹಳ್ಳಿ, ಗೂಳಿಪುರ ಭಾಗದಲ್ಲಿ ಬೀಡು ಬಿಟ್ಟಿರುವ ಜಾಲಿಮುಳ್ಳುಗನ್ನು ಕತ್ತರಿಸಿ ತಂದು ಇದ್ದಿಲು ತಯಾರಿಸುವ 144 ಮಂದಿ ಅಲೆಮಾರಿ ಜನರ ಸ್ಥಿತಿ ಈಗ ಚಿಂತಾಜನಕವಾಗಿದೆ. ಅವರ ನೆರವಿಗೆ ಚಾಮರಾಜನಗರ ಜಿಲ್ಲಾಡಳಿತವು ಧಾವಿಸಿದ್ದು, ಅವರಿಗೆ ಊಟೋಪಚಾರ ಒದಗಿಸಲಾಗುತ್ತಿರುವುದಾಗಿ ಹೇಳಿದ್ದಾರೆ.
ಇದ್ದಿಲು ತಯಾರಿಸುವ ಕೆಲಸ ಸ್ಥಗಿತ
ಯಳಂದೂರು ತಾಪಂ ಇಓ ರಾಜು ಅವರು, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಅಲೆಮಾರಿ ಜನಾಂಗದ ಊಟೋಪಚಾರಕ್ಕಾಗಿ ಅಕ್ಕಿ, ಬೇಳೆ, ಎಣ್ಣೆ, ಸಾಂಬಾರ ಪದಾರ್ಥಗಳನ್ನು ಉಚಿತವಾಗಿ ವಿತರಿಸಲಾಗುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದ ರಾಯಗಡದಿಂದ ಬಂದಿರುವ ಅಲೆಮಾರಿ ವಿಜೇಶ್ ರಾಥೋಡ್ ಮಾತನಾಡಿ, ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಜಾರಿಯಾಗಿದ್ದರಿಂದ ನಮ್ಮ ಇದ್ದಿಲು ತಯಾರಿಸುವ ಕೆಲಸ ಸ್ಥಗಿತಗೊಂಡಿದ್ದು, ಸರ್ಕಾರ ಉಚಿತವಾಗಿ ಅಕ್ಕಿ, ಬೇಳೆ, ಎಣ್ಣೆ, ಸಾಂಬಾರ ಪದಾರ್ಥಗಳನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ. ಸದ್ಯ ಅಲೆಮಾರಿಗಳ ನೆರವಿಗೆ ಜಿಲ್ಲಾಡಳಿತ ಧಾವಿಸುತ್ತಿರುವುದರಿಂದ ಹೊಟ್ಟೆ ಪಾಡು ಕಳೆಯುತ್ತಿದ್ದು, ಮುಂದೇನಾಗಬಹುದೋ ಎಂಬುದನ್ನು ಕಾದು ನೋಡಬೇಕಿದೆ.