Heavy Rain: ನಿಜವಾಯ್ತು ಹವಾಮಾನ ಇಲಾಖೆ ಭವಿಷ್ಯ: ಚಾಮರಾಜನಗರ ಜಿಲ್ಲೆಗೆ ವರ್ಷದ ಮೊದಲ ಮಳೆ
Heavy Rain: ಇಷ್ಟು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿರುಬಿಸಿಲು ಮುಂದುವರೆದಿತ್ತು. ಆದ್ರೆ, ಇದೀಗ ಹವಾಮಾನ ಇಲಾಖೆ ನುಡಿದ ಭವಿಷ್ಯದಂತೆ ಮಾರ್ಚ್ ಎರಡನೇ ವಾರದಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಎಂಟ್ರಿ ಕೊಟ್ಟಿದೆ. ಹಾಗೆಯೇ ಚಾಮರಾಜನಗರ ಜಿಲ್ಲೆಯ ಹಲವೆಡೆ ವರ್ಷದ ಮೊದಲ ಮಳೆಯಾಗಿದೆ.
ನಿನ್ನೆ ಅಂದರೆ ಮಾರ್ಚ್ 12ರಂದು ಹವಾಮಾನ ಇಲಾಖೆ ಇನ್ನೂ ಕೆಲವೇ ಕ್ಷಣಗಳಲ್ಲಿ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆಯನ್ನು ನೀಡಿತ್ತು. ಅದರಂತೆಯೇ ಚಾಮರಾಜನಗರ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ವೇಳೆಗೆ ವರ್ಷದ ಮೊದಲ ಮಳೆ ಸುರಿದಿದೆ.

ಎಲ್ಲೆಲ್ಲಿ ಮಳೆ?: ಚಾಮರಾಜನಗರ ಜಿಲ್ಲಾ ಕೇಂದ್ರ, ಚಾಮರಾಜನಗರ ತಾಲೂಕಿನ ಕೊತ್ತಲವಾಡಿ, ವೆಂಕಟಯ್ಯನ ಛತ್ರ , ಹಾನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಳೆಯಾಗಿದೆ. ಇನ್ನು ಸುರಿದ ಮಳೆಯಿಂದ ಹನೂರು ತಾಲ್ಲೂಕಿನ ಮಲೆ ಮಾದಪ್ಪನ ಬೆಟ್ಟಕ್ಕೆ ಜಲಾಭಿಷೇಕ ಮಾಡಿದಂತಾಗಿದೆ.
ಮತ್ತೊಂದೆಡೆ ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಗಡಿ ಜಿಲ್ಲೆಯ ಜನರ ಮುಖದಲ್ಲಿ ವರ್ಷದ ಮೊದಲ ಮಳೆಯಿಂದ ತಂಪಿನ ಮಂದಹಾಸ ಮೂಡಿದಂತಾಗಿದೆ. ಅಲ್ಲದೆ ಭಾರೀ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ನದಿಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಹಾಗೆಯೇ ದಕ್ಷಿಣ ಕನ್ನದ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಮಳೆಯಾಗಿದೆ. ಪುತ್ತೂರು ತಾಲೂಕಿನ ಸವಣೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಹಲವೆಡೆ ಮಳೆಯಾಗಿದ್ದು. ಕೆಲವೆಡೆ ಸಾಧಾರಣ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ.
ಕಡಬ ತಾಲೂಕಿನ ಸವಣೂರು, ಚಾರ್ವಾಕದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ ಎಂದು ತಿಳಿದುಬಂದಿದೆ. ಪುತ್ತೂರು ನಗರದಲ್ಲಿ ಸಾಧಾರಣ ಮಳೆಯಾದರೆ, ಇನ್ನಿಳಿದ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಇದರಿಂದ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರಿಗೆ ನೆಮ್ಮದಿ ತಂದಂತಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಮುಂದಿನ ಹಲವು ದಿನಗಳ ಇದೇ ರೀತಿ ವಾತಾವರಣ ಇರಲಿದೆ ಎನ್ನುವ ಮುನ್ಸೂಚನೆ ಇದೆ.
ಬೆಳ್ತಂಗಡಿ ತಾಲೂಕಿನ ಹಲಚೆಡೆ ಬುಧವಾರ ಸಂಜೆ ಆಲಿಕಲ್ಲು ಮಳೆಯಾಗಿದೆ. ಉಜಿರೆ, ಕಕ್ಕಿಂಜೆ, ಚಾರ್ಮಾಡಿ ಭಾಗಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ನಿನ್ನೆ ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ಇದ್ದು, 4 ಗಂಟೆ ವೇಳೆಗೆ ಸುಳ್ಯ ನಗರ ಸೇರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಿದೆ. ನಡುಗಲ್ಲು, ಗುತ್ತಿಗಾರು, ಕಲ್ಲಾಜೆ, ಕೊಲ್ಲಮೊಗ್ರು ಭಾಗಗಳಲ್ಲಿ ಅಬ್ಬರದ ಮಳೆಯಾಗಿದ್ದರೆ, ಸುಳ್ಯ ನಗರ, ದೊಡ್ಡತೋಟ, ದುಗ್ಗಲಡ್ಕ, ಸೊಣಂಗೇರಿ, ಬೆಳ್ಳಾರೆ, ಪಂಜ, ಮಲ್ಲಾರ ಮತ್ತಿತರ ಸೇರಿದಂತೆ ಹಲವೆಡೆ ಸಾಧಾರಣ ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.












Click it and Unblock the Notifications