ಚಾಮರಾಜನಗರದಲ್ಲಿ ಜೆಡಿಎಸ್ ಖಾತೆ ತೆರೆಯಲು ಕುಮಾರಸ್ವಾಮಿ ತಂತ್ರ!
ಚಾಮರಾಜನಗರ, ಫೆಬ್ರವರಿ 20; 2023ರ ವಿಧಾನಸಭಾ ಚುನಾವಣೆಗೆ ವರ್ಷವಷ್ಟೆ ಬಾಕಿಯಿದೆ. ಹೀಗಾಗಿ ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಬೀಸಲು ಆರಂಭಿಸಿದೆ. ತಳಮಟ್ಟದಿಂದ ಆರಂಭವಾಗಿ ರಾಜ್ಯನಾಯಕರವರೆಗೆ ಒಂದಲ್ಲ ಒಂದು ರೀತಿಯಲ್ಲಿ ಮುನ್ನಲೆಗೆ ಬರಲು ಆರಂಭಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳೆರಡು ಹಿಜಾಬ್ ವಿವಾದದ ಗೊಂದಲದಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ, ಇತ್ತ ಜಾಣನಡೆ ತೋರಿರುವ ಜೆಡಿಎಸ್ ನಾಯಕರು ಮಾತ್ರ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ.
ಈಗಂತು ಕೆಲವು ರಾಜಕೀಯ ನಾಯಕರು ತಮ್ಮ ಅಸಂಬದ್ಧ ಹೇಳಿಕೆಗಳಿಂದ, ಹೋರಾಟಗಳಿಂದ, ಇನ್ನಿತರ ಚಟುವಟಿಕೆಗಳಿಂದ ಜನರ ಗಮನಸೆಳೆಯಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಾಜಕೀಯ ಪಕ್ಷಗಳು ಸಕ್ರಿಯಗೊಳ್ಳುತ್ತಿವೆ. ಆರೋಪ ಪ್ರತ್ಯಾರೋಪಗಳು ಶುರುವಾಗಿದೆ. ತಮ್ಮ ನಾಯಕರನ್ನು ವೈಭವೀಕರಿಸುವ ಕಾರ್ಯಗಳು ಸದ್ದಿಲ್ಲದೆ ಶುರುವಾಗಿದೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಮರ್ಜಿಯಲ್ಲಿದ್ದು, ರಾಜ್ಯ ನಾಯಕರು ಸ್ವಂತ ನಿರ್ಧಾರ ಮಾಡುವಲ್ಲಿ ವಿಫಲರಾಗಿ ಹೈಕಮಾಂಡ್ ಕಡೆಗೆ ದೃಷ್ಟಿ ನೆಟ್ಟು ಕೂರುವಂತಾಗಿದೆ. ಅಲ್ಲಿಂದ ಬರುವ ಸನ್ನೆ ಮೇರೆಗೆ ಮುಂದಿನ ಕಾರ್ಯಗಳನ್ನು ಮಾಡುವಂತಾಗಿದೆ. ಸದ್ಯದ ಮಟ್ಟಿಗೆ ಜೆಡಿಎಸ್ ಪಕ್ಷ ಕಾರ್ಯಚಟುವಟಿಕೆ ಆರಂಭಿಸಿದೆ ಎನ್ನುವುದಕ್ಕಿಂತಲೂ ಎಚ್. ಡಿ. ಕುಮಾರಸ್ವಾಮಿ ತಮ್ಮ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಪ್ರಯತ್ನ ಮಾಡುತ್ತಿದ್ದಾರೆ.
ಒಂದೆಡೆ ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಆರಂಭವಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕರ ತನಕ ಗುಳೆಹೋಗಲು ಆರಂಭಿಸಿದ್ದಾರೆ. ಆದರೆ ಆ ಬಗ್ಗೆ ಪಕ್ಷದಲ್ಲಿ ಕುಮಾರಸ್ವಾಮಿ ಸೇರಿದಂತೆ ಯಾವುದೇ ನಾಯಕರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬದಲಿಗೆ ಹೊಸ ನಾಯಕರನ್ನು ಹುಟ್ಟು ಹಾಕುವ ತಲಾಸೆಯಲ್ಲಿದ್ದಂತೆ ಕಾಣುತ್ತಿದೆ. ಈಗಾಗಲೇ ಮುಂದಿನ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರವೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿರುವುದು ನಿಜವೇ? ಅಥವಾ ಅದೊಂದು ರೀತಿಯ ರಾಜಕೀಯ ತಂತ್ರವೇ ಎಂಬ ಕುತೂಹಲ ಜನ ವಲಯದಲ್ಲಿದೆ.

ಚಾಮರಾಜನಗರದತ್ತ ದೃಷ್ಟಿನೆಟ್ಟ ಜೆಡಿಎಸ್
ಈಗಾಗಲೇ ರಾಜ್ಯದಲ್ಲಿ ಎದ್ದಿರುವ ಹಿಜಾಬ್ ಮತ್ತು ಕೇಸರಿ ವಿವಾದವನ್ನು ರಾಜಕೀಯವಾಗಿ ಹೇಗೆ ಲಾಭ ಮಾಡಿಕೊಳ್ಳಬಹುದೆಂದು ಕಾಂಗ್ರೆಸ್ ಮತ್ತು ಬಿಜೆಪಿ ಗೊಂದಲಕ್ಕೆ ಬಿದ್ದು ತಲೆಕೆಡಿಸಿಕೊಂಡು ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿರುವಾಗಲೇ ಅದರಿಂದ ಸಮತೋಲನೆ ಕಾಪಾಡಿಕೊಂಡು ಪಕ್ಷ ಸಂಘಟನೆಯತ್ತ ಗಮನಹರಿಸಿರುವ ಕುಮಾರಸ್ವಾಮಿ, ಹಳೆ ಮೈಸೂರಿತ್ತ ಅದರಲ್ಲೂ ಚಾಮರಾಜನಗರದತ್ತ ದೃಷ್ಟಿ ನೆಟ್ಟಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಎಸ್ ಪಿ ಜತೆ ಮೈತ್ರಿ ಮಾಡಿಕೊಂಡ ಪರಿಣಾಮ ಚಾಮರಾಜನಗರದಲ್ಲಿ ಎನ್. ಮಹೇಶ್ ಮೂಲಕ ಬಿಎಸ್ ಪಿ ಖಾತೆ ತೆರೆಯುವಂತಾಗಿತ್ತು. ಇದರಲ್ಲಿ ಜೆಡಿಎಸ್ನ ಪಾತ್ರವೂ ಇತ್ತು. ಆದರೆ ಈಗ ಎನ್. ಮಹೇಶ್ ಬಿಜೆಪಿಯಲ್ಲಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆ
ಚಾಮರಾಜನಗರದ ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆಯಿಟ್ಟಿದೆ. ಇದೀಗ ಜೆಡಿಎಸ್ ಪಕ್ಷ ಸಂಘಟನೆ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ತಯಾರಿ ಶುರು ಮಾಡಿದೆ. ಇದಕ್ಕೆ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ. ಈಗಾಗಲೇ ಚಾಮರಾಜನಗರಕ್ಕೆ ಆಗಮಿಸಿ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದಲ್ಲದೆ, ಚಾಮರಾಜನಗರ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ. ಆರ್. ಮಂಜುನಾಥ್ ಸೇರಿದಂತೆ ಕೆಲವು ಮುಖಂಡರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಸಮಾಲೋಚನೆ ನಡೆಸಿದ್ದಾರೆ.

ಕಳೆದ ಬಾರಿಯ ತಪ್ಪನ್ನು ಮಾಡುವುದಿಲ್ಲ
ಈ ವೇಳೆ ಚಾಮರಾಜನಗರ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ. ಆರ್. ಮಂಜುನಾಥ್ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಬೇಕಾದರೆ ನೀರಾವರಿ ಯೋಜನೆಗಳ ಅನುಷ್ಠಾನದ ಅಗತ್ಯತೆಯಿದ್ದು, ಅದನ್ನು ಕುಮಾರಸ್ವಾಮಿ ಗಮನಕ್ಕೆ ತಂದಿದ್ದು, ಸರ್ಕಾರದ ಗಮನಸೆಳೆಯುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ ಹಿಂದೆ ಚಾಮರಾಜನಗರದಲ್ಲಿ ಕೆಲವೊಂದು ತಪ್ಪು ನಡೆದಿತ್ತು ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ.
ಹನೂರು ಕ್ಷೇತ್ರದಿಂದ ಈ ಬಾರಿ ಜಿಲ್ಲಾಧ್ಯಕ್ಷರಾದ ಎಂ. ಆರ್. ಮಂಜುನಾಥ್ಗೆ ಟಿಕೆಟ್ ನೀಡಲಾಗುತ್ತಿದ್ದು, ಅವರನ್ನು ಗೆಲ್ಲಿಸಿಕೊಂಡು ಬರುವಂತೆ ಪಕ್ಷದ ಮುಖಂಡರಿಗೆ ಹೇಳಿದ್ದಲ್ಲದೆ, ಕಳೆದ ಬಾರಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿರುವುದು ಮತ್ತು ಚಾಮರಾಜನಗರಕ್ಕೆ ಆಗಮಿಸಿ ಪ್ರಚಾರ ಮಾಡದಿರುವುದರಿಂದ ಹಿನ್ನಡೆಯಾಗಿದೆ. ಆದರೆ ಇಂತಹ ತಪ್ಪನ್ನು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ.

ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಾ ಜೆಡಿಎಸ್
ಎಚ್. ಡಿ. ಕುಮಾರಸ್ವಾಮಿ ಭರವಸೆ ಈಗ ಚಾಮರಾಜನಗರ ಜಿಲ್ಲೆಯ ಜೆಡಿಎಸ್ನಲ್ಲಿ ಹುಮ್ಮಸ್ಸು ತಂದಿದೆ. 2023ರ ಚುನಾವಣೆ ವೇಳೆಗೆ ಪಕ್ಷವನನ್ನು ಸಂಘಟಿಸುವ ಕಾರ್ಯಕ್ಕೆ ಮುಖಂಡರು ಮುಂದಾಗುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಸೆಡ್ಡು ಹೊಡೆದು ಚಾಮರಾಜನಗರದಲ್ಲಿ ಜೆಡಿಎಸ್ ಬೆಳೆಯುತ್ತಾ? ಎಂಬುದನ್ನು ಮಾತ್ರ ಕಾಲವೇ ಹೇಳಬೇಕಾಗಿದೆ.












Click it and Unblock the Notifications