ಗುಂಡ್ಲುಪೇಟೆ: ಎಲೆಕ್ಷನ್ "ಗಿಮಿಕ್" ರಸ್ತೆ ನಿರ್ಮಾಣ: ಡಾಂಬಾರು ಹಾಕಿ ಎರಡೇ ದಿನದಲ್ಲಿ ಹಾಳಾದ ರಸ್ತೆ, ಜನಾಕ್ರೋಶ
ಚಾಮರಾಜನಗರ, ಏಪ್ರಿಲ್, 04: ಸಾಮಾನ್ಯವಾಗಿ ಚುನಾವಣೆ ಹತ್ತಿರ ಬಂತೆಂದರೆ ಸಾಕು ರಾಜಕಾರಣಿಗಳು ಅಭಿವೃದ್ಧಿ ಕೆಲಸಗಳ ಕಡೆಗೆ ಒತ್ತು ನೀಡುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ಮುಂದಾಗಿರುತ್ತಾರೆ. ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜಕಾರಣಿಗಳು ಹಲವೆಡೆ ಕಳಪೆ ಗುಣಪಟ್ಟದ ರಸ್ತೆಗಳನ್ನು ಮಾಡಿಸುವ ಮೂಲಕ ಜನರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದೇ ರೀತಿ ಗುಂಡ್ಲುಪೇಟೆ ತಾಲೂಕಿನ ಮಾಲಾಪುರದಲ್ಲೂ ಡಾಂಬಾರು ಹಾಕಿದ ಎರಡೇ ದಿನದಲ್ಲಿ ರಸ್ತೆ ಹಾಳಾದ ಘಟನೆ ನಡೆದಿದೆ.
ಚುನಾವಣಾ ಸಮಯದಲ್ಲಿ ಕಾಮಗಾರಿಗಳು ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದಕ್ಕೆ ಮಾಲಾಪುರಲ್ಲಿ ನಿರ್ಮಾಣವಾದ ರಸ್ತೆಯೇ ನಿದರ್ಶನವಾಗಿದೆ. ಡಾಂಬಾರು ಹಾಕಿದ ಎರಡೇ ದಿನಕ್ಕೆ ರಸ್ತೆ ಕಿತ್ತುಬಂದಿದ್ದು, ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಮಾಡಿಕೊಟ್ಟಂತಿದೆ. ಗುಂಡ್ಲುಪೇಟೆ ತಾಲೂಕಿನ ಮಾಲಾಪುರ ಸಂಪರ್ಕ ರಸ್ತೆಯಲ್ಲಿ ತೀರಾ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿಬಂದಿದೆ.

ಎರಡೇ ದಿನದಲ್ಲಿ ಕಿತ್ತುಬಂದ ಡಾಂಬಾರು
ಯರಿಯೂರು ಸಂಪರ್ಕ ರಸ್ತೆಯಿಂದ ಮಾಲಾಪುರದವರೆಗಿನ ರಸ್ತೆ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಈ ರಸ್ತೆಗೆ ಎರಡು ದಿನದ ಹಿಂದೆಯಷ್ಟೇ ಡಾಂಬರೀಕರಣ ಮಾಡಲಾಗಿತ್ತು. ನಂತರ ಗುಣಮಟ್ಟದ ಬಗ್ಗೆ ಸಂಶಯಗೊಂಡ ಜನ ಪರಿಶೀಲಿಸಿದಾಗ ಡಾಂಬಾರು ಕಿತ್ತುಬರುತ್ತಿದೆ.
ರಸ್ತೆಗೆ ರೊಟ್ಟಿಯಂತೆ ಡಾಂಬರು ಹಾಕಲಾಗಿದ್ದು, ಇದನ್ನು ಕೈಯಿಂದಲೇ ಸುಲಭವಾಗಿ ಕೀಳಬಹುದಾಗಿದೆ. ಇದು ಶೇಕಡಾ 60 ಕಮಿಷನ್ ಪ್ರಭಾವ ಎಂದು ಮಾಲಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಚುನಾವಣಾ ಸಮಯದಲ್ಲಿ ಮಾಯಜಾಲದಂತೆ ಕಾಮಗಾರಿಗಳು ನಡೆಯುತ್ತದೆ ಎಂಬುದಕ್ಕೆ ಈ ರಸ್ತೆಯೇ ಸೂಕ್ತ ಉದಾಹರಣೆ ಆಗಿದೆ.
ಬಿತ್ತನೆ ಬೀಜ ಸಿಗದೆ ಕಂಗಾಲಾದ ರೈತರು
ಪೂರ್ವ ಮುಂಗಾರು ಕೃಷಿಗೆ ಜಿಲ್ಲೆಯ ರೈತರು ಅಣಿಯಾಗುತ್ತಿದ್ದು, ಈಗಾಗಲೇ ಭೂಮಿ ಹದ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯಲ್ಲಿ ಬಿತ್ತನೆ ಬೀಜ ಸಿಗದೇ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ವಾರಗಳಿಂದ ಜಿಲ್ಲೆಯಲ್ಲಿ ಸುಡು ಬಿಸಿಲು ಹೆಚ್ಚಾಗಿದೆ. ಇದರ ನಡುವೆಯೂ ಕೂಡ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಅಲ್ಲಲ್ಲಿ ಜಿನುಗು ಮಳೆಯಾಗಿದೆ. ಆದ್ದರಿಂದ ಇಲ್ಲಿನ ರೈತರು ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲಿ ಭೂಮಿಯನ್ನು ಹದಗೊಳಿಸಿ ಬಿತ್ತನೆ ಮಾಡಲು ತಯಾರಾಗುತ್ತಿದ್ದು, ಇದೀಗ ಹತ್ತಿ ಬೀಜ ಕೊರತೆಯಿಂದಾಗಿ ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ.
ಕೇವಲ ಎರಡೇ ತಾಸಿಗೆ ಬೇಗೂರಿನ ಬೀಜ ಮಾರಾಟ ಮಳಿಗೆ ಬಾಗಿಲು ಮುಚ್ಚಿದ್ದು, ನೂರಾರು ಜನ ರೈತರು ಹತ್ತಿ ಬೀಜ ಸಿಗದ ಕಾರಣ ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಅಂಗಡಿ ಮಾಲೀಕ ತನಗೆ ಬೇಕಾದವರಿಗೆ ಬೀಜ ಮಾರಾಟ ಮಾಡಿ ಬಾಗಿಲು ಮುಚ್ಚಿದ್ದಾನೆ ಎಂಬ ಆರೋಪ ಕೇಳಿಬಂದೆ. ಇದರಿಂದ ಆಕ್ರೋಶಗೊಂಡ ರೈತರು ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.
ನೂರಾರು ಮಂದಿ ರೈತರು ಬೀಜ ಸಿಗದೇ ಸ್ಥಳದಲ್ಲೇ ಬೀಡು ಬಿಟ್ಟುವುದರಿಂದ ಪೊಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾಗಿದ್ದಾರೆ. ರೈತರಿಗೆ ಮಳೆ ಬಂದಂತಹ ಸಂದರ್ಭದಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ, ಮತ್ತೊಂದೆಡೆ ಬೆಳೆ ಬಂದರೆ ಬೆಲೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications