ಕೌಟುಂಬಿಕ ರಾಜಕಾರಣ: ಇವರಿಗೆ 5ನೇ ಸೋಲು, ಅವರಿಗೆ 6ನೇ ಗೆಲುವು
ಕಳೆದ 23 ವರ್ಷಗಳಲ್ಲಿ ಗುಂಡ್ಲುಪೇಟೆಯಲ್ಲಿ 6 ಚುನಾವಣೆಗಳು ನಡೆದಿವೆ. ಈ ಆರು ಚುನಾವಣೆಗಳಲ್ಲಿ ಸಿಎಸ್ ನಿರಂಜನ್ ಕುಮಾರ್ ಕುಟುಂಬ 5 ಬಾರಿ ಸೋತಿದೆ, ಎಚ್.ಎಸ್ ಮಹದೇವ ಪ್ರಸಾದ್ ಕುಟುಂಬ 6 ಬಾರಿ ಗೆದ್ದಿದೆ.
ಗುಂಡ್ಲುಪೇಟೆ, ಏಪ್ರಿಲ್ 13: ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಷ್ಟಪಟ್ಟು ಗೆದ್ದಿದೆ. ಜತೆಗೆ ಇಲ್ಲಿನ ವಿಶಿಷ್ಟ ಕೌಟುಂಬಿಕ ರಾಜಕಾರಣದ ದಾಖಲೆ ಈ ಚುನಾವಣೆಯಲ್ಲೂ ಮುಂದುವರಿದಿದೆ.
ಅಚ್ಚರಿಯ ವಿಷಯವೆಂದರೆ ಗುಂಡ್ಲುಪೇಟೆಯಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಜತೆಗೆ 5 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ ಸಿಎಸ್ ನಿರಂಜನ್ ಕುಮಾರ್ ಕುಟುಂಬಕ್ಕೆ ಒಂದೇ ಒಂದು ಬಾರಿಯೂ ಅದೃಷ್ಟ ಕೈಹಿಡಿದಿಲ್ಲ. ಅಷ್ಟೇ ವಿಚಿತ್ರವೆಂದರೆ ಇಲ್ಲಿ ಎಚ್ ಎಸ್ ಮಹದೇವ ಪ್ರಸಾದ್ ಕುಟುಂಬ ಸತತ ಆರು ಬಾರಿ ಗೆದ್ದಿದೆ.[ಸಿದ್ದರಾಮಯ್ಯ ಪತ್ರಿಕಾಗೋಷ್ಠಿ: ಎದೆ ಸೀಳಿ ಬರೆದ ಕವನ]
ಕಳೆದ 23 ವರ್ಷಗಳಲ್ಲಿ ಇಲ್ಲಿ 6 ಚುನಾವಣೆಗಳು ನಡೆದಿವೆ. ಈ ಆರು ಚುನಾವಣೆಗಳಲ್ಲಿ ಸಿಎಸ್ ನಿರಂಜನ್ ಕುಮಾರ್ ಕುಟುಂಬ ಮತ್ತು ಎಚ್.ಎಸ್ ಮಹದೇವ ಪ್ರಸಾದ್ ಕುಟುಂಬ 5 ಬಾರಿ ಮುಖಾಮುಖಿಯಾಗಿವೆ. ಹೀಗೆ ಈ ಕ್ಷೇತ್ರದಲ್ಲಿ ಕೌಟುಂಬಿಕ ರಾಜಕಾರಣವೇ ಮೇಳೈಸಿದೆ.
ಐದೂ ಬಾರಿ ನಿರಂಜನ್ ಕುಮಾರ್ ಕುಟುಂಬ ಸೋತಿದ್ದರೆ, ಮಹದೇವ ಪ್ರಸಾದ್ ಕುಟುಂಬ 5 ಕೌಟುಂಬಿಕ ಮುಖಾಮುಖಿ ಚುನಾವಣೆಗಳೂ ಸೇರಿ 6 ಬಾರಿ ಗೆಲುವಿನ ನಗೆ ಬೀರಿದೆ.
1985, 89 - ಮಹದೇವ ಪ್ರಸಾದ್ ಸೋಲು
1985ರಲ್ಲಿ ಮೊದಲ ಬಾರಿಗೆ ಎಚ್.ಎಸ್ ಮಹದೇವ ಪ್ರಸಾದ್ ಚುನಾವಣೆ ಎದುರಿಸಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಅವರಿಗೆ ಮೊದಲ ಬಾರಿ ಸೋಲು ಕಾದಿತ್ತು. ಕಾಂಗ್ರೆಸ್ ಅಭ್ಯರ್ಥಿ ನಾಗರತ್ನಮ್ಮ ವಿರುದ್ಧ ಅವರು ಸೋಲು ಕಂಡರು. ಮುಂದೆ 1989ರಲ್ಲಿ ಜನತಾ ಪಕ್ಷದಿಂದ ಮತ್ತೆ ಸ್ಪರ್ಧಿಸಿ ಇದೇ ನಾಗರತ್ನಮ್ಮ ವಿರುದ್ಧ ಸೋಲನುಭವಿಸಿದರು.
1994- ನಿರಂಜನ್ ತಂದೆ V/S ಮಹದೇವ ಪ್ರಸಾದ್
ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಸಿಎಸ್ ನಿರಂಜನ್ ಕುಮಾರ್ ತಂದೆ ಸಿಎಂ ಶಿವಮಲ್ಲಪ್ಪ ಮತ್ತು ಮಹದೇವ ಪ್ರಸಾದ್ ಮುಖಾಮುಖಿಯಾಗಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಹದೇವ ಪ್ರಸಾದ್ ಸುಮಾರು 23 ಸಾವಿರ ಮತಗಳ ಅಂತರದಿಂದ ಕಾಂಗ್ರೆಸಿನ ಶಿವಮಲ್ಲಪ್ಪರನ್ನು ಸೋಲಿಸಿದ್ದರು. ಇದು ಮಹದೇವ ಪ್ರಸಾದ್ ಪಾಲಿನ ಮೊದಲ ಗೆಲುವು ಎಂಬುದು ವಿಶೇಷ. ಎರಡು ಬಾರಿ ಸೋತಿದ್ದ ಮಹದೇವ ಪ್ರಸಾದ್ ಮೂರನೇ ಯತ್ನದಲ್ಲಿ ಗೆಲುವಿನ ನಗೆ ಬೀರಿದ್ದರು.[ಪ್ರಸಾದ್ ಗೆ ಭರ್ಜರಿ ಗುದ್ದು ನೀಡಿದ ಸಿಎಂ ಸಿದ್ದು]
1999 – ಗೆದ್ದ ಮಹದೇವ ಪ್ರಸಾದ್
ಮತ್ತೆ ಮಹದೇವ ಪ್ರಸಾದ್ ಮತ್ತು ಸಿಎಂ ಶಿವಮಲ್ಲಪ್ಪ ಮುಖಾಮುಖಿಯಾದರು. ಈ ಬಾರಿ ಶಿವಮಲ್ಲಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು, ಆದರೆ ಗೆಲ್ಲುವ ಸರದಿ ಮತ್ತೆ ಜೆಡಿಯು ಅಭ್ಯರ್ಥಿಯಾಗಿದ್ದ ಮಹದೇವ ಪ್ರಸಾದ್ ಅವರದಾಗಿತ್ತು. ಶಿವಮಲ್ಲಪ್ಪರನ್ನು ಬರೋಬ್ಬರಿ 25 ಸಾವಿರ ಮತಗಳ ಅಂತರದಿಂದ ಪ್ರಸಾದ್ ಮಣ್ಣು ಮುಕ್ಕಿಸಿದರು.[ಗುಂಡ್ಲುಪೇಟೆಯಲ್ಲಿ ಗೆದ್ದ ಗೀತಾ ಮಹದೇವಪ್ರಸಾದ್ ಕಿರುಪರಿಚಯ]
2004 – ಹ್ಯಾಟ್ರಿಕ್ ಗೆಲುವು
ಈ ಬಾರಿ ಮಹದೇವಪ್ಪ ಮತ್ತೆ ಕಣಕ್ಕಿಳಿದು ಜಯಶಾಲಿಯಾದರು ಆದರೆ ಸಿಎಸ್ ನಿರಂಜನ್ ಕುಮಾರ್ ಆಗಲಿ ಅವರ ತಂದೆ ಸಿಎಂ ಶಿವಮಲ್ಲಪ್ಪ ಕಣಕ್ಕಿಳಿದಿರಲಿಲ್ಲ. ಈ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಹದೇವ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ 11 ಸಾವಿರ ಮತಗಳಿಂದ ಜಯಗಳಿಸಿದ್ದರು.[ಗೆಲುವನ್ನು ಪತಿಗೆ ಅರ್ಪಿಸುತ್ತೇನೆ: ಗೀತಾ ಮಹದೇವಪ್ರಸಾದ್]
2008 – ಸಿಎಸ್ ನಿರಂಜನ್ ಎಂಟ್ರಿ
2008ರ ಚುನಾವಣೆಯಲ್ಲಿ ತಂದೆ ಜಾಗದಲ್ಲಿ ಶಿವಮಲ್ಲಪ್ಪ ಪುತ್ರ ಸಿಎಸ್ ನಿರಂಜನ್ ಕುಮಾರ್ ಕಣಕ್ಕಿಳಿದಿದ್ದರು. ಆದರೆ ಮಹದೇವ ಪ್ರಸಾದ್ ಗೆಲುವಿನ ನಾಗಾಲೋಟಕ್ಕೆ ತಡೆ ಹಾಕಲು ಅವರಿಗೂ ಸಾಧ್ಯವಾಗಲಿಲ್ಲ. ಕೇವಲ 2 ಸಾವಿರ ಮತಗಳಿಂದ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಮಹದೇವ ಪ್ರಸಾದ್ ವಿಧಾನಸಭೆ ಪ್ರವೇಶಿಸಿದರು. ಆದರೆ ಈ ಬಾರಿ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು ಎಂಬುದು ವಿಶೇಷ.
2013 – ಪ್ರಸಾದ್ ಗೆ 5ನೇ ಗೆಲುವು
ಕಾಂಗ್ರೆಸ್ ನ ಮಹದೇವ ಪ್ರಸಾದ್ ವಿರುದ್ಧ ನಿರಂಜನ್ ಕುಮಾರ್ ಮತ್ತೆ ಸ್ಪರ್ಧಿಸಿದರು. ಆದರೆ ಯಡಿಯೂರಪ್ಪನವರ ಕೆಜಿಪಿಯಿಂದ ಸ್ಪರ್ಧಿಸಿದ್ದ ನಿರಂಜನ್ ಸುಮಾರು 7 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ಐದನೇ ಬಾರಿಗೆ ಶಾಸಕರಾಗುವ ಭಾಗ್ಯ ಮಹದೇವ ಪ್ರಸಾದ್ ಗೆ ಒಲಿದು ಬಂತೇ ವಿನಃ ನಿರಂಜನ್ ಕುಮಾರ್ ಕುಟುಂಬಕ್ಕೆ 4ನೇ ಬಾರಿಗೂ ಗೆಲುವು ಒಲಿಯಲಿಲ್ಲ.
2017- ಹ್ಯಾಟ್ರಿಕ್ ಸೋಲು
ಮಹದೇವ ಪ್ರಸಾದ್ ನಿಧನದಿಂದ ಉಪಚುನಾವಣೆ ನಡೆದು ಅವರ ಜಾಗದಲ್ಲಿ ಕಾಂಗ್ರೆಸಿನಿಂದ ಗೀತಾ ಮಹದೇವ ಪ್ರಸಾದ್ ಸ್ಪರ್ಧಿಸಿದರು. ಈ ಬಾರಿಯೂ ಬಿಜೆಪಿಯ ನಿರಂಜನ್ ಗೆ ಅದೃಷ್ಟ ಒಲಿಯಲೇ ಇಲ್ಲ. ನಿರಂಜನ್ 10,877 ಮತಗಳಿಂದ ಹ್ಯಾಟ್ರಿಕ್ ಸೋಲು ಕಂಡರೆ, ಮಹದೇವ ಪ್ರಸಾದ್ ಕುಟುಂಬ ಡಬಲ್ ಹ್ಯಾಟ್ರಿಕ್ ಗೆಲುವು ಕಂಡಿತು. ಸತತ 5 ಸೋಲಿನೊಂದಿಗೆ ನಿರಂಜನ್ ಕುಟುಂಬ ಮುಖಭಂಗ ಅನುಭವಿಸಿದ್ದರೆ, ಸತತ ಆರು ಗೆಲುವು ಕಂಡು ಕ್ಷೇತ್ರದ ಮೇಲೆ ಪ್ರಸಾದ್ ಕುಟುಂಬ ಭಿಗಿ ಹಿಡಿತ ಹೊಂದಿದೆ.