ಬಂಡೀಪುರದಲ್ಲಿ ಹೊಸ ಸಫಾರಿ ಜೋನ್ಗೆ ಗ್ರೀನ್ ಸಿಗ್ನಲ್
ಚಾಮರಾಜನಗರ, ಜೂನ್ 03: ಬಂಡೀಪುರದಲ್ಲಿ ನೂತನವಾಗಿ ಮೇಲುಕಾಮನಹಳ್ಳಿಯಲ್ಲಿ ಆರಂಭಿಸಲಾಗಿರುವ ಸಫಾರಿಗೆ ಜೂನ್ 2, ಭಾನುವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಇದುವರೆಗೆ ನಡೆಯುತ್ತಿದ್ದ ಸಫಾರಿಯನ್ನು ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಬಂಡೀಪುರದ ಕೋರ್ ಜೋನ್ನಿಂದ ಬಫರ್ ಜೋನ್ಗೆ ವರ್ಗಾಯಿಸಲಾಗಿದ್ದು, ಅದರಂತೆ ಇದೀಗ ನೂತನ ಸ್ಥಳದಲ್ಲಿ ಸಫಾರಿ ಆರಂಭವಾಗಿದೆ.
ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಬಂಡೀಪುರ, ತನ್ನ ವನ್ಯ ಸಂಪತ್ತುಗಳಿಂದ ಇಡೀ ಜಗತ್ತಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ನಡೆಯುವ ಸಫಾರಿ ಎಲ್ಲರ ಗಮನಸೆಳೆದಿದೆ. ಬಂಡೀಪುರ ಹುಲಿ, ಜಿಂಕೆ, ಆನೆಗಳು ಸೇರಿದಂತೆ ಹಲವು ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ. ಹೀಗಾಗಿ ಪ್ರವಾಸಿಗರು ಅಭಯಾರಣ್ಯದೊಳಗೆ ಸಫಾರಿಗೆ ತೆರಳುವುದು ಹಿಂದಿನಿಂದಲೂ ನಡೆದು ಬಂದಿದೆ.

ಬಂಡೀಪುರದಿಂದ ನಾಲೈದು ಕಿಲೋ ಮೀಟರ್ ಅಂತರದಲ್ಲಿರುವ ಮೇಲುಕಾಮನಹಳ್ಳಿಯ ಬಂಡೀಪುರ ಸ್ವಾಗತ ಕಮಾನು ಬಳಿ ಸಫಾರಿ ಜೋನ್ ಕೌಂಟರ್ ಆರಂಭಿಸಲಾಗಿದೆ. ಇಷ್ಟು ದಿನಗಳ ಕಾಲ ಸಫಾರಿಗಾಗಿ ಪ್ರವಾಸಿಗರು ಬಂಡೀಪುರಕ್ಕೆ ತೆರಳುತ್ತಿದ್ದರು. ನಿತ್ಯ ಸಾವಿರಾರು ಮಂದಿ ಬಂದು ಹೋಗುವ ವೇಳೆಯಲ್ಲಿ ವನ್ಯ ಪ್ರಾಣಿಗಳ ಖಾಸಗಿ ಜೀವನಕ್ಕೆ ಅಡ್ಡಿಯಾಗುತ್ತಿರುವುದನ್ನು ಗಮನಿಸಿ ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರವು ಕೋರ್ನಲ್ಲಿರುವ ಸಫಾರಿ ಕೌಂಟರನ್ನು ಬಫರ್ ಜೋನ್ಗೆ ಸ್ಥಳಾಂತರ ಮಾಡುವಂತೆ 2009ರಲ್ಲೇ ನಿದೇರ್ಶನ ನೀಡಿತ್ತು. ಆದರೆ ಬಂಡೀಪುರದ ಅಧಿಕಾರಿಗಳು ಸಫಾರಿ ಜೋನ್ ಸ್ಥಳಾಂತರಕ್ಕೆ ಮುಂದಾಗಲಿಲ್ಲ. ದಶಕದ ಬಳಿಕ ಸಫಾರಿ ಜೋನ್ ಅನ್ನು ಸ್ಥಳಾಂತರ ಮಾಡಲು ಕೊನೆಗೂ ಅರಣ್ಯ ಅಧಿಕಾರಿಗಳು ನಿರ್ಧಾರ ಮಾಡಿ, ಜೂನ್2 ರಿಂದ ಮೇಲುಕಾಮನಹಳ್ಳಿಯಲ್ಲಿ ಸಫಾರಿ ಕೌಂಟರ್ ತೆರೆದು ಸಫಾರಿ ಆರಂಭಿಸಿದ್ದಾರೆ. ಸ್ಥಳೀಯ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ನೂತನ ಸಫಾರಿಗೆ ಚಾಲನೆ ನೀಡಿದ್ದಾರೆ.
ಈಗಾಗಲೇ ಮೇಲುಕಾಮನಹಳ್ಳಿಗೆ ಸ್ಥಳಾಂತರಗೊಂಡಿರುವ ಸಫಾರಿ ಕೌಂಟರ್ ಬಳಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮೊದಲನೇ ಹಂತದಲ್ಲಿ 3.57ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ಎರಡನೇ ಹಂತದಲ್ಲಿ 1.61 ಕೋಟಿ ರೂಪಾಯಿ ವೆಚ್ಚದಲ್ಲಿ ಉಳಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ.
ಇನ್ನು 2018-19ನೇ ಸಾಲಿನಲ್ಲಿ ಸಫಾರಿಗೆ ಬರುವ ಪ್ರವಾಸಿಗರಿಂದ ಹಾಗೂ ಇತರೆ ಮೂಲಗಳಿಂದ 8,52,47,637ರೂ. ಹಾಗೂ 2019ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2,17,92,406 ರೂಪಾಯಿಗಳ ಆದಾಯ ಬಂದಿದೆ. ದೇಶದ ಪ್ರವಾಸಿಗರಲ್ಲದೆ ವಿದೇಶಿ ಪ್ರವಾಸಿಗರ ಸಂಖ್ಯೆ ಮಾರ್ಚ್ವರೆಗೆ 1,86,303 ಭಾರತೀಯರು, 4,707 ವಿದೇಶಿಯರು ಸಫಾರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications