ಪ್ರವಾಸಿಗರ ಸೋಗಿನಲ್ಲಿ ಕಾರು ಚಾಲಕನನ್ನು ದೋಚಿದ ದುಷ್ಕರ್ಮಿಗಳು
ಚಾಮರಾಜನಗರ, ಜನವರಿ 15: ಪ್ರವಾಸಿಗರ ಸೋಗಿನಲ್ಲಿ ಕಾರು ಬಾಡಿಗೆ ಮಾಡಿಕೊಂಡು ಬಂದ ದುಷ್ಕರ್ಮಿಗಳು ಮಾರ್ಗ ಮಧ್ಯೆ ಚಾಲಕನ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜನಗರ ಸಮೀಪದ ಹನೂರು ಬಳಿ ನಡೆದಿದೆ.
ಕಾರು ಚಾಲಕನನ್ನು ಮೈಸೂರಿನ ಲಲಿತಾದ್ರಿಪುರದ ನಂದೀಶ್ ಎಂದು ಗುರುತಿಸಲಾಗಿದೆ. ಗುರುವಾರ ನಾಲ್ವರು ಯುವಕರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ಎಂದು ಹೇಳಿ ಕಾರನ್ನು ಬಾಡಿಗೆಗೆ ಪಡೆದಿದ್ದರು.
ಹನೂರು ಸಮೀಪ ಬರುತ್ತಿದ್ದಂತೆ ಒಬ್ಬ ಯುವಕ ವಾಂತಿ ಬರುತ್ತಿದೆ ಕಾರು ನಿಲ್ಲಿಸಿ ಎಂದಿದ್ದಾನೆ. ಕಾರು ನಿಲ್ಲುತ್ತಿದ್ದಂತೆ ಚಾಲಕನಿಗೆ ಚಾಕು ತೋರಿಸಿ ಹಣವಿದ್ದರೆ ಕೊಟ್ಟುಬಿಡು, ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ.

ದುಷ್ಕರ್ಮಿಗಳ ಪೈಕಿ ಒಬ್ಬಾತ ಬಾಯಿ ಬಿಗಿಹಿಡಿದುಕೊಂಡು ಪ್ಯಾಂಟ್, ಶರ್ಟ್ ಬಿಚ್ಚಿ ಕೈ ಹಾಗೂ ಬಾಯಿಗೆ ಕಟ್ಟಿದ್ದಾರೆ. ಬಲತೊಳಿಗೆ ಹಾಗೂ ಇತರೆಡೆ ಚಾಕುವಿನಿಂದ ಇರಿದು ಚಾಲಕನ ಬಳಿ ಇದ್ದ 14 ಸಾವಿರ ರೂ. ಬೆಲೆ ಬಾಳುವ ಮೊಬೈಲ್, ಹಣವನ್ನು ಕಸಿದುಕೊಂಡಿದ್ದಾನೆ.
ಎಲ್ಲರೂ ಸೇರಿ ಕಾರನ್ನು ಹಳ್ಳವೊಂದಕ್ಕೆ ತಳ್ಳಿ ಪರಾರಿಯಾಗಿದ್ದಾರೆ. ಆ ಮಾರ್ಗವಾಗಿ ಬರುತಿದ್ದ ಪೊಲೀಸ್ ಜೀಪ್ನಲ್ಲಿದ್ದ ಅಧಿಕಾರಿಗಳು ಚಾಲಕನನ್ನು ಗುರುತಿಸಿ, ರಕ್ಷಿಸಿದ್ದಾರೆ. ಗಾಯಗೊಂಡಿರುವ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಳ್ಳೇಗಾಲ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.











Click it and Unblock the Notifications