ಬಂಡೀಪುರದಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಾಣ
ಚಾಮರಾಜನಗರ, ಜುಲೈ 1: ಕೊನೆಗೂ ಬಂಡೀಪುರ ಅರಣ್ಯವನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಕಂದಕ ನಿರ್ಮಿಸುವ ಮೂಲಕ ಅರಣ್ಯ ರಕ್ಷಣೆ ಮಾಡಲಾಗಿದೆ.
Recommended Video
ಬಂಡೀಪುರ ಅರಣ್ಯದ ಗಡಿಯಲ್ಲಿ ಕೇರಳಿಗರು ಸೇರಿದಂತೆ ಹಲವರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದವಲ್ಲದೆ, ತೆರವಿಗೆ ಒತ್ತಾಯ ಮಾಡಲಾಗಿತ್ತು. ಇದೀಗ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದಲ್ಲಿ ಒತ್ತುವರಿಯಾಗಿದ್ದ ಅರಣ್ಯ ಭೂಮಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿರುವ ಅರಣ್ಯ ಇಲಾಖೆ ಗಡಿಯಲ್ಲಿ ಕಂದಕ ನಿರ್ಮಿಸುವ ಮೂಲಕ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮದ್ದೂರು ಅರಣ್ಯ ವಲಯದ ಕಾಡಂಚಿನ ಚನ್ನಮಲ್ಲೀಪುರ, ಹೊಂಗಹಳ್ಳಿ, ನವಿಲುಗುಂದಿ, ಮುಂತಾದ ಪ್ರದೇಶಗಳಲ್ಲಿ ಒತ್ತುವರಿಯಾಗಿದ್ದ ಭೂಮಿಯನ್ನು ಅರಣ್ಯ ಇಲಾಖೆಯು ತೆರವುಗೊಳಿಸಿದೆ. ಕೇರಳದ ಕೆಲವು ಪ್ರಭಾವಿಗಳು ಹಿಂದುಳಿದ ಹಾಗೂ ಬಡವರ ಜಮೀನುಗಳನ್ನು ಖರೀದಿಸಿ ಅದರ ಜತೆಗೆ ನೂರಾರು ಎಕರೆ ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದರು.

ನೂರಾರು ಎಕರೆ ಅರಣ್ಯ ಒತ್ತುವರಿ
ಈ ಬಗ್ಗೆ ಸರ್ವೆ ನಡೆಸಿ ಕಾಡಂಚಿನಲ್ಲಿ ಜಮೀನು ಹೊಂದಿದ್ದ ಕ್ಯಾಲಿಕಟ್ ಮೂಲದ ಮೊಹಮದ್ ಫೈಸಲ್, ಮೊಹಮದ್ ಬಶೀರ್, ಗುಂಟೆ, ಓಮನ್ ಬಾಲಚಂದ್ರ, ಶಿವಪ್ಪ, ಕಾಳ, ಬಸಪ್ಪ, ಸ್ವಾಮಿ ಹಾಗೂ ಶಿವರುದ್ರಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಎಲ್ಲ 8 ಪ್ರಕರಣಗಳನ್ನು ವಿಚಾರಣೆ ನಡೆಸಿದ ಎಸಿಎಫ್ ನ್ಯಾಯಾಲಯ, ಖಾಸಗಿ ವ್ಯಕ್ತಿಗಳ ವಶದಲ್ಲಿದ್ದ 120 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆದುಕೊಂಡಿದೆ.

ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಾಣ
ಕೆಲವರು ಯಾವುದೇ ತಕರಾರಿಲ್ಲದೆ ಭೂಮಿಯನ್ನು ಬಿಟ್ಟುಕೊಟ್ಟರೆ ಇನ್ನು ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದರಿಂದ ಒತ್ತುವರಿ ತೆರವು ಮಾಡಿದ್ದರು. ಅಲ್ಲದೆ ವಶಕ್ಕೆ ಪಡೆದ ಅರಣ್ಯ ಪ್ರದೇಶವನ್ನು ಉಪಗ್ರಹ ಆಧಾರಿತ ಸರ್ವೇ ಮಾಡಿಸುವ ಮೂಲಕ ಗಡಿಯನ್ನು ಗುರುತಿಸಿ ಗಡಿಯುದ್ದಕ್ಕೂ ಆನೆ ಕಂದಕವನ್ನು ನಿರ್ಮಿಸಲಾಗಿದೆ.

ಎಸಿಎಫ್ ನ್ಯಾಯಾಲಯದಲ್ಲಿ ದಾಖಲೆಗಳ ಪರಿಶೀಲನೆ
ಇನ್ನೊಂದೆಡೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 30 ರಿಂದ 40 ವರ್ಷಗಳ ಹಿಂದೆಯೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಅದರ ತೆರವಿಗೂ ಕ್ರಮಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಈಗಾಗಲೇ ಅತಿ ಹೆಚ್ಚು ಅತಿಕ್ರಮಣ ಪ್ರಕರಣಗಳಿರುವ ಹೆಡೆಯಾಲ, ಓಂಕಾರ್, ಮೊಳೆಯೂರು ವಲಯಗಳಲ್ಲಿ ಎಸಿಎಫ್ ನ್ಯಾಯಾಲಯದಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ಪ್ರಕರಣಗಳ ವಿಚಾರಣೆ ಮಾಡುತ್ತಿದೆ. ಎರಡು ಮೂರು ಎಕರೆಗಿಂತ ಹೆಚ್ಚಿನ ಒತ್ತುವರಿ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಂಡು ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ.

ಅರಣ್ಯ ಒತ್ತುವರಿ ತೆರವಿಗೆ ಶ್ಲಾಘನೆ
ಅರಣ್ಯ ಒತ್ತುವರಿದಾರರಿಂದ ಭೂಮಿಯನ್ನು ತೆರವುಗೊಳಿಸಿರುವ ಕ್ರಮವನ್ನು ಹಲವು ಗ್ರಾಮಸ್ಥರು ಶ್ಲಾಘಿಸಿದ್ದು, ಇನ್ನೂ ಹೆಚ್ಚಿನ ಜನರು ಅರಣ್ಯ ಭೂಮಿ, ಗೋಮಾಳ ಹಾಗೂ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಈಗಾಗಲೇ ಕಗ್ಗಳದಹುಂಡಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಕಾರಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.












Click it and Unblock the Notifications