ಬಂಡೀಪುರದಲ್ಲಿ ನಾಡಿನತ್ತ ನುಸುಳುವ ಆನೆಗಳ ಅಟಾಟೋಪಕ್ಕೆ ಬ್ರೇಕ್
ಚಾಮರಾಜನಗರ, ಮಾರ್ಚ್ 2: ಬಂಡೀಪುರದ ಅರಣ್ಯದಿಂದ ನಾಡಿನತ್ತ ನುಸುಳಿ ಬರುವ ಪುಂಡಾನೆಗಳ ಅಟಾಟೋಪಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಆನೆ ಕಂದಕಗಳನ್ನು ನಿರ್ಮಿಸುವ ಕಾರ್ಯ ಇದೀಗ ಭರದಿಂದ ಸಾಗಿದೆ.
ಸಾಮಾನ್ಯವಾಗಿ ಬೇಸಿಗೆ ಬರುತ್ತಿದ್ದಂತೆಯೇ ಅರಣ್ಯದಲ್ಲಿ ಹಸಿರು ಮೇವಿಗೆ ಕೊರತೆಯಾಗುವುದರಿಂದ ಕಾಡಾನೆಗಳು ಮೇವು ಹುಡುಕಿಕೊಂಡು ರೈತರ ಜಮೀನಿನತ್ತ ಬರುತ್ತವೆ. ರೈತರು ಕಷ್ಟಪಟ್ಟು ನೀರು ಹಾಯಿಸಿ ಕಬ್ಬು, ಜೋಳ, ಬಾಳೆ ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಮತ್ತು ಅವು ಹಸಿರಾಗಿ ಗೋಚರಿಸುವುದರಿಂದ ಅತ್ತ ಕಡೆಯೇ ಕಾಡಾನೆಗಳು ಹೊಂಚು ಹಾಕಿ ಬರುತ್ತವೆ. ಇದರಿಂದ ಕಷ್ಟಪಟ್ಟು, ಸಾಲ ಮಾಡಿ ಬೆಳೆದ ಬೆಳೆಗಳು ಕಾಡಾನೆಗಳ ಪಾಲಾಗುತ್ತಿವೆ. ಇದನ್ನು ತಪ್ಪಿಸಲು ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.
ಕಾಡಾನೆಗಳ ಹಾವಳಿ ತಪ್ಪಿಸಲು ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿದ ಅರಣ್ಯ ಇಲಾಖೆ, ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ 2 ಕೋಟಿ ಅನುದಾನದಲ್ಲಿ ಆನೆ ಕಂದಕ ಹಾಗೂ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಆದರೂ ಮೂರು ಆನೆಗಳ ಗುಂಪು ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿರುವುದು ರೈತರ ನಿದ್ದೆಗೆಡಿಸಿದೆ.

ಗುಂಡ್ಲುಪೇಟೆ ಗಡಿಭಾಗವಾದ ಓಂಕಾರ ಅರಣ್ಯ ವ್ಯಾಪ್ತಿಯ ಓಂಕಾರೇಶ್ವರ ಕಳ್ಳಬೇಟೆ ಶಿಬಿರ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ರೈತರು ನೀಡಿದ ದೂರಿನ ಮೇರೆಗೆ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಆನೆ ಕಂದಕ ಕಾಮಗಾರಿ ವೀಕ್ಷಿಸಿದ್ದಾರೆ.












Click it and Unblock the Notifications