ಪರಿಸರವಾದಿಗಳು- ರಾಜಕಾರಣಿಗಳ ನಡುವೆ ಹಗ್ಗಜಗ್ಗಾಟ: ಆಗುವುದೇ ಗಡಿಜಿಲ್ಲೆಯ 3ನೇ ಹುಲಿ ರಕ್ಷಿತಾರಣ್ಯ?
ಚಾಮರಾಜನಗರ, ನವೆಂಬರ್ 14: ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದರೆ, ಹುಲಿ ರಕ್ಷಿತಾರಣ್ಯ ಬೇಡವೇ ಬೇಡ ಎಂದು ರಾಜಕಾರಣಿಗಳು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿಧಾಮಗಳಿದ್ದು ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಅರಣ್ಯ ಇಲಾಖೆಯ ಪ್ರಸ್ತಾಪಕ್ಕೆ ಎನ್ಟಿಸಿಎ ಕೂಡ ಅನುಮೋದನೆ ನೀಡಿದ್ದು ಮುಖ್ಯಮಂತ್ರಿ ಬಳಿ ಈಗ ಕಡತ ಬಂದು ಕುಳಿತಿದೆ. ವನ್ಯಜೀವಿಧಾಮದಲ್ಲಿ 15ಕ್ಕೂ ಹೆಚ್ಚು ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದೆ.
ನಾಗರಹೊಳೆಯಲ್ಲಿ ಮೂರು ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆಯಿಂದ ಹುಡುಕಾಟ
ಮಲೆಮಹದೇಶ್ವರ ವನ್ಯಜೀವಿಧಾಮವು ಬಿಆರ್ಟಿ, ಸತ್ಯಮಂಗಲಂ ಹಾಗೂ ಬರಗೂರು ಮೀಸಲು ಅರಣ್ಯದೊಟ್ಟಿಗಿನ ಸಂಪರ್ಕ ಸೇತುವಾಗಿದ್ದು, ಅರಣ್ಯ ಸಂರಕ್ಷಣೆ ಹಾಗೂ ಹುಲಿ ಸಂತತಿ ಉಳಿವಿನ ಕಾರಣದಿಂದ ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ರಕ್ಷಿತಾರಣ್ಯ ಎಂದು ಸಿಎಂ ಘೋಷಿಸಬೇಕು ಎಂಬುದು ಪರಿಸರವಾದಿಗಳ ಒತ್ತಾಯವಾಗಿದೆ.
ಈ ಸಂಬಂಧ ಈಗಾಗಲೇ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಸೇರಿದಂತೆ ಹಲವರು ಟೈಗರ್ ರಿಸರ್ವ್ ಮಾಡುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ. ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಕೆಲವು ದಿನಗಳ ಹಿಂದೆಯಷ್ಟೇ ಕಾವೇರಿ ಕೊಳ್ಳದ ಮೀಸಲು ಅರಣ್ಯವನ್ನು ಕಾವೇರಿ ವನ್ಯಧಾಮ ಎಂದು ಘೋಷಿಸಿದ್ದು, ಸ್ಟಾಲಿನ್ ಅವರ ಪರಿಸರಪ್ರೇಮವನ್ನು ಬೊಮ್ಮಾಯಿ ಕೂಡ ತೋರಬೇಕೆಂದು ಹೂವರ್ ಹೇಳಿದ್ದಾರೆ.
ಹುಲಿರಕ್ಷಿತಾರಣ್ಯಕ್ಕೆ ಜನಪ್ರತಿನಿಧಿಗಳ ವಿರೋಧ
ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೇ ಜನರ ಓಡಾಟಕ್ಕೆ, ದನಗಾಹಿಗಳಿಗೆ, ಮಲೆಮಹದೇಶ್ವರನ ಭಕ್ತರಿಗೆ, ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಲಿದೆ ಎಂದು ಹನೂರು ಕ್ಷೇತ್ರದ ಶಾಸಕ ನರೇಂದ್ರ, ಸಚಿವ ಸೋಮಣ್ಣ ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಸರಕಾರದ ನಿರ್ಧಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ, ಕೈ ಶಾಸಕ ನರೇಂದ್ರ ಕೂಡ ಧ್ವನಿಗೂಡಿಸಿದ್ದರು. ಹನೂರಿನ ಜೆಡಿಎಸ್ ಮುಖಂಡ ಮಂಜುನಾಥ್ ಎಚ್ಡಿಕೆ ಬಳಿ ಹುಲಿ ರಕ್ಷಿತಾರಣ್ಯ ಮಾಡದಂತೆ ಒತ್ತಡ ಹೇರಬೇಕೆಂದು ಮನವಿ ಮಾಡಿ ಬಂದಿದ್ದಾರೆ.
ನೆಲೆಕಳೆದುಕೊಳ್ಳುವ ಭೀತಿ
ಮಲೆ ಮಹಾದೇಶ್ವರ ಬೆಟ್ಟ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಹಬ್ಬ ಹರಿದಿನಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಿಗೆ ಬರುವ ಭಕ್ತರು ಊಳಿದುಕೊಳ್ಳುತ್ತಾರೆ. ಅಲ್ಲದೆ ಬೆಟ್ಟದ ಸುತ್ತಮುತ್ತ ಹತ್ತಾರು ಹಳ್ಳಿಗಳಿವೆ, ಎಲ್ಲಾ ಗ್ರಾಮಗಳು ಅರಣ್ಯದ ಒಳಗಡೆ ಇರುವುದರಿಂದ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಕಾಡಿನ ಸುತ್ತಮುತ್ತ ಜನರು ವಾಸಿಸುವುದಕ್ಕೆ ನಿಷೇಧವಿರಲಿದೆ. ಒಂದು ವೇಳೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿದರೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲಾಗುತ್ತದೆ. ಹೀಗಾಗಿ ಹುಲಿ ಸಂರಕ್ಷಿತ ಪ್ರದೇಶ ಮಾಡಬಾರದು ಎಂಬುದು ಸ್ಥಳೀಯರು ಹಾಗೂ ರಾಜಕಾರಣಿಗಳ ಒತ್ತಾಯವಾಗಿದೆ.
ಜಿಲ್ಲೆಯ 3ನೇ ಹುಲಿ ಸಂರಕ್ಷಿತಾರಣ್ಯ
ಕರ್ನಾಟಕದಲ್ಲಿ ಈಗಾಗಲೇ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಲೆ ಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದರೆ 6ನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ. ಚಾಮರಾಜನಗರ ಜಿಲ್ಲೆಯಲ್ಲಿಯೇ ಎರಡು ಹುಲಿ ಸಂರಕ್ಷಿತ ಪ್ರದೇಶವಿದ್ದು, ಮಲೆ ಮಹದೇಶ್ವರ ವನ್ಯಧಾಮ ಜಲ್ಲೆಯ 3ನೇಹುಲಿ ಸಂರಕ್ಷಿತ ಪ್ರದೇಶವಾಗಲಿದೆ.
ಎರಡು ಮೂರು ವರ್ಷಗಳಿಂದಲೂ ಇದು ರಕ್ಷಿತಾರಣ್ಯ ಆಗಲಿದೆ ಎಂಬ ಪರಿಸರವಾದಿಗಳು ಒತ್ತಾಯಿಸುತ್ತಲೇ ಇದ್ದಾರೆ. ಇದೀಗ ಸರಕಾರ ಚುನಾವಣಾ ಹೊಸ್ತಿಲಲ್ಲಿ ಈ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವುದು ಕೂತೂಹಲಕಾರಿಯಾಗಿದೆ.
ಭಕ್ತರ ಓಡಾಟದ ಬಗ್ಗೆ ಸ್ಪಷ್ಟನೆ ಸಿಗಬೇಕು
ಒಂದು ವೇಳೆ ಮಲೆ ಮಹಾದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶವಾದರೇ ಸರಕಾರ ಮತ್ತು ಅರಣ್ಯ ಇಲಾಖೆ ಇಲ್ಲಿನ ಜನರಿ ಮೂಲಭೂತ ಸೌಕರ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಅನಿವಾರ್ಯತೆ ಇದೆ. ಅಲ್ಲದೆ ದಕ್ಷಿಣ ಕರ್ನಾಟಕದಲ್ಲಿ ಮಲೆ ಮಹಾದೇಶ್ವರ ಬೆಟ್ಟ ತುಂಬಾ ಪ್ರಸಿದ್ದವಾಗಿದ್ದು, ಲಕ್ಷಾಂತರ ಜನರು ದರ್ಶನಕ್ಕೆ ಆಗಮಿಸುತ್ತಾರೆ. ಈ ಭಾಗ ಹುಲಿ ಸಂರಕ್ಷಿತ ಪ್ರದೇಶವಾದರೆ ಭಕ್ತರ ಓಡಾಟಕ್ಕೆ ಯಾವುದೇ ಅಡಚಣೆ ಉಂಟಾಗಬಹುದು.
ಒಟ್ಟಿನಲ್ಲಿ ಮಲೆ ಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶವಾದರೆ ವನ್ಯಜೀವಿಗಳ ಸಂತತಿಯನ್ನು ಕಾಪಾಡಬಹುದು ಎಂಬುದು ಪರಿಸರವಾದಿಗಳ ಒತ್ತಾಯ, ಇತ್ತು ಹುಲಿ ಸಂರಕ್ಷಿತ ಪ್ರದೇಶವಾದರೆ ಕಾಡಿನಂಚಿನ ಜನರ ಜೀವನ ಮತ್ತೆ ಕತ್ತಲಲ್ಲೇ ಉಳಿಯಬಹುದು ಎನ್ನುವ ಆತಂಕ ಕಾಡುತ್ತಿದೆ. ಒಟ್ಟಿನಲ್ಲಿ ಎರಡೂ ಕಡೆ ಆಲೋಚಿಸಿ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಕಾಡು ನೋಡಬೇಕಿದೆ.