ಮದ್ಯದ ಅಮಲಿನಲ್ಲಿ ಹೆಂಡತಿಯನ್ನೇ ಕೊಂದು, ಪೊಲೀಸರಿಗೆ ಶರಣಾದ
ಚಾಮರಾಜನಗರ, ಅಕ್ಟೋಬರ್ 27: ಕುಡಿದು ಮನೆಗೆ ಬಂದ ಪತಿಯು ಹೆಂಡತಿಯೊಂದಿಗೆ ಜಗಳ ತೆಗೆದು, ಮಕ್ಕಳ ಎದುರಿನಲ್ಲೇ ರೀಪರ್ ಪಟ್ಟಿಯಿಂದ ಹೊಡೆದು ಕೊಲೆಗೈದ ಘಟನೆ ಉತ್ತವಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ: ಐವರನ್ನು ಹತ್ಯೆಗೈದ ಹಂತಕನಿಗೆ ಗಲ್ಲು ಖಾಯಂ
ಉತ್ತವಳ್ಳಿ ಗ್ರಾಮದ ಕುರುಬರ ಬೀದಿಯ ನಿವಾಸಿ ಮಂಜು ಎಂಬಾತನೇ ಹೆಂಡತಿ ಚಿನ್ನತಾಯಮ್ಮನನ್ನು ಕೊಲೆಗೈದ ಹಂತಕ. ಕೃತ್ಯ ಎಸಗಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಗಾರೆ ಕೆಲಸ ಮಾಡುತ್ತಿದ್ದ ಮಂಜುಗೆ ಇಬ್ಬರು ಮಕ್ಕಳಿದ್ದು, ಕುಡಿತದ ದಾಸನಾಗಿದ್ದ ಈತ ಪ್ರತಿ ದಿನವೂ ಕುಡಿದು ಬಂದು ಹೆಂಡತಿಯೊಂದಿಗೆ ಜಗಳಕ್ಕಿಳಿಯುತ್ತಿದ್ದ. ಇದು ನಿತ್ಯವೂ ನಡೆಯುತ್ತಿದ್ದರಿಂದ ಅಕ್ಕಪಕ್ಕದವರು ತಲೆ ಕೆಡಿಸಿಕೊಂಡಿರಲಿಲ್ಲ.
ಗುರುವಾರ ರಾತ್ರಿಯೂ ಕುಡಿದು ಮನೆಗೆ ಬಂದ ಮಂಜು ರಾತ್ರಿ 11ರ ಸಮಯದಲ್ಲಿ ಹೆಂಡತಿಯೊಂದಿಗೆ ಜಗಳ ಆರಂಭಿಸಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಮದ್ಯದ ಅಮಲಿನಲ್ಲಿದ್ದ ಆತ ಮಕ್ಕಳ ಎದುರಲ್ಲೇ ಹೆಂಡತಿಗೆ ರೀಪರ್ ಪಟ್ಟಿಯಿಂದ ಹೊಡೆದಿದ್ದು, ಪರಿಣಾಮ ಗಂಭೀರ ಗಾಯಗೊಂಡ ಆಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಲಬುರಗಿ: ಸಮಾಧಿಯಿಂದ ಶವ ಹೊರ ತೆಗೆದು ಚಿನ್ನಾಭರಣ ಕಳವು
ಪತ್ನಿ ಚಿನ್ನತಾಯಮ್ಮ ಸತ್ತಳೆಂದು ತಿಳಿದ ಬಳಿಕ ಅಲ್ಲಿಂದ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ, ನಾನು ಪತ್ನಿಯನ್ನು ಹತ್ಯೆ ಮಾಡಿದ್ದೇನೆ ಎಂದು ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಅಷ್ಟರಲ್ಲೇ ಚಿನ್ನತಾಯಮ್ಮ ಹತ್ಯೆಯಾಗಿರುವ ಸುದ್ದಿ ಗ್ರಾಮದಲ್ಲಿ ಹರಡಿ, ಇಡೀ ಗ್ರಾಮದ ಜನ ಮನೆಯ ಮುಂದೆ ಜಮಾಯಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಮಂಜನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.