ಕುಡಿಯುವ ನೀರಿಗಾಗಿ ಜನರ ಪರದಾಟ: ಪ್ರತಿನಿತ್ಯ ಕಿಲೋಮೀಟರ್ ಗಟ್ಟಲೆ ಅಲೆದಾಟ!
ಚಾಮರಾಜನಗರ, ಮೇ 24: ಕುಡಿಯುವ ನೀರಿನ ಸಮಸ್ಯೆ ಜಲಜೀವನ್ ಮಿಷನ್ ಕಾಮಗಾರಿ ವೇಳೆ ಗ್ರಾಮಕ್ಕೆ ಸರಬರಾಜಾಗುವ ನೀರಿನ ಪೈಪ್ ಲೈನ್ ಹಾಗೂ ವಿದ್ಯುತ್ ಕೇಬಲ್ ತುಂಡಾಗಿದ್ದು, ಚಾಮರಾಜನಗರದ ಆನೆ ಹೊಲ ಗ್ರಾಮದ ನಿವಾಸಿಗಳು ಜನರು ಹಳ್ಳದ ಕಲುಷಿತ ನೀರನ್ನು ಬಸಿದು ಮನೆಗಳಿಗೆ ತಂದು ಕುಡಿಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆನೆ ಹೋಲ ಗ್ರಾಮದಲ್ಲಿ 200 ಮನೆಗಳಿದ್ದು 400 ಹೆಚ್ಚು ಜನಸಂಖ್ಯೆ ಹೊಂದಿರುವ ಕುಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಲುಷಿತ ನೀರನ್ನು ಬಳಸುವಂತಹ ಪರಿಸ್ಥಿತಿ ಉದ್ಭವಿಸಿದೆ.

ಜಲಜೀವನ್ ಮಿಷನ್ ಯೋಜನೆಯಡಿ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಕೊಕ್ಕು ಬೋರೆ ತುಳಸಿಕೆರೆ ಪಾಲಾರ್ ಪಡಸಲನಾಥ ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇಕಡ 80% ರಷ್ಟು ಪೈಪ್ಲೈನ್ ಅಳವಡಿಕೆ ಪೂರ್ಣಗೊಂಡಿದೆ.
ಆದರೆ ಆನೆ ಹೊಲ ಗ್ರಾಮದಲ್ಲಿ ಪೈಪ್ಲೈನ್ ಅಳವಡಿಸಲು ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಯುವಾಗ ಅವೈಜ್ಞಾನಿಕವಾಗಿ ಗ್ರಾಮಕ್ಕೆ ಸರಬರಾಜ ಆಗುವ ನೀರಿನ ಪೈಪ್ಲೈನ್ ಮತ್ತು ವಿದ್ಯುತ್ ಕೇಬಲ್ ಕಳೆದ ಎಂಟು ದಿನಗಳ ಹಿಂದೆ ಪೈಪ್ ಲೈನ್ ಓಡೆದಿದೆ. ಅಧಿಕಾರಿಗಳು ಹಾಗೂ ಜಲಜೀವನ್ ಮಿಷನ್ ಯೋಜನೆ ಕೈಗೆತ್ತಿಕೊಂಡ ಗುತ್ತಿಗೆದಾರರು ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಪೈಪ್ ಲೈನ್ ದುರಸ್ತಿ ಪಡಿಸದೆ ಇರುವುದರಿಂದ ಆನೆ ಹೊಲ ಗ್ರಾಮದಲ್ಲಿ ಜನರು ನೀರಿಗಾಗಿ ಕಿಲೋ ಮೀಟರ್ಗಟ್ಟಲೆ ತೆರಳುವಂಥ ಪರಿಸ್ಥಿತಿ ಉಂಟಾಗಿದೆ.

ಹಳ್ಳದ ನೀರು ಬಸಿದು ಬಳಕೆ
ಸದ್ಯ ಹಳ್ಳದ ನೀರೇ ಆನೆ ಹೊಲ ಗ್ರಾಮದ ನಿವಾಸಿಗಳಿಗೆ ಜೀವಾಧಾರವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಕರಡಿ ಶೀಳು ಹಳ್ಳದಿಂದ ಮಹಿಳೆಯರು ಕಲುಷಿತ ನೀರು ತಂದು ಬಸಿದು ಬಳಕೆ ಮಾಡುತ್ತಿದ್ದಾರೆ. ನೀರಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಮಹಿಳೆಯರು ಹಳ್ಳದ ನೀರನ್ನು ತಂದು ಬಿಂದಿಗೆಗೆ ಬಟ್ಟೆ ಕಟ್ಟಿ ಸೋಸಿ ಕುಡಿಯಲು ತರುವಂತ ಶೋಚನೀಯ ಸ್ಥಿತಿ ಗ್ರಾಮದ ಜನರಿಗೆ ಉಂಟಾಗಿದೆ.
ಹಾಳಾದ ಪೈಪ್ ಲೈನ್: ಅಧಿಕಾರಿಗಳ ನಿರ್ಲಕ್ಷ್ಯ
ಕಳೆದ ಎಂಟು ದಿನಗಳ ಹಿಂದೆ ಜಲ ಜೀವನ್ ಮಿಷನ್ ಪೈಪ್ ಲೈನ್ ಕಾಮಗಾರಿ ವೇಳೆ ಜೆಸಿಬಿ ಯಂತ್ರದಲ್ಲಿ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಪೈಪ್ ಲೈನ್ ಮತ್ತು ಕೇಬಲ್ ತುಂಡಾಗಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮಸ್ಥರು ಕುಡಿಯಲು ಸಮೀಪ ಇರುವ ಹಳ್ಳದ ಕಲುಷಿತ ನೀರನ್ನು ಬಟ್ಟೆಯಲ್ಲಿ ಬಸಿದು ತರುವಂತ ಸಮಸ್ಯೆ ಉಂಟಾಗಿದೆ. ಇಷ್ಟಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲ. ಇನ್ನಾದರೂ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಹಿರಿಯ ಅಧಿಕಾರಿಗಳು ಆನೆ ಹೊಲ ಗ್ರಾಮದ ಕಡೆಗೆ ಗಮನಹರಿಸಬೇಕು ಎನ್ನುವುದು ಸ್ಥಳೀಯ ಮನವಿಯಾಗಿದೆ.

ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ವಿವಿಧ ಗ್ರಾಮಗಳಲ್ಲಿ ಕಾಮಗಾರಿ 80ರಷ್ಟು ಮುಗಿದಿದೆ. ಪೈಪ್ಲೈನ್ ಅಳವಡಿಸುವಾಗ ಈ ಹಿಂದೆ ಆನೆ ಹೊಲ ಗ್ರಾಮಕ್ಕೆ ನೀರು ಸರಬರಾಜಾಗುತ್ತಿದ್ದ ಪೈಪ್ ಲೈನ್ ಕೂಡ ಹಾಳಾಗಿದ್ದು, ಈ ಬಗ್ಗೆ ತುರ್ತಾಗಿ ಕ್ರಮವಹಿಸಲಾಗುವುದು ಎಂದು ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ಕಿರಣ್ ಕುಮಾರ್ ಭರವಸೆ ನೀಡಿದ್ದಾರೆ.












Click it and Unblock the Notifications