ಚಾಮರಾಜನಗರದಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಟ್ಟ ಬಗ್ಗೆ ಈಗ ಭಾರೀ ಚರ್ಚೆ
ಚಾಮರಾಜನಗರ, ಡಿಸೆಂಬರ್.14: ಸುಬ್ರಮಣ್ಯ ಷಷ್ಠಿಯಲ್ಲಿ ಹುತ್ತಕ್ಕೆ ಹಾಲು-ಹಣ್ಣು ತನಿ ಎರೆಯುವುದು ಎಲ್ಲೆಡೆ ಕಂಡು ಬರುತ್ತದೆ. ಆದರೆ ಚಾಮರಾಜನಗರ ಮುಡಿಗುಂಡ ಬಡಾವಣೆಯ ರಾಷ್ಟ್ರೀಯ ಹೆದ್ದಾರಿ ಬಳಿ ಅರಳಿಕಟ್ಟೆಯ ಕೆಳಗಿರುವ ಹುತ್ತಕ್ಕೆ ಕೆಲವರು ಕೋಳಿ ಬಲಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಚರ್ಚೆಗೂ ಗ್ರಾಸವಾಗಿದೆ.
ಗುರುವಾರದಂದು ರಾಜ್ಯದಾದ್ಯಂತ ಎಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇಗುಲವಿದೆಯೋ ಅಲ್ಲೆಲ್ಲ ವಿಶೇಷ ಪೂಜೆಗಳು ಬೆಳಿಗ್ಗೆಯಿಂದಲೇ ನಡೆದಿವೆ. ಅದರಂತೆಯೇ ಚಾಮರಾಜನಗರ ಪಟ್ಟಣದಲ್ಲಿರುವ ಹುತ್ತಗಳಿಗೆ ಜನ ಭಕ್ತಿಭಾವದಿಂದ ಪೂಜೆ ಮಾಡಿ ಹಾಲೆರೆದು, ಹೂವು ಅರ್ಪಿಸಿ ನಮಿಸಿದ್ದಾರೆ.
ಅಷ್ಟೇ ಅಲ್ಲದೆ ವಿವಿಧ ಬಡಾವಣೆಯ ಮಹಿಳೆಯರು ತಮ್ಮ ಪತಿಯರ ಜೊತೆ ಮಡಿಯುಟ್ಟು ವೃತಾಚರಣೆ ಕೈಗೊಂಡು ತಟ್ಟೆಯಲ್ಲಿ ಹಾಲು, ಹಣ್ಣು, ಪೂಜಾ ಸಾಮಗ್ರಿಯೊಂದಿಗೆ ತೆರಳಿ ಹುತ್ತಗಳಿಗೆ ಪೂಜೆ ಮಾಡಿ, ಹಾಲೆರೆದು ಫಲಾಮೃತ ನೀಡುವ ಮೂಲಕ ತಮ್ಮಲ್ಲಿರುವ ನಾಗರದೋಷವೆಲ್ಲವೂ ಪರಿಹಾರವಾಗಲಿ, ತಾವು ಕೈಗೊಂಡ ಕಾರ್ಯಸಿದ್ಧಿಯಾಗುವ ಮೂಲಕ ಕುಟುಂಬಕ್ಕೆ ಒಳ್ಳೆಯ ಆರೋಗ್ಯ, ಭಾಗ್ಯ ನೀಡಲೆಂದು ಪ್ರಾರ್ಥಿಸುತ್ತಿದ್ದದ್ದು ಕಂಡು ಬಂದಿತು.

ಈ ನಡುವೆ ಪಟ್ಟಣದ ಮುಡಿಗುಂಡ ಬಡಾವಣೆಯ ರಾಷ್ಟ್ರೀಯ ಹೆದ್ದಾರಿ ಬಳಿ ಅರಳಿಕಟ್ಟೆಯ ಕೆಳಗಿರುವ ಹುತ್ತದಲ್ಲಿ ಮುಡಿಗುಂಡ ಬಡಾವಣೆ, ಬಾಪುನಗರ ಬಡಾವಣೆಯ ಭಕ್ತರು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೆಲವರು ಹಾಲು-ತುಪ್ಪ ಹಣ್ಣನ್ನು ಹುತ್ತಕ್ಕೆ ಎರೆದು ಪೂಜೆ ಸಲ್ಲಿಸಿದರೆ ಮತ್ತೆ ಕೆಲವರು ವರ್ಷದಿಂದಲೂ ಹರಕೆ ಹೊತ್ತು ಸಾಕಿದ ಕೋಳಿಗಳನ್ನು ತಂದು ಹುತ್ತಕ್ಕೆ ಬಲಿಕೊಟ್ಟು ರಕ್ತದಿಂದ ತನಿ ಎರೆದಿದ್ದು ಕಂಡು ಬಂದಿತು.
ಹುತ್ತಕ್ಕೆ ಕೋಳಿ ಬಲಿಕೊಡುವುದು ಹಿಂದಿನಿಂದಲೂ ನಡೆದು ಬಂದಿದ್ದು, ಇದು ಇವತ್ತಿನ ಆಚರಣೆಯಲ್ಲ ಎಂದು ತಿಳಿಸಿರುವ ಸ್ಥಳೀಯರು ಈ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಅದನ್ನು ಮುಂದುವರೆಸುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಬಲಿ ನೀಡುವುದನ್ನು ನಿಷೇಧಿಸಿದ್ದರೂ ಇಲ್ಲಿ ಬಲಿ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.











Click it and Unblock the Notifications