ಕೊಳ್ಳೇಗಾಲ ಎಂಎಲ್ಎ ಸ್ಥಾನಕ್ಕೆ ಚಾಮರಾಜನಗರ ಸಿಪಿಐ ಸ್ಪರ್ಧೆ!?
ಚಾಮರಾಜನಗರ, ಮೇ 2022: ಚುನಾವಣಾ ವರ್ಷ ಆರಂಭವಾಗುತ್ತಿದ್ದಂತೆ ರಾಜಕೀಯ ಚರ್ಚೆ, ಪಕ್ಷಾಂತರದ ಮಾತುಕತೆ ತಾರಕಕ್ಕೇರುತ್ತಿದೆ. ಕೊಳ್ಳೆಗಾಲ ತಾಲೂಕಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಎಂಎಲ್ಏ ಆಗಲು ಈಗಾಗಲೇ ವಿಧಾನಸೌಧಕ್ಕೆ ಏಣಿ ಹಾಕಿದ್ದಾರೆಂಬ ಮಾತುಗಳು ಆರಂಭವಾಗಿದೆ.
ಚಾಮರಾಜನಗರ ಗ್ರಾಮಾಂತರ ಠಾಣೆ ಸಿಪಿಐ ಆಗಿರುವ ಬಿ.ಪುಟ್ಟಸ್ವಾಮಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಾಕಷ್ಟು ತಯಾರಿ ನಡೆಸುತ್ತಿದ್ದು ಈ ಬಾರಿಯ ಚುನಾವಣೆ ಅಖಾಡಕ್ಕೆ ಧುಮುಕುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.
ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಇಲ್ಲವೇ ಜಾ.ದಳ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಲಿಯಲು ಪುಟ್ಟಸ್ವಾಮಿ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ಒಂದು ಹೆಜ್ಜೆ ಆಚೆಯಿಟ್ಟಿ, ಇನ್ನು ಎರಡು ತಿಂಗಳಿನಲ್ಲಿ ರಾಜಕೀಯ ರಣರಂಗಕ್ಕೆ ಇಳಿಯಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ ಎಂದು ಕೆಲ ಮೂಲಗಳು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿವೆ.

ಕೊಳ್ಳೇಗಾಲ ವಿಧಾನಸಭಾಕ್ಷೇತ್ರದ ವಿವಿಧ ಸಮುದಾಯ ಮುಖಂಡರನ್ನು ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ ಆಪ್ತರು ಸಂಪರ್ಕಿಸುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ವಿವಿಧ ಸೇವಾ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ. ಪುಟ್ಟಸ್ವಾಮಿಗೆ 30 ಸಾವಿರಕ್ಕೂ ಅಧಿಕ ಮತಗಳನ್ನು ಈಗಾಗಲೇ ಪಕ್ಕವಾಗಿವೆ ಎನ್ನಲಾಗಿದ್ದು, ಅಖಾಡಕ್ಕೆ ಧುಮುಕಿದರೇ ಪಕ್ಕಾ ಆಗಿರುವ ಮತಗಳು ದ್ವಿಗುಣಗೊಳ್ಳಲಿದೆ ಎಂಬುದು ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ ಬೆಂಬಲಿಗರ ವಿಶ್ವಾಸವಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತುಂಬಿ ತುಳುಕುತ್ತಿದ್ದಾರೆ. ಈಗ ಆ ಪಟ್ಟಿಗೆ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ ಸೇರ್ಪಡೆಯಾಗಿದ್ದಾರೆ. ಕೊನೆಯ ಪಕ್ಷ ಪುಟ್ಟಸ್ವಾಮಿ ಅವರು ಸ್ಪರ್ಧಿಸಿ ಗೆಲ್ಲದಿದ್ದರೂ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಓಟು ಕಿತ್ತು ಅವರನ್ನು ಮಕಾಡೆ ಮಲಗಿಸುವುದು ನಿಶ್ಚಿತ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಇನ್ನು, ಈ ಬಗ್ಗೆ ಸಿಪಿಐ ಪುಟ್ಟಸ್ವಾಮಿ ಅವರನ್ನು ಸಂಪರ್ಕಿತರಾದರೂ ದೂರವಾಣಿ ಕರೆಗೆ ಸಿಗಲಿಲ್ಲ. ಆದರೆ, ಅವರ ಕೆಲ ಬೆಂಬಲಿಗರು ಮಾತನಾಡಿ ಜುಲೈ ಒಳಗೆ ರಾಜೀನಾಮೆ ಕೊಟ್ಟು ಜನಸೇವೆಗೆ ಬಂದೇ ಬರುತ್ತಾರೆಂಬ ವಿಶ್ವಾಸ ಹೊರಹಾಕಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಅನುಮಾನ: ಪುಟ್ಟಸ್ವಾಮಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗಾಗಲೆ ಬಹುಜನ ಸಮಾಜವಾದಿ ಪಕ್ಷದಿಂದ ಹೊರಬಂದು ಬಿಜೆಪಿ ಸೇರಿರುವ ಎನ್. ಮಹೇಶ್ ಕೊಳ್ಳೇಗಾಲದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಪಕ್ಷೇತರ ಅಥವಾ ಜೆಡಿಎಸ್ ನಿಂದ ಸ್ಪರ್ಧಿಸಬೇಕಾಗಿದೆ.












Click it and Unblock the Notifications