77 ಮಲೆ ಒಡೆಯನ ಕಾಣಲು ಕಾಡಲ್ಲಿ 7.5 ಕಿಮೀ ಮೆಟ್ಟಿಲು ನಿರ್ಮಾಣ; ಡಿಸೆಂಬರ್ಗೆ ಪೂರ್ಣ
ಚಾಮರಾಜನಗರ, ಆಗಸ್ಟ್ 20: 77 ಮಲೆ ಒಡೆಯನ ದರ್ಶನಕ್ಕೆ ಭಕ್ತರು ಹಿಂಡಿಂಡು ನಡೆದು ಹೋಗುತ್ತಾರೆ. ಹರಕೆ ಹೊತ್ತು ನಡೆದು ಹೋಗುವ ಭಕ್ತರೇ ಹೆಚ್ಚು. ಅದರಲ್ಲೂ ದಟ್ಟ ಕಾನನದ ನಡುವೆ ಕಲ್ಲು,ಮುಳ್ಳಿನ ನೋವಿನ ನಡುವೆಯೂ ದರ್ಶನಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದನ್ನೆಲ್ಲಾ ಅರಿತ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಸಿಹಿ ಸುದ್ದಿ ಕೊಡುವ ಕೆಲಸಕ್ಕೆ ಮುಂದಾಗಿದೆ.
ರಾಜ್ಯದ ದೇವಾಲಗಳಲ್ಲಿ ಹೆಚ್ಚು ಆದಾಯ ಬರುವ ಎರಡನೇ ದೇವಾಲಯವಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಅದರಲ್ಲೂ ದೀಪಾವಳಿ, ಶಿವರಾತ್ರಿ ಹಬ್ಬದ ವೇಳೆಯಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ.
ಹಳ್ಳ ದಾಟಲು ಹಗ್ಗವನ್ನೇ ಆಸರೆ ಮಾಡಿಕೊಂಡ ಪುಟ್ಟೇಗೌಡನದೊಡ್ಡಿ ಜನರು
ಈ ಸಮಯದಲ್ಲಿ ಭಕ್ತರು ಹರಕೆ ಮಾಡಿಕೊಂಡು ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ದಟ್ಟ ಕಾಡಿನ ನಡುವೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಕಾಡಿನ ನಡುವೆ ಕೆಲವು ಕಡೆ ದುರ್ಗಮ ಹಾದಿಗಳಿವೆ. ಈ ಹಾದಿಯಲ್ಲಿ ಭಕ್ತರು ನಡೆಯಲು ಸಾಕಷ್ಟು ಪ್ರಯಾಸ ಪಡುತ್ತಿರುತ್ತಾರೆ. ಇದನ್ನೆಲ್ಲಾ ಗಮನಿಸಿದ ಮಲೆ ಮಹದೇಶ್ವರ ಪ್ರಾಧಿಕಾರದವರು ಕಾಡಿನ ನಡುವೆ ದುರ್ಗಮ ಹಾದಿ ಇರುವ ಕಡೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
25 ಕೋಟಿ ರೂಪಾಯಿ ವೆಚ್ಚದಲ್ಲಿ 7.5 ಕಿಮೀ ಮೆಟ್ಟಿಲು
ಮಲೆ ಮಹದೇಶ್ವರ ಪ್ರಾಧಿಕಾರ ಈಗಾಗಲೇ ಮೆಟ್ಟಿಲು ನಿರ್ಮಾಣ ಮಾಡುವ ಕಾರ್ಯ ಮಾಡುತ್ತಿದೆ. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ತಾಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ 7.5 ಕಿ.ಮೀ ಮೆಟ್ಟಿಲು ನಿರ್ಮಾಣವಾಗುತ್ತಿದೆ. ಇದರಿಂದ ಕಾಡಿನ ಮಧ್ಯೆ ಬರಿಗಾಲಲ್ಲಿ ಹೋಗಬೇಕಿದ್ದ ಭಕ್ತರಿಗೆ ಇದ್ದಂತಹ ದೊಡ್ಡ ಸಮಸ್ಯೆ ನೀಗಲಿದೆ.
ಸೇವಾ ಕೌಂಟರ್ ಗೂ ಕೂಡ ಆಧುನಿಕ ಸ್ಪರ್ಶ
ಈಗಾಗಲೇ 4 ಕಿಮೀ ನಷ್ಟು ಮೆಟ್ಟಿಲು ಮಾಡೋ ಕೆಲಸ ನಡೆದಿದ್ದು ಡಿಸೆಂಬರ್ ವೇಳೆಗೆ ಮೆಟ್ಟಿಲು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಇದರೊಟ್ಟಿಗೆ ಮಲೆಮಹದೇಶ್ವರ ಬೆಟ್ಟದಲ್ಲಿನ ಸೇವಾ ಕೌಂಟರ್ಗೂ ಕೂಡ ಆಧುನಿಕ ಸ್ಪರ್ಶ ನೀಡುತ್ತಿದ್ದು ಶೀಘ್ರವೇ ಹೊಸ ಸೇವಾ ಕೌಂಟರ್ ಲೋಕಾರ್ಪಣೆಗೊಳ್ಳಲಿದೆ, ಕಾಮಗಾರಿ ಭರದಿಂದ ಸಾಗಿದೆ ಎಂದು ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ತಿಳಿಸಿದರು.
ಮೆಟ್ಟಿಲುಗಳ ನಿರ್ಮಾಣದಿಂದ ಭಕ್ತರ ಸಮಸ್ಯೆಗೆ ಮುಕ್ತಿ
ಇನ್ನು ಕಾಡಿನಲ್ಲಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಭಕ್ತರಿಗೂ ಸಂತಸ ತಂದಿದೆ. ಇಷ್ಟು ವರ್ಷ ಕಾಡಿನ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನು ಲೆಕ್ಕಿಸದೇ ನಡೆಯುತ್ತಿದ್ದರು. ಆ ವೇಳೆ ಕಲ್ಲು ಬಡಿದು ಕಾಲಿಗೆ ಗಾಯವಾಗಿರುವ ಉದಾಹರಣೆ ಸಹ ಇವೆ. ಜೊತೆಗೆ ಸರಿಯಾದ ರಸ್ತೆ ಇಲ್ಲದ್ದರಿಂದ ಕಾಡಿನ ಮಧ್ಯೆ ಕಾಡು ಮೃಗಗಳ ಭಯ ಕೂಡ ಭಕ್ತರಲ್ಲಿ ಮನೆ ಮಾಡಿತ್ತಯ. ಸದ್ಯ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಸಿಗಲಿದ್ದು, ಆರಾಮವಾಗಿ ಕಾಡಿನ ಮಧ್ಯೆ ನಡೆದು ಹೋಗಬಹುದಾಗಿದೆ.
ತಿರುಪತಿ ಮಾದರಿಯಲ್ಲಿ ಮೆಟ್ಟಿಲಿಗೆ ಭರವಸೆ ನೀಡಿದ್ದ ಎಚ್ಡಿಕೆ
2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಭಕ್ತರ ಅನುಕೂಲಕ್ಕಾಗಿ ಪ್ರಸಿದ್ಧ ತಿರುಪತಿ ತಿರುಮಲ ಮಾದರಿಯಲ್ಲಿ ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು. ಮಾದಪ್ಪನ ದರ್ಶನಕ್ಕೆ 16 ಕಿಮೀ ಕಾಲಿ ನಡಿಗೆಯಲ್ಲಿ ಬೆಟ್ಟ ಹತ್ತೆಬೇಕಿರುವುದರಿಂದ ಸಾಕಷ್ಟು ತೊಂದರೆಗಳಾಗುತ್ತಿದ್ದವು. ಹಾಗಾಗಿ ತಿರುಪತಿಯ ಮಾದರಿಯಲ್ಲಿ ಮೆಟ್ಟಿಲುಗಳ ಜೊತೆಗೆ ಅಲ್ಲಲ್ಲಿ ಶೌಚಾಲಯ ಮತ್ತು ತಂಗುತಾಣ ನಿರ್ಮಿಸಲು ಬಗ್ಗೆ ಆಸಕ್ತಿ ತೋರಿದ್ದರು. ಆದರೆ ನಾಲ್ಕು ವರ್ಷಗಳ ನಂತರ ಮೆಟ್ಟಿಲ ಕಾರ್ಯ ನೆರವೇರುತ್ತಿದೆ.
ಒಟ್ಟಿನಲ್ಲಿ ಭಕ್ತರ ಅನುಕೂಲಕ್ಕಾಗಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಮಾದಪ್ಪನ ಭಕ್ತರಿಗೆ ಖುಷಿ ನೀಡಿದೆ. ಇಷ್ಟು ದಿನ ಕಾಡಿನ ದುರ್ಗಮ ಹಾದಿಯಲ್ಲಿ ನಡೆದು ಮಾದಪ್ಪನ ದರ್ಶನ ಪಡೆಯುತ್ತಿದ್ದ ಭಕ್ತರು ಇನ್ಮುಂದೆ ಕಾಡಿನ ನಡುವೆ ಸುಗಮ ಹಾದಿಯಲ್ಲಿ ಸಾಗಬಹುದಾಗಿದೆ.
Recommended Video