ಭಾರತವನ್ನು ಅಭಿವೃದ್ಧಿಗೊಳಿಸುತ್ತಿರುವ ಪ್ರಧಾನಿ ಮೋದಿ ವಿಷ ಸರ್ಪವೇ..?-ಅಮಿತ್ ಶಾ
ಚಾಮರಾಜನಗರ, ಮೇ 2: ಕಾಂಗ್ರೆಸ್ನವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದಷ್ಟು ಕಮಲ ಹೆಚ್ಚು ಅರಳಲಿದೆ ಎಂದು ಬಿಜೆಪಿ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದರು.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಬಹಿರಂಗ ಸಮಾವೇಶ ನಡೆಸಿ ಮಾತನಾಡಿ ಅಮಿತ್ ಶಾ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ಮನೆ ಕೊಟ್ಟ, ಅಕ್ಕಿ ನೀಡಿದ, ಶೌಚಾಲಯ ಕೊಟ್ಟ, ಭಾರತವನ್ನು ಅಭಿವೃದ್ಧಿಗೊಳಿಸುತ್ತಿರುವ ಪ್ರಧಾನಿ ಮೋದಿ ವಿಷ ಸರ್ಪವೇ..? ನೀವು ಮೋದಿ ಅವರನ್ನು ಬೈದಷ್ಟು ಕಮಲದ ಸ್ಥಾನ ಹೆಚ್ಚಾಗಲಿದೆ ಎಂದು ಕಾಂಗ್ರೆಸ್ವಿರುದ್ಧ ಕಿಡಿಕಾರಿದರು.

ಯಾವುದೇ ವಿಶ್ವಾಸ ಇಲ್ಲದ ಗ್ಯಾರಂಟಿಗಳನ್ನು ಕಾಂಗ್ರೆಸ್ ಕೊಡುತ್ತಿದೆ, ಕಾಂಗ್ರೆಸ್ ಕೊಡುತ್ತಿರುವ ಗ್ಯಾರಂಟಿ ಭ್ರಷ್ಟಾಚಾರದ ಗ್ಯಾರಂಟಿ. ಒಂದು ಸಮುದಾಯವನ್ನು ತುಷ್ಠೀಕರಣ ಮಾಡುವ ಗ್ಯಾರಂಟಿ. ಸಮಾಜದಲ್ಲಿ ಗಲಾಟೆ ಮಾಡುವ ಗ್ಯಾರಂಟಿ ಎಂದು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಅಮಿತ್ ಶಾ ಲೇವಡಿ ಮಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ, ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ ಅದು ಅಭಿವೃದ್ಧಿಗೆ ರಿವರ್ಸ್ ಗೇರ್ ಇದ್ದಂತೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸುರಕ್ಷಿತ. ಕರ್ನಾಟಕ ನಂ1 ರಾಜ್ಯ ಕರ್ನಾಟಕ ಆಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಕುಳಿತವರ ಎಟಿಎಂ ಆಗಲಿದೆ ಅಷ್ಟೇ ಎಂದು ಟೀಕೆ ಮಾಡಿದರು.
ಬಿಜೆಪಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದೆ. ಪ. ಜಾತಿ, ಪ.ಪಂಗಡದ ಮೀಸಲಾತಿ ಹೆಚ್ಚಿಸಿದೆ. ಆದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಕೊಡುತ್ತೇವೆ ಎಂದು ಹಾಗಾದರೆ ಲಿಂಗಾಯತ, ಒಕ್ಕಲಿಗರ ಮೀಸಲಾತಿ ಕಡಿಮೆ ಆಗಲಿದೆಯೇ ಕಾಂಗ್ರೆಸ್ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದರು.

2024 ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕಾದರೆ ಹನೂರಲ್ಲಿ ಪ್ರೀತನ್ ಎಂಎಲ್ಎ ಆಗಬೇಕು. ಬಹುಮತದಲ್ಲಿ ಪ್ರೀತನ್ ಗೆಲ್ಲಿಸಿ ಎಂದು ಹನೂರಿನ ಮತದಾರರಲ್ಲಿ ಮನವಿ ಮಾಡಿದರು.
ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಸೇವೆ
ಚಾಮರಾಜನಗರ: ಉಚಿತ ಹಾಲು, ಉಚಿತ ಸಿರಿಧಾನ್ಯ, ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಸೇವೆಯನ್ನು ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಜಾರಿ ಮಾಡುತ್ತೇವೆಂದು ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಹನೂರಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಬಹಿರಂಗ ಸಮಾವೇಶದಲ್ಲಿ ಮಾತನಾಡ ಅವರು, ನಾವು ಕೊಟ್ಟಂತಹ ಪ್ರಣಾಳಿಕೆಯಲ್ಲಿ ಹಲವನ್ನು 24 ಗಂಟೆಯಲ್ಲೇ ಜಾರಿ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು ನಿಮ್ಮ ಸಹಕಾರ, ಬೆಂಬಲ ಇರಬೇಕು ಎಂದು ಮನವಿ ಮಾಡಿದರು. ಅಮಿತ್ ಶಾ ಬಂದಿರುವುದು ನಮಗೆ ಆನೆ ಬಲ ಬಂದಂತಿದ್ದು, ಈ ಬಾರಿ ರಾಜ್ಯದಲ್ಲಿ 125 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ, ಹನೂರಿನಲ್ಲಿ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications