ಚಾಮರಾಜನಗರ: ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ವಾಟ್ರಸ್ ಕೊಡಲ್ಲ..!
ಚಾಮರಾಜನಗರ, ಏಪ್ರಿಲ್ 9: ಆರನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಮತ್ತು ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ನೀಡಿದ ಸಿಬ್ಬಂದಿಗಳಿಗೆ ಹಿರಿಯ ಅಧಿಕಾರಿಗಳು ವಸತಿಗೃಹ ಖಾಲಿ ಮಾಡಿಸಲು ನೋಟಿಸ್ ನೀಡುವ ಮೂಲಕ ಬೆದರಿಕೆ ಹಾಕಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಬಸ್ ಡಿಪೋ ಬಳಿ ಕೆಎಸ್ಆರ್ಟಿಸಿ ಸಿಬ್ಬಂದಿ ನೌಕರರಿಗೆ ವಸತಿ ಗೃಹವಿದ್ದು, ಅಲ್ಲಿ ಕೆಲವರಿಗೆ ವಸತಿ ಗೃಹವನ್ನು ಹಂಚಿಕೆ ಮಾಡಲಾಗಿದೆ. ಏ.7ರಿಂದ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರು ಅನಿರ್ದಿಷ್ಟ ಕಾಲ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ವಸತಿ ಗೃಹದಲ್ಲಿ ವಾಸವಾಗಿರುವ ಕುಟುಂಬಗಳನ್ನು ಖಾಲಿ ಮಾಡಲಿಸಲು ನೋಟಿಸ್ ಜಾರಿ ಮಾಡಿದ್ದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿದೆ.
ಚಾಮರಾಜನಗರ ಜಿಲ್ಲೆಯಾದ್ಯಂತ ಕೆಎಸ್ಆರ್ಟಿಸಿ ಬಸ್ಸುಗಳು ಸಂಚಾರ ಮಾಡದೇ ಇರುವ ಹಿನ್ನಲೆಯಲ್ಲಿ ಮುಷ್ಕರವನ್ನು ಬದಿಗೊತ್ತಿ ಕರ್ತವ್ಯಕ್ಕೆ ಹಾಜರಾಗಬೇಕು, ಇಲ್ಲದಿದ್ದರೆ ವಸತಿ ಗೃಹ ಹಂಚಿಕೆಯ ಆದೇಶವನ್ನು ರದ್ದುಪಡಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ನೋಟಿಸ್ ಜಾರಿ ಮಾಡಿ ಬೀಗ ಹಾಕಿದ ವಸತಿ ಗೃಹಗಳ ಬಾಗಿಲಲ್ಲಿ ನೋಟಿಸ್ ಅಂಟಿಸಿದ್ದಾರೆ. ಇದರಿಂದ ಕೆಲವು ನೌಕರರು ಭಯಭೀತರಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಆರನೇ ವೇತನ ಆಯೋಗ ವರದಿಯನ್ನು ಜಾರಿ ಮಾಡಲು ಸದ್ಯಕ್ಕೆ ಒಪ್ಪಿದಂತೆ ಕಾಣುತ್ತಿಲ್ಲ. ಇದರಿಂದ ಮುಷ್ಕರ ಮುಂದುವರೆದಿದ್ದು, ಪ್ರಯಾಣಿಕರ ಪರದಾಟವೂ ಮುಂದುವರೆದಿದೆ. ಒಂದೆಡೆ ಮೇಲಾಧಿಕಾರಿಗಳ ಒತ್ತಡ ಮತ್ತು ಬೆದರಿಕೆ ಮತ್ತೊಂದೆಡೆ ಪ್ರಯಾಣಿಕರ ಹಿಡಿಶಾಪದ ನಡುವೆ ಸಾರಿಗೆ ನೌಕರರು ಹೈರಾಣರಾಗಿದ್ದಂತು ಸತ್ಯ.












Click it and Unblock the Notifications