ಚಾಮರಾಜನಗರ ಜಿಲ್ಲೆಗೆ ತಟ್ಟದ ಬಸ್ ಮುಷ್ಕರದ ಬಿಸಿ
ಚಾಮರಾಜನಗರ, ಜುಲೈ 25 : ಜಿಲ್ಲೆಯಲ್ಲಿ ಖಾಸಗಿ ಬಸ್ಗಳು ಸಾಕಷ್ಟಿರುವುದರಿಂದ ಹಾಗೂ ಶಾಲಾ ವಾಹನಗಳಿರುವುದರಿಂದ ಕೆಎಸ್ಆರ್ಟಿಸಿ ಬಸ್ ಮುಷ್ಕರದ ಬಿಸಿ ಶಾಲೆಗಳಿಗೆ ಮತ್ತು ಸಾರ್ವಜನಿಕರಿಗೆ ಅಷ್ಟೊಂದು ತಟ್ಟಿಲ್ಲ. ಹೀಗಾಗಿ ಶಾಲೆಗಳಿಗೆ ರಜಾ ಘೋಷಿಸಿಲ್ಲ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
"ಆಯಾ ಜಿಲ್ಲೆಗಳ ಪರಿಸ್ಥಿತಿ ನೋಡಿಕೊಂಡು ರಜೆಯ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸರ್ಕಾರದಿಂದ ನಿರ್ದೇಶನ ಬಂದಿತ್ತು. ಹಾಗಾಗಿ ಜಿಲ್ಲೆಯಲ್ಲಿ ಖಾಸಗಿ ಬಸ್ಗಳ ಸಂಚಾರವಿದೆ. ಗ್ರಾಮೀಣ ಪ್ರದೇಶದಲ್ಲೇ ಸಾಕಷ್ಟು ಶಾಲೆಗಳಿವೆ. ಪಟ್ಟಣಗಳಲ್ಲಿ ಶಾಲಾ ವಾಹನಗಳಲ್ಲೇ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಾರೆ. ಅಲ್ಲದೇ ಹೆಚ್ಚುವರಿಯಾಗಿ ಖಾಸಗಿ ಬಸ್ಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡುವ ಅವಶ್ಯಕತೆ ಇಲ್ಲ. ಎಂದಿನಂತೆ ಶಾಲೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿಯವರು 'ಒನ್ಇಂಡಿಯಾ ಕನ್ನಡ'ಕ್ಕೆ ಸೋಮವಾರ ತಿಳಿಸಿದರು.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]
ಖಾಸಗಿ ಬಸ್ಗಳ ಹೆಚ್ಚುವರಿ ಓಡಾಟಕ್ಕೆ ಅನುಮತಿ : ಖಾಸಗಿ ಬಸ್ಗಳವರು ಕೆಎಸ್ಆರ್ಟಿಸಿ ಬಸ್ ಮುಷ್ಕರದ ಅವಧಿಯಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ಓಡಿಸಲು ಸಹ ಅನುಮತಿ ನೀಡಲಾಗಿದೆ ಅವರು ತಿಳಿಸಿದರು.

35 ಖಾಸಗಿ ಬಸ್ಗಳ ವ್ಯವಸ್ಥೆ
ಜಿಲ್ಲೆಯಲ್ಲಿ ನಾಗರಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತವು ಬದಲಿಯಾಗಿ 35 ಖಾಸಗಿ ಬಸ್ಗಳ ಸೇವೆಯನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಿದೆ. ನಗರದಿಂದ ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರು ತಾಲೂಕುಗಳಿಗೆ ಹೋಗಿಬರಲು ಖಾಸಗಿ ಬಸ್ಗಳನ್ನು ಸಾರ್ವಜನಿಕರ ಸೇವೆಗೆ ನಿಯೋಜಿಸಲಾಗಿದೆ.

ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಕೆಎಸ್ಆರ್ಟಿಸಿ ಬಸ್
ಎಂದಿನಂತೆ ಈಗಾಗಲೇ ಸಂಚರಿಸುತ್ತಿರುವ ಖಾಸಗಿ ಬಸ್ಗಳು ಸಹ ತಮ್ಮ ಸೇವೆಯನ್ನು ಮುಂದುವರೆಸಲಿದೆ. ಡೀಪೋದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಕೆಎಸ್ಆರ್ಟಿಸಿ ಬಸ್ಗಳ ಸೇವೆ ವ್ಯತ್ಯಯದಿಂದ ಜಿಲ್ಲೆಯ ಜನತೆಗೆ ಅನಾನುಕೂಲವಾಗದಂತೆ ಜಿಲ್ಲಾಡಳಿತ ಬದಲಿಯಾಗಿ ಖಾಸಗಿ ಬಸ್ಗಳಿಗೆ ಹೆಚ್ಚುವರಿ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡಿದೆ.

ಕೊಳ್ಳೇಗಾಲದಿಂದ ಬೆಂಗಳೂರಿಗೆ ಪಯಣ
ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳಲು ಎಂದಿನಂತೆ ಖಾಸಗಿ ಬಸ್ಗಳು ಸಹ ಇದೆ. ಹೀಗಾಗಿ ನಗರದಿಂದ ಹೆಚ್ಚುವರಿಯಾಗಿ ನಿಯೋಜಿಸಿರುವ ಖಾಸಗಿ ಬಸ್ಗಳಲ್ಲಿ ಕೊಳ್ಳೇಗಾಲಕ್ಕೆ ತಲುಪಿ, ಬೆಂಗಳೂರಿಗೆ ಪ್ರಯಾಣಿಸಬಹುದಾಗಿದೆ.

ರೈಲು ಸೇವೆಯನ್ನು ಪಡೆಯುತ್ತಿರುವ ಪ್ರಯಾಣಿಕರು
ಮೈಸೂರು ನಗರಕ್ಕೆ ರೈಲು ಸೇವೆಯು ಲಭ್ಯವಿರುವುದರಿಂದ ಮೈಸೂರು ಹಾಗೂ ಬೆಂಗಳೂರಿಗೆ ಪ್ರಯಾಣಿಸುವ ಜಿಲ್ಲೆಯ ನಾಗರಿಕರು ರೈಲು ಸೇವೆಯನ್ನು ಬಳಸಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.












Click it and Unblock the Notifications