ಚಾಲಕನ ಸಮಯಪ್ರಜ್ಞೆಯಿಂದ ಗೋಪಾಲಸ್ವಾಮಿ ಬೆಟ್ಟದಲ್ಲಿ ತಪ್ಪಿದ ಭಾರೀ ಅನಾಹುತ
ಗುಂಡ್ಲುಪೇಟೆ, ಮೇ 21 : ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಪ್ರವಾಸಿಗರನ್ನು ಕರೆತರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಬ್ರೇಕ್ ವಿಫಲಗೊಂಡು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದು ನಿಂತಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿದ್ದ ಪ್ರವಾಸಿಗರನ್ನು ಕರೆದುಕೊಂಡು ಗುಂಡ್ಲುಪೇಟೆಯತ್ತ ಸಾರಿಗೆ ಬಸ್ ಬರುತ್ತಿತ್ತು. ಇಳಿಜಾರು ರಸ್ತೆಯಿದ್ದರೂ ಸಮತಟ್ಟಾದ ಪ್ರದೇಶದಲ್ಲಿ ಬಸ್ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಸಮತಟ್ಟು ರಸ್ತೆಯಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಬಸ್ಸಿಗೆ ದಾರಿ ಬಿಡಲು ಬದಿಗೆ ಸರಿದ ಸಂದರ್ಭ ಬಸ್ನ ಬ್ರೇಕ್ ವಿಫಲವಾಗಿದೆ. ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ಎಡಭಾಗಕ್ಕೆ ಚಲಿಸುವಂತೆ ಮಾಡಿ ಸೇತುವೆಯ ತಡೆಗೋಡೆಗೆ ಹಾಗೂ ಗುಡ್ಡದ ಬದಿಯಲ್ಲಿ ಚಲಿಸಿ ವಾಹನ ನಿಲ್ಲುವಂತೆ ಮಾಡಿದ್ದಾರೆ.

ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸದೆ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಸಾರಿಗೆ ಘಟಕದ ವ್ಯವಸ್ಥಾಪಕ ಜಯಕುಮಾರ್ ತಿಳಿಸಿದ್ದಾರೆ.
ಆದರೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆ ಕಿರಿದಾಗಿದ್ದು ಕೆಟ್ಟುಹೋಗಿದೆ. ಈ ರಸ್ತೆಯನ್ನು ಮಳೆಗಾಲ ಆರಂಭವಾಗುವ ಮೊದಲೇ ದುರಸ್ತಿ ಮಾಡದೆ ಹೋದರೆ ಇನ್ನಷ್ಟು ಅನಾಹುತಗಳಿಗೆ ಕಾರಣವಾದೀತು ಎಂದು ನಾಗರಿಕರು ಎಚ್ಚರಿದ್ದಾರೆ.












Click it and Unblock the Notifications