ಚಾಮರಾಜನಗರ: ಕರಸೇವಕರ ಬಂಧನ ಖಂಡಿಸಿ ಅರೆಬೆತ್ತಲೆ ಮೆರವಣಿಗೆ
ಚಾಮರಾಜನಗರ, ಜನವರಿ, 04: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ ಖಂಡಿಸಿ ಚಾಮರಾಜನಗರದಲ್ಲಿಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಬಿಜೆಪಿ ಉಪಾಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಚಾಮರಾಜೇಶ್ವರ ದೇಗುಲದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದುಹೋಗುವ ಭುವನೇಶ್ವರಿ ವೃತ್ತದ ತನಕ ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಅಷ್ಟೇ ಅಲ್ಲದೆ ನಗರದ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ ತಡೆದ ಪ್ರತಿಭಟನಾಕಾರರು ಟೈರ್ ಸುಡಲು ಮುಂದಾದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರತಿಭಟನಾರರ ಕೈಯಿಂದ ಟೈರ್ ಕಿತ್ತುಕೊಳ್ಳಲು ಪೊಲೀಸರು ಹರಸಹಸಪಟ್ಟರು.
ಹರಿಪ್ರಸಾದ್ ಅವರನ್ನು ಕೂಡಲೇ ಬಂಧಿಸಬೇಕು
ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಮುಂದಿನ ದಿನಗಳಲ್ಲಿ ಅಯೋಧ್ಯಾ ರಾಮಮಂದಿರ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರ ಆಗಲಿದೆ ಎಂದು ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ಮಹಾನ್ ಕಾರ್ಯಕ್ರಮಕ್ಕೂ ಮುನ್ನ ಇಬ್ಬರು ತಲೆ ಕೆಟ್ಟವರು ಕಡ್ಡಿ ಅಲ್ಲಾಡಿಸಿದ್ದಾರೆ. ಗೋದ್ರಾ ರೀತಿ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ. ನನಗನಿಸುತ್ತಿದೆ, ಇವರೇ ನಡೆಸುವ ಹುನ್ನಾರ ಇದ್ಯಾ? ಭಾರತದ 140 ಕೋಟಿ ಜನರಿಗೆ ಗೊತ್ತಿಲ್ಲದಿರುವುದು, ಸೆಂಟ್ರಲ್ ಇಂಟೆಲೆಜೆನ್ಸಿಗೆ ಗೊತ್ತಿಲ್ಲದಿರುವುದು ಬಿ.ಕೆ.ಹರಿಪ್ರಸಾದ್ಗೆ ಕಾಣಿಸಿದೆ ಎಂದರೆ ಇವರೇ ಎನೋ ಪ್ಲಾನ್ ಮಾಡುತ್ತಿದ್ದಾರೆ. ದುರ್ಘಟನೆ ನಡೆಸಲು ಪ್ಲಾನ್ ಮಾಡುತ್ತಿರುಬಹುದೆಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ಹರಿಪ್ರಸಾದ್ ಅವರನ್ನು ಬಂಧಿಸಿಬೇಕು. ಮುಸ್ಲಿಂರನ್ನು ಆತಂಕಕ್ಕೆ ತಳ್ಳಿ ಇವರು ಮುಸ್ಲಿಂ ಮತ ತೆಗೆದುಕೊಳ್ಳುವುದಾ.? ರಾಮಮಂದಿರ ಉದ್ಘಾಟನೆಯನ್ನು ಇಡೀ ಮುಸ್ಲಿಂ ಸಮುದಾಯ ಸ್ವಾಗತಿಸುತ್ತಿದೆ ನಿಮಗೇನಾಗಿದೆ ರೋಗ ಎಂದು ಹರಿಹಾಯ್ದರು.
ಇನ್ನು ಏನೋ ಹುನ್ನಾರ ಇದ್ದು, ಹರಿಪ್ರಸಾದ್ ಅವರನ್ನು ಎಚ್ಚರಿಕೆಯಿಂದ ನಿಗಾ ಇಡಬೇಕು. ಉದ್ಘಾಟನೆ ತನಕ ಇವರನ್ನು ಬಂಧನದಲ್ಲಿಡಬೇಕು ಎಂದು ಆಗ್ರಹಿಸಿದರು.
ಯತೀಂದ್ರ ಸಿದ್ದರಾಮಯ್ಯ ಕಾಲಜ್ಞಾನಿ ಥರಾ ಮಾತನಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ಗಿಮಿಕ್ ಎಂದಿದ್ದಾರೆ. ಭಾರತದ 140 ಕೋಟಿ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ನಿಮ್ಮೂರಲ್ಲೇ ರಾಮಮಂದಿರ ಕಟ್ಟಿದರಲ್ಲಾ ಅದು ಗಿಮಿಕ್ಕಾ.? ಸಿದ್ದರಾಮಯ್ಯ ರಾಮಭಕ್ತ ಎಂದು ಹೇಳುತ್ತಾರಲ್ಲಾ ಅದು ಗಿಮಿಕ್ಕಾ.? ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು. ರಾಮಮಂದಿರ ಉದ್ಘಾಟನೆಯನ್ನು ಜಗತ್ತಿನ ಯಾವ ಶಕ್ತಿಯೂ ತಡೆಗಟ್ಟಲು ಸಾಧ್ಯವಿಲ್ಲ. ಒಂದು ಕಾಗೆ ಕೂಡ ಅಲುಗಾಡಲಾಗಲ್ಲ, ಆ ರೀತಿ ರಾಮಭಕ್ತರು ಕೆಲಸ ಮಾಡುತ್ತಿದ್ದಾರೆ ಎಂದರು.












Click it and Unblock the Notifications