ಬಾಳೆ ಬೆಳೆಗಾರರಿಗೆ ಕಳ್ಳರ ಕಾಟ: ಬೆಲೆ ಹೆಚ್ಚಾಗುತ್ತಿದ್ದಂತೆ ಫಸಲಿಗೆ ಕನ್ನ
ಚಾಮರಾಜನಗರ, ನವೆಂಬರ್ 7: ಚಾಮರಾಜನಗರದ ಜಿಲ್ಲೆಯ ರೈತರಿಗೆ ಹೊಸ ಸಮಸ್ಯೆ ಎದುರಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಕಾಡು ಪ್ರಾಣಿಗಳ ಸಮಸ್ಯೆಯ ನಡುವೆ ರೈತರಿಗೆ ಕಳ್ಳರ ಕಾಟವು ಹೆಚ್ಚಾಗಿದ್ದು ಚಾಮರಾಜನಗರದ ವಿವಿಧೆಡೆ ಕಂಡಕಂಡಲ್ಲಿ ಕಳ್ಳರು ಬಾಳೆ ಫಸಲು ಕದಿಯುತ್ತಿದ್ದಾರೆ.
ಬರ ಹಾಗೂ ಮಳೆ ಜೊತೆ ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿದ ರೈತರಿಗೆ ಈಗ ಕಳ್ಳರ ಸಂಕಷ್ಟ ಎದುರಾಗಿದೆ. ಚಾಮರಾಜನಗರ ತಾಲೂಕಿನ ಬೇಡರಪುರ ಹಾಗೂ ಹೆಗ್ಗೋಠಾರ ಗ್ರಾಮದಲ್ಲಿ ಬಾಳೆ ಕಟಾವು ಮಾಡಲಾಗಿದೆ. ಬೇಡರಪುರ ಗ್ರಾಮದ ಮೂರ್ತಿ ಎಂಬವರ ಜಮೀನಿನಲ್ಲಿ 300 ಕ್ಕೂ ಹೆಚ್ಚು ಬಾಳೆಗೊನೆಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಸಮಗ್ರ ಯೋಜನೆ: ವಿ.ಸೋಮಣ್ಣ
ಬಾಳೆ ಬೆಳೆಗೆ ಬೆಲೆ ಬರುತ್ತಿದ್ದಂತೆ ಕಳ್ಳರ ಕಾಟ ಹೆಚ್ಚಾಗಿದೆ. ಖದೀಮರು ರಾತ್ರೋರಾತ್ರಿ ಕನ್ನ ಹಾಕುತ್ತಿದ್ದಾರೆ. ಚಾಮರಾಜನಗರದ ರೈತರು ಕಳ್ಳರ ಕಾಟದಿಂದ ಹೈರಾಣಾಗಿ ಹೋಗಿದ್ದು, ರೈತರ ಕಷ್ಟದ ಬಗ್ಗೆ ಪೊಲೀಸರು ಗಮನ ಹರಿಸಬೇಕಿದೆ.
ಈರುಳ್ಳಿ ಮೂಟೆಯೊಳಗೆ 202 ಕ್ಯಾನ್ ಸ್ಪಿರಿಟ್: ಇಬ್ಬರ ಬಂಧನ
ಚಾಮರಾಜನಗರ: ಈರುಳ್ಳಿ ಮೂಟೆ ಜೊತೆ ಮದ್ಯಕ್ಕೆ ಬಳಸುವ ಸ್ಪಿರಿಟ್ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ನಲ್ಲಿ ಬಂಧಿಸಲಾಗಿದೆ.
ಕೇರಳ ಮೂಲದ ಹರಿ ಹಾಗೂ ವಿನೋದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಹರಿ ಹಾಗೂ ವಿನೋದ್ ಈಚರ್ ವಾಹನದಲ್ಲಿ ಈರುಳ್ಳಿ ಸಾಗಿಸುವ ನೆಪದಲ್ಲಿ ಸ್ಪಿರಿಟ್ ಸಾಗಾಟ ಮಾಡಲು ಯತ್ನಿಸಿದ್ದಾರೆ. ಆರೋಪಿಗಳು ಈರುಳ್ಳಿ ಮೂಟೆಯೊಳಗೆ 202 ಸ್ಪಿರಿಟ್ ಕ್ಯಾನ್ಗಳನಿರಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಚಾಮರಾಜನಗರ ಪೊಲೀಸರು ಪಿಎಸ್ಐ ಆನಂದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 7 ಸಾವಿರ ಲೀಟರ್ ಸ್ಪಿರಿಟ್ ಹಾಗೂ ಈಚರ್ ವಾಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಕೇರಳಕ್ಕೆ ಸ್ಪಿರಿಟ್ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ರಸ್ತೆ ಅಪಘಾತ: ಪೊಲೀಸರಿಗೆ ಗಂಭೀರ ಗಾಯ
ಚಾಮರಾಜನಗರ: ಬೈಕ್ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಎಎಸ್ಐ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಚಾಮರಾಜನಗರ ತಾಲೂಕಿನ ಉಡಿಗಾಲ ಸಮೀಪ ನಡೆದಿದೆ.
ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಮಲ್ಲಿಕಾರ್ಜುನ ಹಾಗೂ ತೆರಕಣಾಂಬಿ ಪೊಲೀಸ್ ಠಾಣೆಯ ಎಎಸ್ಐ ಮಹದೇವಸ್ವಾಮಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಬಾಳೆಕಾಯಿ ತುಂಬಿಕೊಂಡು ತೆರಳುತ್ತಿದ್ದ ಪಿಕ್ ಅಪ್ ವಾಹನ ಪೊಲೀಸರ ಬೈಕ್ಗೆ ಡಿಕ್ಕಿಯಾಗಿದೆ. ಘಟನೆ ಬಳಿಕ ಪಿಕ್ ಅಪ್ ವಾಹನ ಚಾಲಕ ಅಪಘಾತ ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.