ಚಾಮರಾಜನಗರದ ಬ್ರಹ್ಮ ರಥಕ್ಕೆ ಬೆಂಕಿ ಹಾಕಿದ ಆರೋಪಿ ಸೆರೆ
ಚಾಮರಾಜನಗರದ ಚಾಮರಾಜೇಶ್ವರ ರಥಕ್ಕೆ ಬೆಂಕಿ ಇಟ್ಟ ಪ್ರಕರಣದಲ್ಲಿ ಪಟ್ಟಣದ ಉಪ್ಪಾರ ಬಡಾವಣೆಯ ಮೋಹನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಆತನ ಜತೆಗೆ ಇನ್ನೂ ಕೆಲವರು ಶಾಮೀಲಾಗಿರುವ ಶಂಕೆ ಇದ್ದು, ಪೊಲೀಸರ ತನಿಖೆ ಮುಂದುವರಿದಿದೆ
ಚಾಮರಾಜನಗರ, ಫೆಬ್ರವರಿ 23: ಭಾನುವಾರ ಮುಂಜಾನೆ ಚಾಮರಾಜನಗರದ ಚಾಮರಾಜೇಶ್ವರ ಬ್ರಹ್ಮರಥಕ್ಕೆ ಬೆಂಕಿ ಹಾಕಿ ಇಡೀ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಪಟ್ಟಣದ ಉಪ್ಪಾರ ಬಡಾವಣೆಯ ಮೋಹನ್ ಕುಮಾರ್ (35 ) ಬಂಧಿತ ಆರೋಪಿ.
ಪ್ರಕರಣದಲ್ಲಿ ಈತ ಮಾತ್ರವಲ್ಲದೆ ಇನ್ನಿತರರು ಭಾಗಿಯಾಗಿರುವ ಸಂಶಯವಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಭಾನುವಾರ ಬೆಳಗಿನ ಜಾವ ದೇವಾಲಯ ಆವರಣದಲ್ಲಿ ನಿಲ್ಲಿಸಿದ್ದ ಚಾಮರಾಜೇಶ್ವರ ಬ್ರಹ್ಮರಥ ಬೆಂಕಿ ಹೊತ್ತಿ ಉರಿಯತೊಡಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದರು. ಆದರೂ ರಥ ಭಾಗಶಃ ಸುಟ್ಟು ಹೋಗಿತ್ತು.[ಚಾಮರಾಜೇಶ್ವರ ರಥಕ್ಕೆ ಬೆಂಕಿ, ಫೆ.20ರಂದು ಚಾಮರಾಜನಗರ ಬಂದ್]
ಈ ಘಟನೆಯಿಂದ ಚಾಮರಾಜನಗರದಲ್ಲಿ ಉದ್ವಿಗ್ನ ಪರಿಸ್ಥಿತಿಯುಂಟಾಗಿ ಬಂದ್ ಹಾಗೂ ಪ್ರತಿಭಟನೆಗಳು ನಡೆದಿದ್ದವು. ಹಿಂದೂಪರ ಸಂಘಟನೆಗಳು ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರ ಮೇಲೆ ಒತ್ತಡ ತಂದಿದ್ದವು. ಘಟನೆ ನಡೆದ ಕ್ಷಣದಿಂದಲೇ ಚಾಮರಾಜನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚನೆಯಾಗಿ, ತನಿಖೆ ಚುರುಕುಗೊಂಡಿತ್ತು. ಈ ಮಧ್ಯೆ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದರು. ಸಚಿವರ ಆದೇಶದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿ ಮೋಹನ್ ಕುಮಾರ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ]
ಬಂಧಿತ ಆರೋಪಿ ಮೋಹನ್ ಕುಮಾರ್ ನಗರಸಭೆಯ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ. ತಮ್ಮದೇ ಸಮುದಾಯದ ವ್ಯಕ್ತಿ ಕೃತ್ಯ ಎಸಗಿದ್ದು, ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಇರಿಸು ಮುರಿಸು ತಂದೊಡ್ಡಿದೆ. ಆರೋಪಿ ರಥಕ್ಕೆ ಬೆಂಕಿ ಹಚ್ಚಲು ಕಾರಣವೇನು, ಆತನೊಂದಿಗೆ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.












Click it and Unblock the Notifications