ವಿಶೇಷ ವರದಿ: ಮಹದೇಶ್ವರ ಬೆಟ್ಟದಲ್ಲಿ ಜಟಾಪಟಿ ನಡೆಯುತ್ತಿರುವುದೇಕೆ?
ಚಾಮರಾಜನಗರ, ಜೂನ್ 26: ಕೋವಿಡ್ ಕೇಂದ್ರಗಳಿಗೆ ಕರ್ತವ್ಯಕ್ಕೆ ನಿಯೋಜಿಸಿದ್ದ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಇಪ್ಪತ್ತನಾಲ್ಕು ಮಂದಿ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ವೇತನ ಕೈಗೆ ಬಂದಿಲ್ಲವಂತೆ. ಈ ವಿಚಾರದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ನೌಕರರ ಸಂಘದ ಅಧ್ಯಕ್ಷರ ವಿರುದ್ಧ ಜಟಾಪಟಿ ಆರಂಭವಾಗಿದೆ.
ಇಷ್ಟಕ್ಕೂ 24 ಮಂದಿಗೆ ಏಕೆ ವೇತನ ಸಿಕ್ಕಿಲ್ಲ ಎಂಬುದನ್ನು ನೋಡುತ್ತಾ ಹೋದರೆ ಒಂದಷ್ಟು ವಿಚಾರಗಳು ಹೊರಬರುತ್ತವೆ. ಅದೇನೆಂದರೆ ಜಿಲ್ಲೆಯಾದ್ಯಂತದ ಕೋವಿಡ್ ಸೇವಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಮಹದೇಶ್ವರ ಬೆಟ್ಟ ಪ್ರಾಧಿಕಾರದಿಂದ 111 ಮಂದಿ ನೌಕರರನ್ನು ನಿಯೋಜನೆಗೊಳಿಸಲಾಗಿತ್ತು. ಅವರ ಪೈಕಿ 24 ಮಂದಿ ನೌಕರರು ಚಾಮರಾಜನಗರದ ಕೋವಿಡ್ ಸೇವಾ ಕೇಂದ್ರದಲ್ಲಿ ಆಕ್ಸಿಜನ್ ದುರಂತದಲ್ಲಿ ಸೋಂಕಿತರು ಸಾವಿಗೀಡಾದ ಸಂದರ್ಭದಲ್ಲಿ ಹೆದರಿ ಹೇಳದೆ ಕೇಳದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು.

ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಕರ್ತವ್ಯಕ್ಕೆ ಹಾಜರು
ಕರ್ತವ್ಯ ವಿಮುಖರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಆದೇಶಿಸಿದ ನಂತರ ಒಂದು ವಾರ ವಿಳಂಬವಾಗಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜುರವರನ್ನು ನೇರವಾಗಿ ಭೇಟಿ ಮಾಡಿ ಅವರ ಸಲಹೆ ಮತ್ತು ಸೂಚನೆಯ ಮೇರೆಗೆ ಜಿಲ್ಲಾಧಿಕಾರಿಗಳ ಬಳಿ ತೆರಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು.

ಜಯವಿಭವಸ್ವಾಮಿ ಅವರ ವಿರುದ್ಧವೇ ಆರೋಪ
ಆದರೆ, ಈ ನೌಕರರಿಗೆ ಇನ್ನೂ ವೇತನವಾಗಿಲ್ಲವಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನೌಕರರ ಸಂಘದ ಅಧ್ಯಕ್ಷ ಮಹದೇವಪ್ರಸಾದ್ ನೇರವಾಗಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರ ವಿರುದ್ಧವೇ ಆರೋಪ ಮಾಡುತ್ತಿದ್ದು, ಈ ನೌಕರರು ತಮ್ಮ ಬಳಿ ಬರಲಿಲ್ಲವೆಂಬ ಕಾರಣವನ್ನೇ ಮುಂದಿಟ್ಟುಕೊಂಡು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದಂತೆ ಸಾಮಾನ್ಯ ಸಿಬ್ಬಂದಿಗಳ ವಿರುದ್ಧ ಸೇಡಿಗೆ ನಿಂತಿದ್ದಾರೆ.
"ಈಗ ಕಾರ್ಯದರ್ಶಿ ಜಯವಿಭವಸ್ವಾಮಿರವರು ವೇತನ ಬಿಡುಗಡೆಗೊಳಿಸದ ಕಾರಣ ಮೊದಲೇ ಕೋವಿಡ್ ಸಂಕಷ್ಟದಲ್ಲಿ ಬಳಲುತ್ತಿರುವ ಬಡ ಸಿಬ್ಬಂದಿಗಳ ಕುಟುಂಬ ಜೀವನ ನಿರ್ವಹಣೆಗಾಗಿ ಕಷ್ಟಪಡುವಂತಾಗಿದೆ,'' ಎಂದು ಆರೋಪಿಸಿದ್ದಾರೆ.
ಮತ್ತೊಂದು ಸಂಘವನ್ನು ಹುಟ್ಟು ಹಾಕುವ ಪ್ರಯತ್ನ
ಈ ಕುರಿತಂತೆ ಇನ್ನಷ್ಟು ಮಾಹಿತಿ ನೀಡಿರುವ ಅವರು, "ಕೋವಿಡ್ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ನಿಯೋಜಿಸಿರುವುದರಿಂದ ಹಾಗೂ ವಿಪತ್ತು ನಿರ್ವಹಣಾ ನಿಧಿಯಿಂದ ವೇತನ ನೀಡಲು ಅವಕಾಶವಿಲ್ಲದ ಕಾರಣ ಪ್ರಾಧಿಕಾರದಿಂದಲೇ ವೇತನ ಪಾವತಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜೂ.10ರಂದು ಹಾಗೂ ಕಾರ್ಮಿಕ ಇಲಾಖೆಯಿಂದ ಆದೇಶ ಬಂದಿದ್ದರೂ ಸಹ ಅದ್ಯಾವುದನ್ನು ಪರಿಗಣಿಸದೆ ಸರ್ವಾಧಿಕಾರಿ ಧೋರಣೆ ಅನುಸರಿಸಿ ಸಾಮಾನ್ಯ ವರ್ಗದವರಿಗೆ ಕಿರುಕುಳ ನೀಡುವುದು ಎಷ್ಟು ಮಟ್ಟಿಗೆ ಸರಿ,'' ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಮಹದೇಶ್ವರ ಬೆಟ್ಟ ಪ್ರಾಧಿಕಾರದಲ್ಲಿ ಹಾಲಿ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನೌಕರರ ಸಂಘ ಚಾಲನೆಯಲ್ಲಿದ್ದು, ಅದು ನೌಕರರ ಅಭಿವೃದ್ಧಿಗೆ ಬರುಗೆ ಶ್ರಮಿಸುತ್ತಿದೆ. ಆದರೆ ಈ ನಡುವೆ ಅಧಿಕಾರಿಯೊಬ್ಬರು ತಮಗೆ ಬೇಕಾದ ನೌಕರರ ಗುಂಪನ್ನು ಎತ್ತಿಕಟ್ಟಿ ಮತ್ತೊಂದು ಸಂಘವನ್ನು ಹುಟ್ಟು ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.

ನೌಕರರಿಗೆ ಆಮಿಷ
"ಆ ನೌಕರರಿಗೆ ಆಮಿಷವೊಡ್ಡಿ ತಮ್ಮ ಪರವಾಗಿ ಬಂದವರಿಗೆ ನೌಕರಿಯನ್ನು ಖಾಯಂಗೊಳಿಸುವುದಾಗಿಯೂ ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸುವುದಾಗಿಯೂ ಸಂಘ ಸ್ಥಾಪನೆ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳಿಗೆ ಎಷ್ಟು ಲಕ್ಷ ರೂ. ಬೇಕಾದರೂ ತಾವೇ ಭರಿಸುವುದಾಗಿಯೂ ಪುಸಲಾಯಿಸಿ ಮತ್ತೊಂದು ಸಂಘವನ್ನು ಅಸ್ಥಿತ್ವಕ್ಕೆ ತರಲು ಹುನ್ನಾರ ನಡೆಸುತ್ತಿದ್ದಾರೆ,'' ಎಂಬ ಆರೋಪ ಮೂಲ ಸಂಘದ ಕಡೆಯಿಂದ ಕೇಳಿ ಬರುತ್ತಿದೆ.
ಇನ್ನಾದರೂ ಚಾಮಾರಾಜನಗರ ಜಿಲ್ಲಾಡಳಿತ ಇತ್ತ ಗಮನಹರಿಸಿ ಸೂಕ್ತ ತನಿಖೆ ನಡೆಸಿ ಅಧಿಕಾರಿ ಮತ್ತು ನೌಕರರ ನಡುವಿನ ಜಟಾಪಟಿಗೆ ತೆರೆ ಎಳೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.











Click it and Unblock the Notifications