ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ: 34 ದಿನಗಳಲ್ಲಿ ₹2 ಕೋಟಿ ಸಂಗ್ರಹ
ಚಾಮರಾಜನಗರ, ಡಿಸೆಂಬರ್ 8: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದೆ. ನವೆಂಬರ್ 3, 2022ರಿಂದ ಡಿಸೆಂಬರ್ 6,2022ರವರೆಗೆ ಒಟ್ಟು 34 ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯದಲ್ಲಿ 2 ಕೋಟಿ 59 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೊಲೀಸ್ ಬಂದೋಬಸ್ತ್ನಲ್ಲಿ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೂ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದೆ.
ಕಳೆದೊಂದು ತಿಂಗಳಲ್ಲಿ ಕಾರ್ತಿಕ ಮಾಸ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಕಳೆದ 34 ದಿನಗಳ ಅವಧಿಯಲ್ಲಿ 2 ಕೋಟಿ 59ಲಕ್ಷದ 31ಸಾವಿರದ 472 ರೂಪಾಯಿ ಹಾಗೂ 80 ಗ್ರಾಂ ಚಿನ್ನ ಹಾಗೂ 3.900 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಹುಂಡಿ ಎಣಿಕೆ ಕಾರ್ಯದ ವೇಳೆ, ಶ್ರೀ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಾಟೀಲ್, ದ್ವಿತೀಯ ದರ್ಜೆ ಸಹಾಯಕ ಮಹದೇವಸ್ವಾಮಿ, ಸಿಬ್ಬಂದಿ ಜನಾರ್ದನ್, ಮಲ್ಲಿಕಾರ್ಜುನಪ್ಪ, ನಾಗರಾಜು, ಮಾದೇಶ್ , ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕರ ಹಾಗೂ ಮಹದೇಶ್ವರಸ್ವಾಮಿ ಬೆಟ್ಟ ವೃತ್ತ ನಿರೀಕ್ಷಕ ಬಸವರಾಜು ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ವಾರಾಂತ್ಯದಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದು, ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಪ್ರತಿ ಸೋಮವಾರ ನಡೆಯುವ ಚಿನ್ನದ ರಥ ಸೇವೆ ವೀಕ್ಷಿಸಲು ಭಕ್ತಸಾಗರವೇ ಬೆಟ್ಟಕ್ಕೆ ಹರಿದುಬರುತ್ತಿದ್ದು, ದೇವಾಲಯಕ್ಕೆ ದಿನನಿತ್ಯದ ವಿವಿಧ ಸೇವಗಳನ್ನು ಹೊರತುಪಡಿಸಿ ಹುಂಡಿಯಲ್ಲೇ 2 ಕೋಟಿ ರೂಪಾಯಿ ಆದಾಯ ಬಂದಿದೆ.












Click it and Unblock the Notifications