ಸಿಂಗಪುರಕ್ಕೆ ಹೊರಟ ಚಾಮರಾಜನಗರದ 11 ಪೌರಕಾರ್ಮಿಕರು!
ಚಾಮರಾಜನಗರ, ಜುಲೈ 17 : ಬೀದಿಯನ್ನು ಸ್ವಚ್ಛಗೊಳಿಸಿ ರೋಗ ರುಜಿನಗಳಿಂದ ಕಾಪಾಡುತ್ತಿದ್ದ ಇಲ್ಲಿನ ಪೌರ ಕಾರ್ಮಿಕರ ಪೈಕಿ ಹನ್ನೊಂದು ಮಂದಿಗೆ ಸಿಂಗಪುರಕ್ಕೆ ಹೋಗುವ ಯೋಗವನ್ನು ಕರ್ನಾಟಕ ಸರ್ಕಾರ ಕಲ್ಪಿಸಿದೆ.
ಈ ಪೌರಕಾರ್ಮಿಕರು ಸಿಂಗಪುರಕ್ಕೆ ತೆರಳಿ ಅಲ್ಲಿ ನಡೆಸುವ ಸ್ವಚ್ಛತಾ ಕಾರ್ಯವನ್ನು ನೋಡಿ ಅಧ್ಯಯನ ಮಾಡಿ ಬರಲಿದ್ದಾರೆ. ಚಾಮರಾಜನಗರ ಜಿಲ್ಲೆಯ ಎರಡು ನಗರಸಭೆ ಹಾಗೂ ಒಂದು ಪುರಸಭೆಯ ಒಟ್ಟು 11 ಪೌರ ಕಾರ್ಮಿಕರು ಅಧ್ಯಯನಕ್ಕೆ ತೆರಳುವುದು ಖಚಿತವಾಗಿದೆ. ಈಗಾಗಲೇ ಮೊದಲ ತಂಡ ಸಿಂಗಪುರಕ್ಕೆ ಹೋಗಿ ಬಂದಿದ್ದು, ಎರಡನೇ ತಂಡ ತೆರಳಲಿದೆ.

ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರ ರಾಜ್ಯದ ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸುತ್ತಿದ್ದು, ಅವರಲ್ಲಿ ಚಾಮರಾಜನಗರದ ನಗರಸಭೆಯ ಪೌರಕಾರ್ಮಿಕರಾದ ತಂಗವೇಲು, ನಟರಾಜು, ವರದರಾಜು, ಸಿ.ಪಿ ಮಾದ, ಕೊಳ್ಳೇಗಾಲ ನಗರಸಭೆಯ ಪೌರ ಕಾರ್ಮಿಕರಾದ ಪಿ. ಕುಪ್ಪ, ಕುಪ್ಪ, ರಾಜು ಡಿ. ಮುರುಗ, ಗುಂಡ್ಲುಪೇಟೆ ಪುರಸಭೆಯ ಪೌರಕಾರ್ಮಿಕರಾದ ಚಿಕ್ಕಮಾದ, ರಂಗಸ್ವಾಮಿ, ಮತ್ತಿ ಮೂರ್ತಿ ಕುಮಾರ್ ಅÀವರುಗಳು ಸೇರಿದ್ದಾರೆ.
ಈಗಾಗಲೇ ಸಿಂಗಾಪುರಕ್ಕೆ ತೆರಳುವ ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಯಿಂದಲೇ ಪಾಸ್ಪೋರ್ಟ್ ವೀಸಾ ಹಾಗೂ ಪ್ರಯಾಣ ವೆಚ್ಚವನ್ನು ಭರಿಸಲು ಸರ್ಕಾರ ನಿರ್ದೇಶನ ನೀಡಿದೆ. ಹೀಗಾಗಿ ಚಾಮರಾಜನಗರ ಜಿಲ್ಲಾಡಳಿತವು ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಸೂಕ್ತವಾದ ಆದೇಶ ನೀಡಿ ಸಿಂಗಾಪುರಕ್ಕೆ ಸ್ವಚ್ಛತಾ ಬಗ್ಗೆ ಅಧ್ಯಯನಕ್ಕೆ ತೆರಳುವ ಕಾರ್ಮಿಕರಿಗೆ ಸಕಲ ರೀತಿಯಲ್ಲಿ ಕುಂದು ಬರದಂತೆ ಕ್ರಮ ವಹಿಸಲು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಈಗಾಗಲೇ ಸಿಂಗಾಪುರಕ್ಕೆ ತೆರಳಲಿರುವ ಪೌರ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದ್ದು, ನಗರಸಭೆಯ ಪೌರಾಯುಕ್ತ ರಾಜಣ್ಣ, ಕೊಳ್ಳೇಗಾಲ ನಗರಸಭೆಯ ಪೌರಾಯುಕ್ತ ಲಿಂಗರಾಜು ಹಾಗೂ ಗುಂಡ್ಲುಪೇಟೆ ಪುರಸಭೆಯ ಮುಖ್ಯಾಧಿಕಾರಿ ರಮೇಶ್ ಅವರು ವಿದೇಶದಲ್ಲಿ ಪೌರಕಾರ್ಮಿಕರ ಅಧ್ಯಯನದ ವೇಳೆ ಹೇಗಿರಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ.
ನಗರಸಭೆಪೌರಕಾರ್ಮಿಕರೊಂದಿಗೆ ಪರಿಸರ ಅಭಿಯಂತರೆ ಗಿರಿಜಮ್ಮ, ಪುರಸಭೆ ಪೌರಕಾರ್ಮಿಕರ ಜೊತೆ ಗುಂಡ್ಲುಪೇಟೆ ಮುಖ್ಯಾಧಿಕಾರಿ ರಮೇಶ್ ಕೂಡ ತೆರಳಲಿದ್ದು, ಸಿಂಗಾಪುರದಲ್ಲಿ ಅಧ್ಯಯನ ನಡೆಸಿ ಅಲ್ಲಿನ ಸ್ವಚ್ಛತಾ ಕಾರ್ಯದ ಬಗ್ಗೆ ಇಲ್ಲಿನ ಪೌರಕಾರ್ಮಿಕರಿಗೆ ತಿಳಿಸಲಿದ್ದಾರೆ.












Click it and Unblock the Notifications