Union Budget 2025: ಕೇಂದ್ರ ಬಜೆಟ್ನಲ್ಲಿ ಎಲ್ಪಿಜಿ ಸಬ್ಸಿಡಿ ಹೆಚ್ಚಳದ ಘೋಷಣೆ ಸಾಧ್ಯತೆ
Union Budget 2025: ಕೇಂದ್ರ ಬಜೆಟ್ ಮಂಡನೆಗೆ ಇನ್ನೂ ಕಲೆವು ದಿನಗಳಷ್ಟೇ ಬಾಕಿಯಿವೆ. ಈ ಹಿನ್ನೆಲೆ ಬಹುತೇಕ ಮಂದಿ ಅದರಲ್ಲೂ ಮಧ್ಯಮ ವರ್ಗದವರು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಈ ವಸ್ತುಗಳ ಸಬ್ಸಿಡಿಯನ್ನು ಹೆಚ್ಚಿಸುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2025ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಅವರು ಮಂಡನೆ ಮಾಡಲಿರುವ 8ನೇ ಬಜೆಟ್ ಇದಾಗಲಿದೆ. 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಆಹಾರ, ರಸಗೊಬ್ಬರ ಮತ್ತು ಅಡುಗೆ ಅನಿಲ ಸಿಲಿಂಡರ್ಗೆ ನೀಡುವ ಸಬ್ಸಿಡಿ ಮೊತ್ತವನ್ನು ಶೇಕಡ 8ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಸಂಸತ್ನಲ್ಲಿ ಬಜೆಟ್ ಮಂಡಿಸಲಿದ್ದು, ಸುಮಾರು 4,00,000 ಕೋಟಿ ರೂಪಾಯಿ ಸಬ್ಸಿಡಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಂಪನಿಗಳ ಹೂಡಿಕೆಯೂ ಇಳಿಕೆಯಾಗಿದೆ. ಇದು ಒಟ್ಟು ಆಂತರಿಕ ಉತ್ಪನ್ನದ ನಿಧಾನಗತಿ ಬೆಳವಣಿಗೆಗೆ ಕಾರಣವಾಗಿದೆ.
ಸಬ್ಸಿಡಿ ಪಾಲಿನಲ್ಲಿ ಗ್ರಾಮೀಣ ಪ್ರದೇಶದ ಪಾಲು ಹೆಚ್ಚಿದೆ. ಗ್ರಾಮೀಣ ದಿನಬಳಕೆಯ ವೆಚ್ಚದ ಏರಿಕೆಗೆ ಸಬ್ಸಿಡಿ ಸಹಕಾರಿ ಆಗಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರ ಆಹಾರಕ್ಕೆ 2,00,000 ಕೋಟಿ ರೂಪಾಯಿ ಸಬ್ಸಿಡಿ ನೀಡಿತ್ತು. ಇದನ್ನು ಈ ಬಾರಿ 2.14 ಲಕ್ಷ ಕೋಟಿ ರೂಪಾಯಿಗೆ ಏರಿಸುವ ಸಾಧ್ಯತೆಯಿದೆ. ಅಡುಗೆ ಅನಿಲಕ್ಕೆ 25,000 ಹಾಗೂ ರಸಗೊಬ್ಬರಕ್ಕೆ 1.90 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ನೀಡುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮನೆಗಳಲ್ಲಿ ಅಡುಗೆಗೆ ಬಳಕೆ ಮಾಡುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಪ್ರಸಕ್ತ ಹಣಕಾಸು ವರ್ಷದ ಬಹುತೇಕ ಅವಧಿಯಲ್ಲಿ ಅಂತಾರಾಷ್ಟ್ರೀಯ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂನ ತ್ರೈಮಾಸಿಕ ಆದಾಯದ ತೀವ್ರ ಕುಸಿತ ಕಂಡಿದ್ದು, ಇದು ಕಂಪನಿಗಳ ವಾರ್ಷಿಕ ಗಳಿಕೆಗೂ ಹೊಡೆತ ಕೊಟ್ಟಿದೆ.
ಮತ್ತೊದೆಡೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ದೇಶದ ಮಧ್ಯಮ ವರ್ಗಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಹಲವು ಬೇಡಿಕೆಗಳ ಪಟ್ಟಿಯನ್ನು ಇಟ್ಟಿದ್ದಾರೆ. ಮಧ್ಯಮ ವರ್ಗದ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನವದೆಹಲಿ ಮಾಜಿ ಸಿಎಂ, ಮಧ್ಯಮ ವರ್ಗವನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷಿಸಿವೆ ಮತ್ತು ಅವರು ತೆರಿಗೆ ಭಯೋತ್ಪಾದನೆಯ ನಿಜವಾದ ಬಲಿಪಶುಗಳಾಗಿದ್ದಾರೆ ಎಂದು ಹೇಳಿದ್ದಾರೆ.
ಕೆಲವು ಪಕ್ಷಗಳು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ತಮ್ಮ ಮತ ಬ್ಯಾಂಕ್ ಅನ್ನು ಸೃಷ್ಟಿಸಿವೆ ಮತ್ತು ಅವರು ಕೆಲವು ಕೈಗಾರಿಕೋದ್ಯಮಿಗಳಿಗೆ ಹಣವನ್ನು ದಾನ ಮಾಡಲು ಭರವಸೆ ನೀಡುತ್ತಾರೆ. ಈ ನೋಟ್ಬ್ಯಾಂಕ್ ಮತ್ತು ಮತಬ್ಯಾಂಕ್ ನಡುವೆ ಮಧ್ಯಮ ವರ್ಗ ಎಲ್ಲಿಯೂ ಕಾಣುವುದಿಲ್ಲ. ಮಧ್ಯಮ ವರ್ಗವನ್ನು ಅವುಗಳ ನಡುವೆ ಕೀಳಾಗಿ ನೋಡುತ್ತಿದ್ದಾರೆ. ಭಾರತೀಯ ಮಧ್ಯಮ ವರ್ಗವು ತೆರಿಗೆ ಭಯೋತ್ಪಾದನೆಯ ಬಲಿಪಶುವಾಗಿದೆ ಎಂಬುದು ಸತ್ಯ ಎಂದು ಕೇಜ್ರಿವಾಲ್ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications